ಬೆಂಗಳೂರು (ನ.1): ಹಣಕಾಸು ಅವ್ಯವಹಾರ ಪ್ರಕರಣ ಸಂಬಂಧ ಜೈಲು ಸೇರಿರುವ ಖ್ಯಾತ ಉದ್ಯಮಿ ನರೇಜ್ ಗೋಯೆಲ್ ಜತೆ ಅಕ್ರಮ ಹಣಕಾಸು ವ್ಯವಹಾರ ನಡೆಸಿರುವುದಾಗಿ ಸಿಐಬಿ ಅಧಿಕಾರಿ ಹೆಸರಿನಲ್ಲಿ ಬೆದರಿಸಿ ನಿವೃತ್ತ ಸರ್ಕಾರಿ ಅಧಿಕಾರಿಯೊಬ್ಬರಿಂದ ₹42 ಲಕ್ಷವನ್ನು ಸೈಬರ್ ವಂಚಕರು ದೋಚಿದ್ದಾರೆ.
ಎಂಆರ್ವಿ ಬಡಾವಣೆಯ ಎಂಎಲ್ಎ ಲೇಔಟ್ ನಿವಾಸಿ ಎ.ಮಹೇಂದ್ರ ಹಣ ಕಳೆದುಕೊಂಡಿದ್ದು, ಸಂತ್ರಸ್ತರು ನೀಡಿದ ದೂರಿನ ಮೇರೆಗೆ ಅಕಾಶ್ ಕುಲಹರಿ ಸೇರಿದಂತೆ ಇತರರ ವಿರುದ್ಧ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಹಣಕಾಸು ಅಕ್ರಮ ಪ್ರಕರಣ ಸಂಬಂಧ ಜೆಟ್ ಏರ್ವೇಸ್ ಸಂಸ್ಥೆಯ ಸಂಸ್ಥಾಪಕ ನರೇಶ್ ಗೋಯೆಲ್ ಅವರನ್ನು ಸಿಬಿಐ ಬಂಧಿಸಿದೆ.
ಹೇಗೆ ವಂಚನೆ?
ನ.17ರಂದು ನಿವೃತ್ತ ಪಿಎಫ್ ಆಯುಕ್ತ ಮಹೇಂದ್ರ ಅವರಿಗೆ ಕರೆ ಮಾಡಿದ್ದ ಅಪರಿಚಿತ ವ್ಯಕ್ತಿ, ತನ್ನನ್ನು ಸಿಬಿಐ ಅಧಿಕಾರಿ ಆಕಾಶ್ ಕುಲಹರಿ ಎಂದು ಪರಿಚಯಿಸಿ ಕೊಂಡಿದ್ದಾನೆ. ನೀವು ಉದ್ಯಮಿ ನರೇಶ್ ಗೋಯೆಲ್ ಜತೆ ಅಕ್ರಮವಾಗಿ ಹಣಕಾಸು ವ್ಯವಹಾರ ನಡೆಸಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ನೀವು ರಾಷ್ಟ್ರೀಯ ಬ್ಯಾಂಕ್ವೊಂದರ ಮೂಲಕ ನರೇಶ್ ಜತೆ ಅಕ್ರಮ ಹಣ ವರ್ಗಾವಣೆ ನಡೆಸಿರುವುದು ಪುರಾವೆ ಸಹ ಲಭಿಸಿದೆ ಎಂದಿದ್ದಾನೆ. ಇದಕ್ಕೆ ಪೂರಕವಾಗಿ ಸರ್ವೋಚ್ಛ ನ್ಯಾಯಾಲಯದ ವೆಬ್ಸೈಟ್ನಲ್ಲಿ ಲಭಿಸಿದ ದಾಖಲೆಗಳು ಎಂದು ಹೇಳಿ ಮಹೇಂದ್ರ ಅವರಿಗೆ ದಾಖಲೆಗಳನ್ನು ತೋರಿಸಿದ್ದಾನೆ. ನಿಮ್ಮ ವಿರುದ್ಧ ಬಂಧನ ವಾರೆಂಟ್ ಜಾರಿಯಾಗಿದ್ದು, ಬಂಧನದಿಂದ ತಪ್ಪಿಸಲು ಹಣ ನೀಡಬೇಕಾಗುತ್ತದೆ ಎಂದಿದ್ದಾನೆ.
ಕೊನೆಗೆ ಆರೋಪಿ ಸೂಚಿಸಿದಂತೆ ಆತನ ಬ್ಯಾಂಕ್ ಖಾತೆಗೆ ಹಂತ ಹಂತವಾಗಿ ₹42 ಲಕ್ಷಗಳನ್ನು ಅವರು ವರ್ಗಾಯಿಸಿದ್ದಾರೆ. ಬಳಿಕ ಈ ವಿಚಾರಿಸಿದಾಗ ತಾವು ವಂಚನೆಗೆ ಒಳಗಾಗಿರುವ ಸಂಗತಿ ಮಹೇಂದ್ರ ಅವರಿಗೆ ಗೊತ್ತಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.