ಯುವಕರಿಗೆ ಶಾಸಕ ಜಿ.ಡಿ.ಹರೀಶ್ಗೌಡ ಸಲಹೆ
ಹುಣಸೂರು: ದೇಶದ ಸ್ವಾತಂತ್ರ್ಯಕ್ಕಾಗಿ ಜೀವತೆತ್ತ ಮಹನೀಯರು ಭಾರತೀಯತೆಯ ಸಿದ್ಧಾಂತದೊಂದಿಗೆ ಹೋರಾಡಿದ ಪರಿಣಾಮವಾಗಿಯೇ ದೇಶವು ಬ್ರಿಟೀಷರ ಆಳ್ವಿಕೆಯಿಂದ ಮುಕ್ತಿ ಹೊಂದಿತು ಎಂದು ಶಾಸಕ ಜಿ.ಡಿ.ಹರೀಶ್ಗೌಡ ಅಭಿಪ್ರಾಯಪಟ್ಟರು.
ನಗರದ ಮುನೇಶ್ವರ ಕಾವಲ್ ಮೈದಾನದಲ್ಲಿ ಗುರುವಾರ ರಾಷ್ಟ್ರಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಆಯೋಜಿಸಿದ್ದ ೭೮ನೇ ಸ್ವಾತಂತ್ರ್ಯೊತ್ಸವ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿದರು.
ದೇಶಕ್ಕಾಗಿ ಹೋರಾಡಿದ ಮಹನೀಯರ ತ್ಯಾಗ ಬಲಿದಾನಗಳು ಸ್ವಾತಂತ್ರ್ಯ ತಂದುಕೊಟ್ಟಿತು. ಆದರೆ ಇವರೆಲ್ಲರೂ ಯಾವುದೇ ಜಾತಿ ಮತ ಪಂಥವನ್ನು ಆಧರಿಸಿ ಹೋರಾಡಲಿಲ್ಲ. ದೇಶಭಕ್ತರಾಗಿ, ದಾಸ್ಯದ ವಿಮೋಚನೆಗಾಗಿ ಹೋರಾಟ ನಡೆಸಿದರು. ಅವರ ಹೋರಾಟ, ಪರಿಶ್ರಮ ಮತ್ತು ಬಲಿದಾನಗಳು ಇಂದಿಗೂ ಚಿರಂತನ ಮತ್ತು ನಮಗೆಲ್ಲರಿಗೂ ಸ್ಫೂರ್ತಿದಾಯಕವಾಗಿದೆ. ಸ್ವಾತಂತ್ರ್ಯೊತ್ಸವದ ಆಚರಣೆಯ ಮೂಲ ಉದ್ದೇಶವೇ ಆಗಿಹೋದ ದೇಶಭಕ್ತರ ಪುಣ್ಯಕಾರ್ಯವನ್ನು ಸ್ಮರಿಸಿ ಅವರಿಂದ ಪ್ರಭಾವಿತರಾಗುವುದಾಗಿದೆ. ಇಂದಿನ ಯುವಸಮೂಹ ದೇಶಕ್ಕಾಗಿ ಪ್ರಾಣತೆತ್ತ ನೇತಾರರ ಜೀವನಚರಿತ್ರೆ ಓದಿ ಅರಿತುಕೊಳ್ಳಬೇಕೆಂದರು.
ಉಪವಿಭಾಗಾಧಿಕಾರಿ ಎಚ್.ಬಿ.ವಿಜಯಕುಮಾರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶಕ್ಕಾಗಿ ದುಡಿದ ಹಿರಿಯರ ತ್ಯಾಗ ಬಲಿದಾನಗಳನ್ನು ನಾವು ಮರೆಯಬಾರದು ಎಂದರು. ತಹಸೀಲ್ದಾರ್ ಮಂಜುನಾಥ್, ಡಿವೈಎಸ್ಪಿ ಗೋಪಾಲಕೃಷ್ಣ, ಇನ್ಸ್ಪೆಕ್ಟರ್ ಸಂತೋಷ್ ಕಶ್ಯಪ್, ಕ್ಷೇತ್ರ ಶಿಕ್ಷಣಾಧಿಕಾರಿ ಮಹದೇವ, ರಾಷ್ಟ್ರಯ ಹಬ್ಬಗಳ ಆಚರಣ ಸಮಿತಿ ಸದಸ್ಯರು ಹಾಗೂ ನಾಗರಿಕರು, ವಿದ್ಯಾರ್ಥಿಗಳು ಬಾಗವಹಿಸಿದ್ದರು.