ನಟ ರವಿಚಂದ್ರನ್ ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ತೊಡಗಿಕೊಂಡಿದ್ದು, ನಿರ್ಮಾಪಕನಾಗಿ, ನಟನಾಗಿ ಗಮನ ಸೆಳೆದಿದ್ದಾರೆ. ನಿರ್ಮಾಪಕನಾಗಿ ಅವರು ಕೆಲವೊಮ್ಮೆ ಕೈ ಸುಟ್ಟಿಕೊಂಡಿದ್ದು ಈ ವಿಚಾರದ ಬಗ್ಗೆ ಕೊಪ್ಪಳದ ‘ಕನಕಗಿರಿ ಉತ್ಸವ ದಲ್ಲಿ ರವಿಚಂದ್ರನ್ ಮಾತನಾಡಿದರು. 80ರ ದಶಕದಲ್ಲಿ ನನ್ನನ್ನು ತಡೆಯೋರು ಯಾರೂ ಇರಲಿಲ್ಲ. ಪ್ರೇಮಲೋಕ, ರಣಧೀರ್ ಸಿನಿಮಾ ಗೆದ್ದಿತು. ಶಾಂತಿ ಕ್ರಾಂತಿ ಗೆಲ್ಲೋದಿಲ್ಲ ಎಂದು ಗೊತ್ತಿದ್ದೂ ನಾವು ಸಿನಿಮಾ ಮಾಡಿದೆವು. ಅಂದಿನ ಕಾಲಕ್ಕೆ 10 ಕೋಟಿ ರೂಪಾಯಿ ಕಳೆದುಕೊಂಡಿದ್ದೆ. ಹಣ ಕಳೆದುಕೊಂಡ ಬಗ್ಗೆ ನನಗೆ ಬೇಸರ ಇಲ್ಲ. ಇಂದು ಜೇಬು ಹಾಗೂ ಹೃದಯ ಎರಡೂ ಖಾಲಿ ಇದೆ. ಹೃದಯ ಏಕೆ ಖಾಲಿ ಇದೆ ಎಂದರೆ ಜನರ ಪ್ರೀತಿಯನ್ನು ತುಂಬಿಸಿಕೊಳ್ಳುತ್ತಲೇ ಇರುತ್ತೇನೆ ಎಂದು ಹೇಳಿದರು.