– ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಕರಣ
– ಅನ್ಯಕೋಮಿನ ದಂಪತಿ ನಡುವೆ ಕಿತ್ತಾಟ
ಮೈಸೂರು: ಬ್ಯಾಡ್ ನ್ಯೂಸ್ ಸಿನಿಮಾ ನೋಡುವ ವೇಳೆ ರಾಷ್ಟ್ರಗೀತೆಗೆ ಗೌರವ ನೀಡದೆ ಅಗೌರವ ತೋರಿದ ದಂಪತಿ ವಿರುದ್ಧ ಎಲ್ಲೆಡೆ ಆಕ್ರೋಶ ಭುಗಿಲೆದ್ದಿದ್ದು, ಈ ಪ್ರಕರಣ ಇದೀಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ.
ನಗರದ ಜಯಲಕ್ಷ್ಮೀಪುರಂನಲ್ಲಿರುವ ಡಿಆರ್ಸಿ ಸಿನಿಮಾಸ್ನಲ್ಲಿ ಘಟನೆ ನಡೆದಿದ್ದು, ಭಾನುವಾರ ರಾತ್ರಿ 9:55ರ ಪ್ರದರ್ಶನದಲ್ಲಿ ಬ್ಯಾಡ್ ನ್ಯೂಸ್ ಸಿನಿಮಾ ಪ್ರದರ್ಶನಕ್ಕೂ ಮುನ್ನ ಸಿನಿಮಾ ಸ್ಕ್ರೀನ್ನಲ್ಲಿ ರಾಷ್ಟ್ರಗೀತೆ ಮೊಳಗಿದೆ. ಈ ವೇಳೆ ಸಿನಿಮಾ ನೋಡಲು ಬಂದಿದ್ದ ಅನ್ಯಕೋಮಿನ ದಂಪತಿ ಮೇಲೆದ್ದು, ರಾಷ್ಟ್ರಗೀತೆಗೆ ಅಗೌರವ ತೋರಿದ್ದಾರೆ. ಇದನ್ನು ಗಮನಿಸಿದ ಪಕ್ಕದಲ್ಲೇ ಇದ್ದಂತ ಮತ್ತೊಂದು ಕೋಮಿನ ದಂಪತಿ ಅಗೌರವವನ್ನ ಪ್ರಶ್ನೆ ಮಾಡಿದೆ. ಈ ವೇಳೆ ಎರಡು ಕೋಮಿನ ದಂಪತಿ ನಡುವೆ ಮಾತಿನ ಚಕಮಕಿ ಬೆಳೆದಿದ್ದು, ಗಲಾಟೆ ವಿಕೋಪಕ್ಕೆ ತಿರುಗಿದೆ.
ಈ ನಡುವೆ ಥಿಯೇಟರ್ನಲ್ಲಿ ಗಲಾಟೆ ಆಗುತ್ತಿರುವುದನ್ನು ಗಮನಿಸಿದ ಥಿಯೇಟರ್ ಮಾಲೀಕರು ಕೂಡಲೇ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಜಯಲಕ್ಷ್ಮಿಪುರಂ ಠಾಣೆ ಇನ್ಸ್ಪೆಕ್ಟರ್ ಕುಮಾರ್ ಸ್ಥಳಕ್ಕೆ ಬಂದು ಎರಡು ಕುಟುಂಬವನ್ನ ಠಾಣೆಗೆ ಕರೆದೊಯ್ದಿದ್ದಾರೆ. ಈ ಸಂಬಂಧ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಮುಂದುವರೆದಿದೆ.
==================
ಫೋಟೋ ಇಲ್ಲ