ಮಡಿಕೇರಿ ; ಕೃಷಿ ಚಟುವಟಿಕೆಗೆ ನದಿಪಾತ್ರದಿಂದ ನೀರು ಉಪಯೋಗಿಸುವುದನ್ನು ನಿಷೇಧಿಸಿ ಜಿಲ್ಲಾಡಳಿತ ಹೊರಡಿಸಿರುವ ಆದೇಶವನ್ನು ಕೂಡಲೇ ಹಿಂತೆಗೆದುಕೊಳ್ಳುವಂತೆ ಪಶ್ಚಿಮಘಟ್ಟ ಸಂರಕ್ಷಣಾ ಕಾರ್ಯಪಡೆ ಮಾಜಿ ಅಧ್ಯಕ್ಷ ಶಾಂತೇಯಂಡ ರವಿ ಕುಶಾಲಪ್ಪ ಒತ್ತಾಯಿಸಿದ್ದಾರೆ.
ರಾಜ್ಯದಲ್ಲಿ ಬರದ ಛಾಯೆ ಆವರಿಸಿದೆ. ಇದಕ್ಕೆ ಕೊಡಗು ಜಿಲ್ಲೆ ಕೂಡ ಹೊರತಾಗಿಲ್ಲ. ಇದೆಲ್ಲರ ಮಧ್ಯೆ ಗಾಯದ ಮೇಲೆ ಬರೆ ಎಳೆದಂತೆ, ಕಾವೇರಿ ನದಿ ಪಾತ್ರದ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಸಿಕೊಳ್ಳುವುದನ್ನು ನಿಷೇಧಿಸಿ ಜಿಲ್ಲಾಡಳಿತ ಅದೇಶ ಹೊರಡಿಸಿದೆ.
ಈ ನಿಟ್ಟಿನಲ್ಲಿ ಕೆಲವು ರೈತರ ಪಂಪ್ ಸೆಟ್ ಗಳನ್ನೂ ಕೂಡ ವಶಪಡಿಸಿಕೊಳ್ಳಲಾಗಿದೆ. ಕಾಫಿ ಕೊಡಗು ಜಿಲ್ಲೆಯ ರೈತರ ಜೀವನಾಧಾರಿತ ಬೆಳೆಯಾಗಿದ್ದು, ಕಾಫಿ ಹೂವು ಅರಳುವ ಮಾರ್ಚ್ ಹಾಗೂ ಏಪ್ರಿಲ್ನಲ್ಲಿ ಬೆಳೆಗೆ ನೀರು ಹಾಯಿಸಲು ಜಿಲ್ಲಾಡಳಿತ ತಡೆ ಒಡ್ಡುತ್ತಿರುವುದರಿಂದ ರೈತರ ಪರಿಸ್ಥಿತಿ ಶೋಚನೀಯ ಮಟ್ಟಕ್ಕೆ ತಲುಪಿದೆ. ಇನ್ನೊಂದು ಕಡೆ, ಜಿಲ್ಲೆಯಲ್ಲಿ ಅವ್ಯಾಹತವಾಗಿ ನಡೆಯುತ್ತಿರುವ ಪ್ರವಾಸೋದ್ಯಮಕ್ಕೆ ಜಿಲ್ಲಾಡಳಿತ ಕಡಿವಾಣ ಹಾಕಿಲ್ಲ, ಬದಲಾಗಿ ಕೆಲವೊಂದು ಪಟ್ಟಭದ್ರ ಹಿತಾಸಕ್ತಿಗಳ ಕೈಗೊಂಬೆಯಂತೆ ಜಿಲ್ಲಾಡಳಿತವೆ ಖುದ್ದಾಗಿ ಮುಂದೆ ನಿಂತು ಅತಿಥಿ ಗೃಹಗಳಿಗೆ ನಿರಂತರವಾಗಿ ನೀರನ್ನು ಹರಿಸುತ್ತಿದೆ. ಜಿಲ್ಲೆಯ ರೈತರ ಹಿತ ಕಾಯುವ ನಿಟ್ಟಿನಲ್ಲಿ ಈಗಾಗಲೇ ಹೊರಡಿಸಿರುವ ಆದೇಶವನ್ನು ಜಿಲ್ಲಾಡಳಿತ ಕೂಡಲೇ ಹಿಂಪಡೆಯುಬೇಕು. ಇಲ್ಲವಾದಲ್ಲಿ ಉಗ್ರ ಹೋರಾಟ ನಡೆಸಬೇಕಾಗುತ್ತದೆ ಒತ್ತಾಯಿಸಿದರು.
ಫೋಟೋ 24 ಎಂಡಿಕೆ 14 ;ರವಿ ಕುಶಾಲಪ್ಪ