ಬೆಂಕಿಯಿಂದ ಬಾಣಲೆಗೆ ಕರಡಿಗೋಡು, ಗುಹ್ಯ ಜನ । ಪಾಳುಬಿದ್ದ ಗದ್ದೆಯಲ್ಲಿ ಸಂತ್ರಸ್ತರಿಗೆ ಜಾಗನೀಡುವುದು ವಿಪರ್ಯಾಸ
ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ
ಬೆಂಕಿಯಿಂದ ಬಾಣಲೆಗೆ ಎಂಬಂತೆ ಪ್ರಕೃತಿ ವಿಕೋಪಕ್ಕೆ ಸಿಲುಕಿರುವ ಕರಡಿಗೋಡು, ಗುಹ್ಯ ಸಂತ್ರಸ್ತರ ಪರಿಸ್ಥಿತಿಯಾಗಿದೆ. ಕೊಡಗು ಜಿಲ್ಲಾಡಳಿತ ಪ್ರಸ್ತುತ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಉದ್ದೇಶಿಸಿರುವ ಖಾಸಗಿ ಜಾಗ ಅರಣ್ಯ ಪ್ರದೇಶದ ಮಧ್ಯದಲ್ಲಿದೆ. ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಸ್ತಾನ, ಕಾಡಾನೆಗಳ ಕೇಂದ್ರ ಸ್ಥಾನ. ಪಾಳುಬಿದ್ದ ಗದ್ದೆಯನ್ನು ಖರೀದಿಸಿ, ಸಂತ್ರಸ್ತರಿಗೆ ನೀಡಲು ಕೊಡಗು ಜಿಲ್ಲಾಡಳಿತ ಮುಂದಾಗಿರುವುದು ವಿಪರ್ಯಾಸ.
೨೦೧೬ರಲ್ಲಿ ಸಂಭವಿಸಿದ ಪ್ರಕೃತಿ ವಿಕೋಪಕ್ಕೆ ಸಿದ್ದಾಪುರ ಗ್ರಾಪಂ ವ್ಯಾಪ್ತಿಯ ಕರಡಿಗೋಡು, ಗುಹ್ಯ ಗ್ರಾಮದ ಜನತೆ ಸಿಲುಕಿದ್ದರು. ಜೀವನದಿ ಕಾವೇರಿ ಉಕ್ಕಿ ಹರಿದು, ಪಾಪದ ಮನೆಗಳನ್ನು ಕೊಚ್ಚಿಕೊಂಡು ಹೋಯಿತು. ನದಿ ಬದಿಯಲ್ಲಿ ಬದುಕು ಕಟ್ಟಿಕೊಂಡಿದ್ದ ಶ್ರಮಿಕ ವರ್ಗದವರು ಬೀದಿಗೆ ಬೀಳುವಂತಾಯಿತು. ಅಮ್ಮತ್ತಿ ಹೋಬಳಿ ವ್ಯಾಪ್ತಿಯಲ್ಲಿ ಸಂತ್ರಸ್ತರಿಗೆ ನೀಡಲು ಸೂಕ್ತ ಸರ್ಕಾರಿ ಜಾಗ ಇಲ್ಲ ಎಂಬ ಕಾರಣಕ್ಕಾಗಿ ಇದುವರೆಗೂ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ಸಾಧ್ಯವಾಗಿಲ್ಲ. ಬಿ.ಶೆಟ್ಟಿಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗುರುತಿಸಿದ್ದ ಜಾಗ ದೂರದಲ್ಲಿದೆ ಎಂಬ ಕಾರಣಕ್ಕಾಗಿ ಅಲ್ಲಿಗೆ ತೆರಳಲು ಸಂತ್ರಸ್ತರು ನಿರಾಕರಿಸಿದ್ದರು.
ಪ್ರವಾಹ ಪೀಡಿತ ಕಾವೇರಿ ನದಿ ದಡದಲ್ಲಿ ವಾಸವಾಗಿರುವ ಕುಟುಂಬಗಳನ್ನು ಕಾವೇರಿ ನದಿ ದಂಡೆಯ ಪ್ರದೇಶದಿಂದ ಸ್ಥಳಾಂತರಿಸಲು ಮಾಲ್ದಾರೆ ಗ್ರಾಮದ ಸರ್ವೇ ನಂಬರ್ ೭೨/೧೫ ರ ೧೦.೬೦ ಎಕರೆ ಖಾಸಗಿ ಜಾಗ ಖರೀದಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ. ಎರಡು ವರ್ಷದ ಹಿಂದೆ ಈ ಪ್ರಕ್ರಿಯೆ ಪ್ರಾರಂಭವಾಗಿದ್ದು, ಕರಡಿಗೋಡು, ಗುಹ್ಯ ಭಾಗದ ಸಂತ್ರಸ್ತರು ಅಲ್ಲಿಗೆ ತೆರಳಲು ವಿರೋಧ ವ್ಯಕ್ತ ಪಡಿಸುತ್ತಾ ಬಂದಿದ್ದಾರೆ.
ಗುಹ್ಯ, ಕರಡಿಗೋಡು ಗ್ರಾಮದ ಒಟ್ಟು ಜನಸಂಖ್ಯೆ ೭,೯೭೦. ಬಾಧಿತ ಪ್ರದೇಶದ ಜನಸಂಖ್ಯೆ ೭೯೯. ಬಾಧಿಕ ಪ್ರದೇಶದ ಕುಟುಂಬಗಳ ಸಂಖ್ಯೆ ೧೯೩. ಈ ಕುಟುಂಬಗಳಿಗೆ ಅಮ್ಮತ್ತಿ ಹೋಬಳಿ ವ್ಯಾಪ್ತಿಯ ಗ್ರಾಮಗಳಲ್ಲಿ ಸೂಕ್ತ ಪರ್ಯಾಯ ಸರ್ಕಾರಿ ಜಮೀನು ಲಭ್ಯವಿಲ್ಲದರಿಂದ ಖಾಸಗಿ ಜಾಗ ಖರೀದಿ ಪ್ರಕ್ರಿಯೆ ಕೈಗೆತ್ತಿಕೊಳ್ಳಲಾಗಿದೆ. ಕರಡಿಗೋಡು, ಗುಹ್ಯ ಸಂತ್ರಸ್ತರಿಗೆ ನೀಡಲು ಉದ್ದೇಶಿಸಿರುವ ಖಾಸಗಿ ಜಾಗವು ಸಂತ್ರಸ್ತರು ಇರುವ ಜಾಗದಿಂದ ೬ ರಿಂದ ೧೦ ಕಿಲೋಮೀಟರ್ ದೂರದಲ್ಲಿದೆ.
ಪ್ರಸ್ತುತ ಜಾಗದ ಸರ್ಕಾರಿ ದರ ಎಕರೆಗೆ ೪ ಲಕ್ಷ ರೂಪಾಯಿ ಎಂದು ವಿರಾಜಪೇಟೆ ತಾಲೂಕು ಆಡಳಿತ ಜಿಲ್ಲಾಡಳಿತಕ್ಕೆ ವರದಿ ಸಲ್ಲಿಸಿದೆ. ಎರಡು ವರ್ಷದ ಹಿಂದೆ ಪ್ರಸ್ತಾವನೆ ಸಿದ್ಧ ಪಡಿಸುವ ವೇಳೆ ಉಪನೋಂದಣಾಧಿಕಾರಿಯಿಂದ ಪಡೆದ ಮಾರುಕಟ್ಟೆ ದರ ಹಾಗೂ ಕಳೆದ ಮೂರು ಸಾಲಿನ ಮಾರಾಟದ ಅಂಕಿ- ಅಂಶಗಳ ಪ್ರಕಾರ ಎಕರೆಗೆ ೨.೭೫ ಲಕ್ಷ ರೂಪಾಯಿ ನಿಗದಿ ಪಡಿಸ ಲಾಗಿತ್ತು.
ಭೂ ಸ್ವಾಧೀನ ಪ್ರಕ್ರಿಯೆಯಂತೆ ಸರ್ಕಾರದ ವಶಕ್ಕೆ ಪಡೆದುಕೊಳ್ಳಲು -೪-೨೦೨೨ ರಂದು ಕಂದಾಯ ಪರಿವೀಕ್ಷಕರು ಹಾಗೂ ಗ್ರಾಮ ಲೆಕ್ಕಿಗರು ಸ್ಥಳ ಪರಿಶೀಲನೆ ನಡೆಸಿದ್ದರು. ಪುನರ್ವಸತಿಗೆ ಗುರುತಿಸಿರುವ ಜಾಗಕ್ಕೆ ಪಕ್ಕ ರಸ್ತೆ ಸಂಪರ್ಕವಿರುತ್ತದೆ. ಈ ಜಾಗಕ್ಕೆ ಮೂಲ ಸ್ಥಳದಿಂದ ನೇರ ಅಂತರ ೬ ಕಿಲೋಮೀಟರ್ ಆಗಿದ್ದು, ರಸ್ತೆ ಮುಖಾಂತರ ಅಂದಾಜು ೧೦ ಕಿಲೋಮೀಟರ್ ಅಂತರವಿದೆ. ಪುನರ್ವಸತಿಗೆ ಸೂಕ್ತ ಜಾಗ ಎಂದು ವಿರಾಜಪೇಟೆ ತಹಸೀಲ್ದಾರ್ ವರದಿ ಮಾಡಿದ್ದರು.
ಕರಡಿಗೋಡು ನಿವಾಸಿಗಳಾದ ಕೆ.ಡಿ. ಗಣಪತಿ, ಕೆ.ಡಿ. ನಾಣಯ್ಯ, ಸುರೇಶ್ ಸೋಮಯ್ಯ, ವಿಜಯ ಸೋಮಯ್ಯ, ಜಯರಾಮ್ ಉತ್ತಯ್ಯ, ಗಣೇಶ್ ಉತ್ತಯ್ಯ ಹೆಸರಿನಲ್ಲಿ ಈ ಸಾಗು ಜಾಗವಿದೆ.
(ಚಿತ್ರ: ೩ಎಂಡಿಕೆಎ೧- ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕರಡಿಗೋಡು, ಗುಹ್ಯ ಗ್ರಾಮದ ಪ್ರಕೃತಿ ವಿಕೋಪ ಸಂತ್ರಸ್ತರಿಗೆ ಪುರ್ನವಸತಿ ಕಲ್ಪಿಸಲು ಉದ್ದೇಶಿಸಿರುವ ಮಾಲ್ದಾರೆ ಗ್ರಾಮದಲ್ಲಿರುವ ಅಸ್ತಾನ. ಚಿತ್ರ: ೩ಎಂಡಿಕೆಎ೨- ಗೂಗಲ್ ನಕ್ಷೆ.)
======
ಅರಣ್ಯದ ಮಧ್ಯೆ
ಅಸ್ತಾನ ದುಬಾರೆ ಅರಣ್ಯ ವ್ಯಾಪ್ತಿಯ ಮಧ್ಯದಲ್ಲಿರುವ ಪ್ರದೇಶವಾಗಿದೆ. ಮಾಲ್ದಾರೆ ಅರಣ್ಯದೊಳಗಿನಿಂದ ದುಬಾರೆಯತ್ತ ತೆರಳುವ ಮಾರ್ಗದಲ್ಲಿ ಈ ಸ್ಥಳವಿದೆ. ಅರಣ್ಯ ಪ್ರದೇಶದೊಳಗೆ ಇರುವ ರಸ್ತೆ ಮೂಲಕ ಇಲ್ಲಿಗೆ ತೆರಳಬೇಕಾಗಿದೆ. ಮಾಲ್ದಾರೆ- ಬಸವನಹಳ್ಳಿ ಮಾರ್ಗದ ಆಸ್ಥಾನ ಹಾಡಿ ಪ್ರದೇಶದ ಸಮೀಪದಲ್ಲಿಯೇ ಈ ಜಾಗವಿದೆ. ದೊಡ್ಡ ಪ್ರಮಾಣದಲ್ಲಿ ಕಾಡಾನೆಗಳು ಇಲ್ಲಿ ಕಾಣಿಸಿಕೊಳ್ಳುತ್ತವೆ.
ಕಾಡಾನೆ ಸಮಸ್ಯೆಯಿಂದಾಗಿಯೇ ಇಲ್ಲಿರುವ ಖಾಸಗಿ ಜಾಗದಲ್ಲಿಯೂ ಭತ್ತದ ಕೃಷಿ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರಕೃತಿ ವಿಕೋಪ ಸಂತ್ರಸ್ತರಿಗೆ ನೀಡಲು ಉದ್ದೇಶಿಸಿರುವ ಜಾಗದಲ್ಲಿ ಇಪ್ಪತ್ತು ವರ್ಷದ ಹಿಂದೆ ಕೃಷಿ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಕೃಷಿ ಮಾಡಿದ ವ್ಯಕ್ತಿ ನಷ್ಟಕ್ಕೆ ಒಳಗಾಗಿದ್ದರು. ಕಾಡಾನೆ ಸೇರಿದ್ದಂತೆ ವನ್ಯಪ್ರಾಣಿಗಳಿಗೆ ಭತ್ತದ ಕೃಷಿ ತುತ್ತಾಗಿತ್ತು. ಅಲ್ಲಿಂದ ಗದ್ದೆಗಳನ್ನು ಪಾಳುಬೀಡಲಾಗಿದೆ.
ಪಾಳುಬಿದ್ದ ಗದ್ದೆಯೂ ವಾಸಕ್ಕೆ ಯೋಗ್ಯವಾದ ಸ್ಥಳವಲ್ಲ. ಕಾಡಿನ ನೀರು ಈ ತಗ್ಗುಪ್ರದೇಶದಲ್ಲಿ ಶೇಖರಣೆಗೊಳ್ಳುತ್ತವೆ. ಮನೆ ನಿವೇಶನಗಳಾಗಿ ಪರಿವರ್ತನೆ ಮಾಡಿದ್ದರೂ, ವ್ಯತಿರಿಕ್ತ ಪರಿಣಾಮ ಎದುರಾಗಲಿದೆ ಎಂದು ಸ್ಥಳದ ಬಗ್ಗೆ ಸ್ಪಷ್ಟ ಮಾಹಿತಿ ಹೊಂದಿರುವವರು ಹೇಳುತ್ತಾರೆ. ಕರಡಿಗೋಡು, ಗುಹ್ಯ ಭಾಗದ ಸಂತ್ರಸ್ತರನ್ನು ಎಲ್ಲಿಗಾದರೂ ಸಾಗಹಾಕಲು ಪುನರ್ವಸತಿಗೆ ಸೂಕ್ತವಲ್ಲದ ಜಾಗಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂಬ ಟೀಕೆ ವ್ಯಕ್ತವಾಗಿದೆ.
(ಚಿತ್ರ: ೩ಎಂಡಿಕೆಎ೩- ಅಸ್ತಾನ ಜಾಗದ ಆರ್ಟಿಸಿ)
======
ಮಾಲ್ದಾರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ೧೦.೬೦ ಎಕರೆ ಖಾಸಗಿ ಜಾಗ ಖರೀದಿಸುವ ಪ್ರಕ್ರಿಯೆ ನಡೆಯುತ್ತಿದೆ. ಪ್ರಸ್ತುತ ಜಾಗದ ಸರ್ಕಾರಿ ದರ ಎಕರೆಗೆ ೪ ಲಕ್ಷ ರೂಪಾಯಿ ಆಗಿರುತ್ತದೆ. ಆ ಜಾಗದ ಮಾಲೀಕರು ಎಕರೆಗೆ ೧೫ ಲಕ್ಷ ರೂಪಾಯಿ ಕೇಳುತ್ತಿದ್ದಾರೆ. ಸರ್ಕಾರ ತೀರ್ಮಾನ ತೆಗೆದುಕೊಂಡ ಬಳಿಕ ಜಾಗದ ಮಾಲೀಕರೊಂದಿಗೆ ಮಾತುಕತೆ ನಡೆಸಿ ದರದ ಬಗ್ಗೆ ಅಂತಿಮ ನಿರ್ಧಾರಕ್ಕೆ ಬರಲಾಗುವುದು. ರಾಮಚಂದ್ರ, ತಹಸೀಲ್ದಾರ್, ವಿರಾಜಪೇಟೆ.
ಸರ್ಕಾರ ಗುರುತಿಸಿದ ಜಾಗಕ್ಕೆ ಹೋಗುವಂತೆ ಶಾಸಕರು ಹೇಳಿದ್ದಾರೆ. ವಿರಾಜಪೇಟೆ ಕ್ಷೇತ್ರದ ಶಾಸಕರಾಗಿರುವ ಎ.ಎಸ್. ಪೊನ್ನಣ್ಣ ಅವರ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಕಾಡಾನೆ ಸಮಸ್ಯೆ ಅಲ್ಲಿ ಮಾತ್ರ ಇರುವುದಿಲ್ಲ. ಕಾಡಾನೆಗಳು ಕಾಡಿಗಿಂತ ನಾಡಿನಲ್ಲಿಯೇ ಇದೆ. ಡಾ.ಕಸ್ತೂರಿ ರಂಗನ್ ವರದಿಯ ವ್ಯಾಪ್ತಿಯಲ್ಲಿಯೂ ಈ ಪ್ರದೇಶವಿದೆ. ಸರ್ಕಾರ ಎಲ್ಲ ವಿಚಾರಗಳನ್ನು ಗಮನದಲ್ಲಿಟ್ಟುಕೊಂಡು ಅಂತಿಮವಾಗಿ ಆ ಜಾಗವನ್ನೇ ಆಯ್ಕೆ ಮಾಡಿದ್ದಲ್ಲಿ ಅಲ್ಲಿಗೆ ನಾವು ಹೋಗಬೇಕಾಗುತ್ತದೆ. ನದಿ ದಡದಲ್ಲಿ ಬದುಕು ಕೈಯಲ್ಲಿ ಹಿಡಿದುಕೊಂಡು ಬಾಳ್ವೆ ನಡೆಸಿ, ಸಾಕಾಗಿದೆ. ಯಮುನಾ, ಅಧ್ಯಕ್ಷೆ, ಪ್ರಕೃತಿ ವಿಕೋಪ ಸಂತ್ರಸ್ತರ ಹೋರಾಟ ಸಮಿತಿ, ಕರಡಿಗೋಡು.