ಮಂಡ್ಯ : ಇನ್ನು ಮುಂದೆ ನಗರ ವ್ಯಾಪ್ತಿಯೊಳಗೆ ಸಂಚರಿಸುವ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದಿದ್ದರೆ ದಂಡ ವಿಧಿಸುವುದಿಲ್ಲ, ಬದಲಿಗೆ ವಾಹನವನ್ನು ವಶಪಡಿಸಿಕೊಳ್ಳಲಾಗುವುದು. ಯಾವುದೇ ಶಿಫಾರಸುಗಳಿಗೂ ಮಣಿಯುವುದಿಲ್ಲ ಎಂದು ಶಾಸಕ ಪಿ.ರವಿಕುಮಾರ್ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದರು.
ಮಂಗಳವಾರ ಪೊಲೀಸ್ ಇಲಾಖೆ, ನಗರಸಭೆ ಅಧಿಕಾರಿಗಳು, ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಹೆಲ್ಮೆಟ್ ಬಗ್ಗೆ ಹಲವಾರು ವರ್ಷಗಳಿಂದ ಜನರಿಗೆ ಜಾಗೃತಿ ಮೂಡಿಸಲಾಗಿದೆ. ಸಾರ್ವಜನಿಕರ ಸುರಕ್ಷತೆ ದೃಷ್ಟಿಯಿಂದ ಎಲ್ಲರೂ ಹೆಲ್ಮೆಟ್ ಧರಿಸುವುದು ಕಡ್ಡಾಯ. ಯಾವುದೇ ಶಿಫಾರಸ್ಸುಗಳಿಗೂ ಮಣಿಯುವುದಿಲ್ಲ ಎಂದು ನೇರವಾಗಿ ಹೇಳಿದರು.
ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲವಾಗುವಂತೆ ನಗರದ ಆರು ಕಡೆಗಳಲ್ಲಿ ಹೈಟೆಕ್ ಮಾದರಿಯ ವ್ಯವಸ್ಥೆ ಮಾಡಲಾಗುವುದು. ಗುತ್ತಲು ರಸ್ತೆಯ ಕುವೆಂಪು ಶತಮಾನೋತ್ಸವ ಶಾಲೆ ಬಳಿ ಫುಟ್ಪಾತ್ ವ್ಯಾಪಾರಿಗಳಿಗೆ ಮೇಲ್ಚಾವಣಿ, ಬೆಳಕಿನ ವ್ಯವಸ್ಥೆ ಮಾಡಿಕೊಟ್ಟು ಪ್ರಾಯೋಗಿಕವಾಗಿ ಜಾರಿಗೊಳಿಸಲಾಗುವುದು. ಅದು ಯಶಸ್ವಿಯಾದಲ್ಲಿ ಉಳಿದೆಡೆ ಅನುಷ್ಠಾನಕ್ಕೆ ಕ್ರಮ ವಹಿಸಲಾಗುತ್ತದೆ ಎಂದರು.
ಸ್ಟೇಡಿಯಂ ಪಕ್ಕದ ರಸ್ತೆಯನ್ನು ಫುಡ್ಸ್ಟ್ರೀಟ್ ಆಗಿ ಅಭಿವೃದ್ಧಿ ಪಡಿಸಲು ನಿರ್ಧರಿಸಲಾಗಿದೆ. ಸಂಜೆಯ ಸಮಯದಲ್ಲಿ ಮಕ್ಕಳು, ಮಹಿಳೆಯರ ಮನರಂಜನೆಗೆ ಒತ್ತು ನೀಡಲಾಗುವುದು. ಉದ್ಯಾನಗಳಲ್ಲಿ ಕುಡುಕರು ಮತ್ತು ರೌಡಿಗಳ ಹಾವಳಿ ಹೆಚ್ಚುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಇದನ್ನು ಮಟ್ಟ ಹಾಕಲು ಕ್ರಮ ವಹಿಸಲಾಗುವುದು ಎಂದರು.