ಅರ್ಚಕರ ಆಕ್ರಮ ತಡೆಯಲೂ ಗ್ರಾಮಸ್ಥರು ಮುಂದು
ಪ್ರತಿನಿಧಿ ವರದಿ ಹಾಸನ
ತಾಲೂಕಿನ ಯಡಿಯೂರು ಗ್ರಾಮದಲ್ಲಿರುವ ಶ್ರೀ ಬಸವೇಶ್ವರ ದೇವಸ್ಥಾನದ ಜಮೀನನ್ನು ಅರ್ಚಕರು ಅಕ್ರಮವಾಗಿ ಖಾತೆ ಮಾಡಿಕೊಂಡು ಬೇರೆಯವರಿಗೆ ಮಾರಾಟ ಮಾಡಲಾಗುತ್ತಿದ್ದು, ಈ ಆಸ್ತಿಯನ್ನು ಬಸವಣ್ಣ ದೇವರ ಹೆಸರಿಗೆ ಖಾತೆ ಮಾಡುವಂತೆ ಒತ್ತಾಯಿಸಿ ಗ್ರಾಮಸ್ಥರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಇದೇ ವೇಳೆ ಯಡಿಯೂರು ಗ್ರಾಮದ ರಾಜಕುಮಾರ್ ಸುದ್ದಿಗಾರರೊಂದಿಗೆ ಮಾತನಾಡಿ, ಗ್ರಾಮದ ಶ್ರೀ ಬಸವಣ್ಣ ದೇವರಿಗೆ ಸರ್ವೇ ನಂ. 73/10ರಲ್ಲಿ 0-38/2 ಗುಂಟೆ, ಸರ್ವೇ ನಂ.50ರಲ್ಲಿ 0-35 ಗುಂಟೆ ಮತ್ತು ಸರ್ವೇ ನಂ.73/8 ರಲ್ಲಿ 0-04 ಗುಂಟೆ ಜಮೀನು ಇದ್ದು, ಈ ಜಮೀನುಗಳ ಮೂಲ ಖಾತೆಯು ಮೊದಲು ಬಸವಣ್ಣ ದೇವರ ಹೆಸರಿನಲ್ಲಿದೆ. ಆನಂತರ ಬಸವಣ್ಣ ದೇವರ ದೇವಸ್ಥಾನದ ಪೂಜಾರಿಯಾಗಿದ್ದ ಸಿದ್ದಲಿಂಗಯ್ಯ ಅವರ ಹೆಸರಿಗೆ ಇ ಸ್ವತ್ತುಗಳು ಖಾತೆಯಾದವು.
ಪೂಜಾರಿ ಸಿದ್ದಲಿಂಗಯ್ಯ ಅವರು ಮೃತಪಟ್ಟಿದ್ದು, ಈಗ ಅವರ ಹೆಂಡತಿ ಈರಮ್ಮ ಮತ್ತು ಅವರ ಮಗ ಪಂಚಾಕ್ಷರಯ್ಯ ಇವರ ಹೆಸರಿನಲ್ಲಿ ಜಂಟಿ ಖಾತೆ ಮುಂದುವರಿದುಕೊಂಡು ಬರುತ್ತಿದೆ.
ಆದರೆ ಈ ಆಸ್ತಿಗಳನ್ನು ಪ್ರತ್ಯೇಕ ಪೋಡು ಮಾಡಿಸಿಕೊಂಡು ಮಾರಾಟ ಮಾಡುವ ಉದ್ದೇಶದಿಂದ ದುರಸ್ತಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಈ ಆಸ್ತಿಯನ್ನು ಪೋಡು ಮಾಡಿಸಿಕೊಂಡು ಮಾರಾಟ ಮಾಡಲು ಯಾವುದೇ ರೀತಿಯ ಹಕ್ಕಾಗಲೀ, ಅಧಿಕಾರವಾಗಲೀ ಇವರಿಗೆ ಇರುವುದಿಲ್ಲ. ಈ ಆಸ್ತಿಗಳು ನಮ್ಮ ಗ್ರಾಮದ ಬಸವಣ್ಣ ದೇವರಿಗೆ ಸೇರಿದ ಆಸ್ತಿಗಳಾಗಿರುತ್ತವೆ ಎಂದು ಹೇಳಿದರು.
ಇವರು ಈ ಆಸ್ತಿಗಳ ನಿಜವಾದ ಮಾಲೀಕರಲ್ಲ. ಸಿದ್ದಲಿಂಗಯ್ಯ ಅವರ ಮಗ ಪಂಚಾಕ್ಷರಯ್ಯ ಅವರು ಬಸವಣ್ಣ ದೇವರ ಪೂಜೆಯನ್ನು ಮಾಡುತ್ತಿಲ್ಲ. ಬೇರೆಯವರು ದೇವರ ಪೂಜೆಕಾರ್ಯಗಳನ್ನು ಮಾಡುತ್ತಿದ್ದಾರೆ. ದೇವರಿಗೆ ಸೇರಿದ ಆಸ್ತಿಯಲ್ಲಿ ಪೂಜೆ ಮಾಡುವವರು ಬೆಳೆ ಬೆಳೆದುಕೊಂಡು ಜೀವನ ನಡೆಸಲಿ ಎನ್ನುವ ಕಾರಣಕ್ಕಾಗಿ ಮಾತ್ರ ಜಮೀನುಗಳನ್ನು ನೀಡಲಾಗಿದೆ ಎಂದರು.
ಸಿದ್ದಲಿಂಗಯ್ಯ ಅವರ ಹೆಂಡತಿ ಮತ್ತು ಮಗ ಬಸವಣ್ಣ ಅವರು ದೇವರ ಪೂಜೆಯನ್ನು ಸಹ ಮಾಡದೇ ದೇವರ ಆಸ್ತಿಯನ್ನು ಮಾರಾಟ ಮಾಡಿ ಹಣ ತೆಗೆದುಕೊಂಡು ಊರು ಬಿಟ್ಟು ಹೋಗುವ ಹುನ್ನಾರ ನಡೆಸುತ್ತಿದ್ದಾರೆ. ಈ ರೀತಿ ದೇವರಿಗೆ ಸೇರಿದ ಆಸ್ತಿಯನ್ನು ದಾಖಲಾತಿಗಳು ತಮ್ಮ ಹೆಸರಿನಲ್ಲಿ ಇರುವುದನ್ನು ದುರುಪಯೋಗಪಡಿಸಿಕೊಂಡು ಬೇರೆಯವರಿಗೆ ಮಾರಾಟ ಮಾಡಿ ಊರು ಬಿಟ್ಟು ಹೋದರೆ ಮುಂದೆ ಬಸವಣ್ಣ ದೇವರ ಪೂಜೆ ಮಾಡುವವರು ಯಾರು ಇಲ್ಲದಂತೆ ಆಗುತ್ತದೆ ಹಾಗೂ ಮುಂದೆ ಪೂಜೆ ಮಾಡುವವರ ಜೀವನ ನಿರ್ವಹಣೆಗೂ ಕೂಡ ತುಂಬಾ ತೊಂದರೆ ಉಂಟಾಗುತ್ತದೆ.
ದೇವರ ಪೂಜಾ ಕಾರ್ಯಗಳು ಶಾಶ್ವತವಾಗಿ ನಿಂತು ಹೋಗುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.
ಗ್ರಾಮದ ಮಂಜೇಗೌಡ, ನಿಂಗೇಗೌಡ, ರಮೇಶ್, ಲೋಕೇಶ್, ಆನಂದ್, ಮಂಜುನಾಥ್, ಕುಮಾರ್, ಪೂರ್ಣೇಶ್, ಬೂದೇಶ್, ನಾಗರಾಜು, ಸುಬ್ಬೇಗೌಡ, ರೇವಣ್ಣ ಸೇರಿದಂತೆ ಇತರರು ಉಪಸ್ಥಿತರಿದ್ದರು.