– ಕೆಎಂಪಿಕೆ ಟ್ರಸ್ಟ್ ವತಿಯಿಂದ ಜಿಲ್ಲಾಡಳಿತಕ್ಕೆ ಮನವಿ
ಪ್ರತಿನಿಧಿ ವರದಿ ಮೈಸೂರು
ನಾಡಹಬ್ಬ ದಸರಾ ಜಂಬೂಸವಾರಿ ಮೆರವಣಿಗೆಯಲ್ಲಿ ಅರ್ಜುನ ಆನೆ ಕುರಿತ ಸ್ತಬ್ದಚಿತ್ರ ಪ್ರದರ್ಶಿಸುವ ಹಾಗೂ ದಸರಾ ವಸ್ತುಪ್ರದರ್ಶನದಲ್ಲಿ ವಿಭಾಗ ಅರಣ್ಯ ಇಲಾಖೆಯಿಂದ ಅರ್ಜುನ ಆನೆಯನ್ನು ಸ್ಮರಣೆ ಮಾಡುವ ನಿಟ್ಟಿನಲ್ಲಿ ನಮ್ಮ ಅರ್ಜುನ ಗ್ಯಾಲರಿ ಸ್ಥಾಪಿಸುವಂತೆ ಕೆಎಂಪಿಕೆ ಟ್ರಸ್ಟ್ ವತಿಯಿಂದ ಮನವಿ ಮಾಡಲಾಯಿತು.
ದಸರಾ ಮಹೋತ್ಸವದಲ್ಲಿ ಹಲವು ವರ್ಷಗಳಿಂದ ಪಾಲ್ಗೊಂಡಿದ್ದ ಅರ್ಜುನ ಆನೆಯು ಸತತ 9 ಬಾರಿ ದಸರೆಯಲ್ಲಿ ಚಿನ್ನದ ಅಂಬಾರಿ ಹೊತ್ತು ಸಾಗಿದ್ದು, ಕಳೆದ ವರ್ಷ ಸಕಲೇಶಪುರ ಸಮೀಪ ನಡೆದ ಕಾಡಾನೆ ಸೆರೆಹಿಡಿಯುವ ಕಾರ್ಯಾಚರಣೆಯ ವೇಳೆ ಸಾವನ್ನಪ್ಪಿತ್ತು. 2019ರಲ್ಲಿ ದಸರಾದಿಂದ ನಿವೃತ್ತಿ ಪಡೆದಿದ್ದ ಅರ್ಜುನ ಕಳೆದ ವರ್ಷದ ದಸರಾದಲ್ಲಿ ನಿಶಾನೆ ಆನೆಯಾಗಿ ಗಜಪಡೆಯನ್ನು ಮುನ್ನಡೆಸಿ ಸೇವೆಸಲ್ಲಿಸಿದೆ. ಹೀಗೆ ಅರ್ಜುನ ಆನೆ ದಸರಾದಲ್ಲಿ ಅಂಬಾರಿ ಹೊತ್ತು ಸಾಗುವ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿತ್ತು. ಇಂತಹ ಆನೆಗೆ ಗೌರವ ಸೂಚಿಸುವುದು ಸರ್ಕಾರದ ಕರ್ತವ್ಯವಾಗಿದ್ದು, ಈ ಹಿನ್ನೆಲೆಯಲ್ಲಿ ಈ ಬಾರಿಯ ದಸರಾ ಮಹೋತ್ಸವದಲ್ಲಿ ಅರ್ಜುನ ಆನೆ ಕುರಿತಂತೆ ಸ್ತಬ್ಧಚಿತ್ರ ಪ್ರದರ್ಶಿಸಬೇಕಿದೆ. ಅಲ್ಲದೇ 90 ದಿನಗಳು ನಡೆಯುವ ದಸರಾ ವಸ್ತುಪ್ರದರ್ಶನದಲ್ಲಿ ಅರಣ್ಯ ಇಲಾಖೆಯಿಂದ ಅರ್ಜುನ ಆನೆ ಬಗ್ಗೆ ಮಾಹಿತಿ ನೀಡಲು ಅರ್ಜುನನ ಭಾವಚಿತ್ರದೊಂದಿಗೆ ನಮ್ಮ ಅರ್ಜುನ ಹೆಸರಿನ ಗ್ಯಾಲರಿ ತೆರೆಯಬೇಕೆಂದು ಮನವಿ ಮಾಡಿದರು. ಈ ಸಂಬಂಧ ಟ್ರಸ್ಟ್ ಸದಸ್ಯರು ಅಪರ ಜಿಲ್ಲಾಧಿಕಾರಿ ಶಿವರಾಜು ಅವರಿಗೆ ಮನವಿ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಕೆ.ಆರ್. ಬ್ಯಾಂಕ್ ಉಪಾಧ್ಯಕ್ಷ ಬಸವರಾಜ್ ಬಸಪ್ಪ, ಮಯೂರ ಕನ್ನಡ ಯುವಕರ ಬಳಗದ ಅಧ್ಯಕ್ಷ ಜಿ.ರಾಘವೇಂದ್ರ, ಸಾಮಾಜಿಕ ಹೋರಾಟಗಾರ ಚರಣ್ ರಾಜ್, ಬೈರತಿ ಲಿಂಗರಾಜು, ಸುಚೇಂದ್ರ, ಚಕ್ರಪಾಣಿ, ಮೋಹನ್ ಕುಮಾರ್, ದುರ್ಗಾ ಪ್ರಸಾದ್, ಜೈ ಭೀಮ್ ಜನಸ್ಪಂದನ ವೇದಿಕೆ ಅಧ್ಯಕ್ಷ ಚೇತನ್ ಕಾಂತರಾಜು ಇತರರಿದ್ದರು.
===================
ಬಾಕ್ಸ್
ಸ್ಮಾರಕದ ಕಾಮಗಾರಿ ಆಗಿಲ್ಲ
ಸಕಲೇಶಪುರದಲ್ಲಿ ನಡೆದ ಕಾಡಾನೆ ಸೆರೆ ಕಾರ್ಯಾಚರಣೆ ವೇಳೆ ಅರ್ಜುನ ಆನೆ ಮೃತಪಟ್ಟ ಸ್ಥಳದಲ್ಲೇ ಸರ್ಕಾರದಿಂದ ಅರ್ಜುನ ಆನೆಯ ಅಂತ್ಯಕ್ರಿಯೆ ನಡೆಸಲಾಯಿತು. ಈ ವೇಳೆ ಸಮಾಧಿ ಸ್ಥಳದಲ್ಲಿ ಹಾಗೂ ಅರ್ಜುನ ಆನೆ ವಾಸಸ್ಥಳವಾಗಿದ್ದ ಎಚ್.ಡಿ.ಕೋಟೆಯ ಬಳ್ಳೆ ಆನೆ ಶಿಬಿರದಲ್ಲಿ ಸ್ಮಾರಕ ನಿರ್ಮಿಸುವುದಾಗಿ ಸರ್ಕಾರ ತಿಳಿಸಿತ್ತು. ಆದರೆ ಈವರೆಗೂ ಸ್ಮಾರಕ ನಿರ್ಮಾಣಕ್ಕೆ ಸಂಬಂಧಿಸಿದಂತೆ ಯಾವ ಕಾಮಗಾರಿಯೂ ಆರಂಭವಾಗಿಲ್ಲ. ಹೀಗಾಗಿ ಸರ್ಕಾರ ಕೂಡಲೇ ಅರ್ಜುನ ಆನೆಯ ಸ್ಮಾರಕ ನಿರ್ಮಾಣಕ್ಕೆ ಕ್ರಮವಹಿಸಬೇಕು ಎಂದು ಕೆಎಂಪಿಕೆ ಟ್ರಸ್ಟ್ ಸದಸ್ಯರು ಒತ್ತಾಯಿಸಿದರು.