ಜನಜೀವನ ಅಸ್ತವ್ಯಸ್ಥ । ಗ್ರಾಮೀಣ ರಸ್ತೆಗಳು ಸಂಪೂರ್ಣ ಜಲಾವೃತ । ಸಂಚಾರಕ್ಕೆ ಕಡಿತ । ಅಪಾಯದ ಭಯದಲಿ ಜನರು
ಪಾರ್ಥಚಿಣ್ಣಪ್ಪ ವಿರಾಜಪೇಟೆ
ಕಳೆದ ಒಂದು ತಿಂಗಳಿಂದ ಸುರಿಯುತ್ತಿರುವ ಬಾರಿ ಮಳೆಗೆ ಕೊಡಗು ಜಿಲ್ಲೆ ತ್ತತರಿಸಿ ಹೋಗಿದೆ. ನದಿ, ಕಾಲುವೆ, ತೋಡು, ತೊರೆಗಳು ತುಂಬಿ ಹರಿಯುತ್ತಿದೆ.
ಮುಖ್ಯ ರಸ್ತೆಗಳು ಹೊರತು ಪಡಿಸಿ ಗ್ರಾಮೀಣ ರಸ್ತೆಗಳು ಸಂಪೂರ್ಣ ಜಲಾವೃತ ಗೊಂಡಿದ್ದು, ಗ್ರಾಮಗಳ ಸಂಚಾರ ಕಡಿತಗೊಂಡಿದೆ. ನದಿ ಪಾತ್ರದ ಗದ್ದೆ, ತೋಟಗಳು ಜಲಾವೃತಗೊಂಡಿದ್ದು ಅಪಾರ ಪ್ರಮಾಣದ ನಷ್ಟ ಉಂಟಾಗಿದೆ.
ಕಾವೇರಿ ನದಿಯಲ್ಲಿ ನಿರಿನ ಮಟ್ಟ ಏರುತ್ತಿದ್ದು, ಬೇತ್ರಿಯಲ್ಲಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ವಿರಾಜಪೇಟೆ ತಾಲೂಕು ಬೇತ್ರಿಯಿಂದ ಮಡಿಕೇರಿ ತಾಲೂಕು ಪಾರಣೆಗೆ ತೆರಳುವ ರಸ್ತೆ ಸಂಪೂರ್ಣ ಜಲಾವೃತಗೊಂಡಿದ್ದು ಸಂಚರಕ್ಕೆ ಸಂಪರ್ಕ ಕಡಿದುಕೊಂಡಿದೆ.
ಬೇತ್ರಿಯ ಹೆಮ್ಮಾಡು ಗ್ರಾಮ ಸಂಪೂರ್ಣ ನೀರಿನಿಂದ ತುಂಬಿ ದ್ವೀಪದಂತಾಗಿದೆ. ಬೆಳ್ಳುಮಾಡು, ನಾಲ್ಕೇರಿ, ಮೈತಾಡಿ, ಅರಮೇರಿ ಕಡಂಗಮೂರುರು, ಕದನೂರು ಗ್ರಾಮಗಳ ಬಹುತೇಕ ಗದ್ದೆ ಹಾಗೂ ಕಾಫಿ ತೋಟಗಳು ಜಲಾವೃತಗೊಂಡಿದೆ. ಬೇತ್ರಿಯ ಹೊಳೆ ದಂಡೆಯಲ್ಲಿ ೬೫ಕ್ಕೂ ಹೆಚ್ಚು ಮನೆಗಳಿದ್ದು ೨೦೦ಕ್ಕೂ ಅಧಿಕ ಜನರು ಸುರಕ್ಷಿತ ಸ್ಥಳಗಳಿಗೆ ತೆರಳಿದ್ದಾರೆ. ೬ ಮನೆಗಳಿಗೆ ನೀರು ನುಗ್ಗಿದೆ.
ತಾಲೂಕು ಆಡಳಿತ ತೀವೃ ನಿಗಾ ಇಟ್ಟಿದ್ದು, ಆ ಭಾಗದ ಜನರಿಗೆ ಉಪಯೋಗವಾಗುವಂತೆ ಕಾಳಜಿ ಕೇಂದ್ರವನ್ನು ಪ್ರಾರಂಭಿಸಿದೆ.
ಬುಧವಾರ ಮಳೆ ಸ್ವಲ್ಪ ಮಟ್ಟಿಗೆ ಬಿಡುವು ನೀಡಿದ ಪರಿಣಮಾ ನೀರಿನ ಮಟ್ಟ ನಿಧಾನವಾಗಿ ಇಳಿಮುಖ ಗೊಳ್ಳುತ್ತಿದೆ. ಕೆಲವು ಕಡೆಗಳಲ್ಲಿ ಸಣ್ಣ-ಪುಟ್ಟ ಬರೆಗಳು ಜರೆದಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.
ಜಿಲ್ಲೆಯಲ್ಲಿ ಮಳೆಯ ಪ್ರಮಾಣ: ಮೇ ತಿಂಗಳಿಂದ ಜು.೩೧ರ ಬೆಳಗ್ಗೆ ೮ ಗಂಟೆಯವರೆಗೆ ವಿರಾಜಪೇಟೆ ತಾಲೂಕಿನಲ್ಲಿ ೪೦೦೩.೫೦ ಮಿಮೀ (೧೬೦.೧೪ಇಂಚು) ಮಳೆಯಾಗಿದೆ. ಮೇ ತಿಂಗಳಲ್ಲಿ ವಿರಾಜಪೇಟೆ ಹೋಬಳಿಯಲ್ಲಿ ೨೫೭.೫(೧೦.೩ಇಂಚು) ಮಿಮೀ, ಅಮ್ಮತ್ತಿಯಲ್ಲಿ ೨೪೪.೫ ಮಿಮೀ (೯.೭೮ಇಂಚು), ಜೂನ್ ತಿಂಗಳಲ್ಲಿ ವಿರಾಜಪೇಟೆ ಹೋಬಳಿಯಲ್ಲಿ ೫೪೮.೯ ಮಿಮೀ(೨೧.೯೫ ಇಂಚು), ಅಮ್ಮತ್ತಿಯಲ್ಲಿ ೪೭೪ ಮಿಮೀ(೧೮.೯೬ ಇಂಚು), ಜುಲೈ ತಿಂಗಳಲ್ಲಿ ವಿರಾಜಪೇಟೆ ಹೋಬಳಿಯಲ್ಲಿ ೧೩೧೨.೫ ಮಿಮೀ(೫೨.೫೦ಇಂಚು), ಅಮ್ಮತ್ತಿಯಲ್ಲಿ ೧೧೬೬.೧ ಮಿಮೀ(೪೬.೬೪ಇಂಚು) ಮಳೆ ಪ್ರಮಾಣ ದಾಖಲಾಗಿದೆ.
ವಿರಾಜಪೇಟೆ ಬೆಟ್ಟ ಪ್ರದೇಶಗಳಾದ ನೆಹರು ನಗರ, ಅಯ್ಯಪ್ಪ ಬೆಟ್ಟದಲ್ಲಿ ಅಪಾಯದ ಅಂಚಿನಲ್ಲಿರುವ ೬೬ ಕುಟುಂಬಗಳನ್ನು ಸ್ಥಳಾಂತರಿಸುವಂತೆ ಸೂಚಿಸಿದರು. ಪ್ರತಿ ಮಳೆಗಾಲ ಬಂತೆಂದರೆ ಸ್ಥಳಾಂತರದ ಕೂಗು ಮುನ್ನಲೆಗೆ ಬರುತ್ತದೆ. ನಂತರ ಮುಂದಿನ ಮಳೆಗಾಲದವರೆಗೆ ಯಾವುದೇ ತಂಟೆ ತಕರಾರು ಇರುವುದಿಲ್ಲ. ಪ್ರತಿ ಮಳೆಗಾಲದಲ್ಲಿ ಆ ಭಾಗದ ಜನರು ಸರ್ಕಾರದ ಕಾಳಜಿ ಕೇಂದ್ರಗಳಿಗೆ ತೆರಳಲು ಹಿಂದೇಟು ಹಾಕುತ್ತಾರೆ. ಈ ಬಾರಿಯು ಕೂಡ ಸ್ಥಳೀಯ ಪುರಸಭೆ ಅಧಿಕಾರಿಗಳು ಅಲ್ಲಿಗೆ ತೆರಳಿ ಅವರ ಮನ ವೋಲಿಸಲು ಪ್ರಯತ್ನಿಸಿದ್ದಾರೆ. ಕೆಲವರು ಕಾಳಜಿ ಕೇಂದ್ರಕ್ಕೆ ಒಪ್ಪಿಗೆ ಸೂಚಿಸಿದ್ದಾರೆ. ಇನ್ನು ಕೆಲವರು ಅಕ್ಕಪಕ್ಕದ ಸಂಬಂಧಿಕರ ಮನೆಗೆ ತೆರಳುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ ಎಂದು ಮುಖ್ಯಾಧಿಕಾರಿ ಚಂದ್ರಕುಮಾರ್ ತಿಳಿಸಿದ್ದಾರೆ.
ಜುಲೈ ಅಂತ್ಯದವರೆಗೆ ಮನೆ ಹಾನಿಯಲ್ಲಿ ೪೮ ಪ್ರಕರಣಗಳು ವರದಿಯಾಗಿವೆ. ೪೨ ಪ್ರಕರಣಗಳಲ್ಲಿ ಆರಂಭಿಕ ಹಂತದಲ್ಲಿ ಅನುದಾನ ಬಿಡುಗಡೆ ಗೊಳಿಸಲಾಗಿದೆ. ಕೆಲವು ತಾಂತ್ರಿಕ ತೊಂದರೆಗಳಿಂದ ೬ ಪ್ರಕರಣದಲ್ಲಿ ಅನುದಾನ ಬಿಡುಗಡೆ ಗೊಳಿಸಲು ವಿಳಂಬವಾಗಿದೆ. ಅಮ್ಮತ್ತಿ ಹೋಬಳಿಯ ಕರಡಿಗೋಡು ಮತ್ತು ಮಾಲ್ದಾರೆಯಲ್ಲಿ ದನದ ಕೊಟ್ಟಿಗೆಗೆ ಹಾನಿಯಾಗಿದೆ. ಬಾಡಗ ಬಾಣಂಗಾಲದಲ್ಲಿ ಪಕೃತಿ ವಿಕೋಪದಲ್ಲಿ ಹಸು ಮೃತಪಟ್ಟಿದ್ದು ಪರಿಹಾರ ನೀಡಲು ಬಾಕಿ ಇದೆ.
ಕಾಳಜಿ ಕೇಂದ್ರದ ವಿವರ: ತಾಲೂಕಿಗೆ ಸಂಬಂಧಿಸಿದಂತೆ ಸಂತ ಅನ್ನಮ್ಮ ಶಾಲೆ ವಿರಾಜಪೇಟೆ, ಸರ್ಕಾರಿ ಪ್ರಾಥಮಿಕ ಶಾಲೆ ತೋರಾ, ಸ್ವರ್ಣಮಾಲ ಕಲ್ಯಾಣ ಮಂಟಪ ಸಿದ್ದಾಪುರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಚ್ಚಿನಾಡು ಕಡೆಗಳಲ್ಲಿ ಕಾಳಜಿ ಕೇಂದ್ರವನ್ನು ಪ್ರಾರಂಭಿಸಿದ್ದಾರೆ. ವಿರಾಜಪೇಟೆ ಸಂತ ಅನ್ನಮ್ಮ ಶಾಲೆಯಲ್ಲಿ ೧, ಸರ್ಕಾರಿ ಪ್ರಾಥಮಿಕ ಶಾಲೆ ತೋರಾದಲ್ಲಿ ೨೪, ಸ್ವರ್ಣಮಾಲ ಕಲ್ಯಾಣ ಮಂಟಪ ಸಿದ್ದಾಪುರದಲ್ಲಿ ೫೧, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಚ್ಚಿನಾಡುವಿನಲ್ಲಿ ೪೪ ಜನರು ಆಶ್ರಯ ಪಡೆದುಕೊಂಡಿದ್ದಾರೆ. ಪ್ರಕೃತಿ ವಿಕೋಪವನ್ನು ಎದುರಿಸಲು ಎನ್ಡಿಆರ್ಎಫ್ ತಂಡ ಸಿದ್ದವಿದೆ.
೨೦೧೯ರಲ್ಲಿ ತೋರಾದಲ್ಲಿ ನಡೆದ ಗುಡ್ಡಕುಸಿತ ಸ್ಥಳದಲ್ಲಿ ಹಿರಿಯ ಗಣಿ ಮತ್ತು ಭೂ ವಿಜ್ಞಾನಿ ರಾಹುಲ್ ಅವರ ನೇತೃತ್ವದ ತಂಡ ಅಲ್ಲಿಯೆ ಎಲ್ಲವನ್ನು ಅವಲೋಕನ ಮಾಡುತ್ತಿದ್ದಾರೆ. ಉಳಿದ ಕಾಳಜಿ ಕೇಂದ್ರದಲ್ಲಿ ಆರೋಗ್ಯ ತಪಾಸಣೆ, ಅಡಿಗೆ, ಇನ್ನಿತರ ವ್ಯವಸ್ಥೆಗಳನ್ನು ಆಯಾಯ ಗ್ರಾಪಂ ವ್ಯಾಪ್ತಿಯ ಪಿಡಿಒಗಳು, ರೆವಿನ್ಯೂ ಅಧಿಕಾರಿಗಳು ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಸಾರ್ವಜನಿಕರಿಗೆ ಯಾವುದೇ ತೋಂದರೆ ಉಂಟಾದಲ್ಲಿ ನೇರವಾಗಿ ತಹಸೀಲ್ದಾರ್ ರಾಮಚಂದ್ರ ಅವರನ್ನು ಸಂಪರ್ಕಿಬಹುದಾಗಿದೆ ಎಂದು ತಹಸೀಲ್ದಾರ್ ಮಾಹಿತಿ ನೀಡಿದರು.
ಪೊಟೊ ೩೧ ವಿಟಪಿ ೧ ಬೇತ್ರಿ-ಪಾರಣೆ ಸಂಫರ್ಕ ರಸ್ತೆ ಕಡಿತ ೨ ಬೇತ್ರಿ ಸೇತುವೆ. ೩ ಕದನೂರು ಬಳಿ ಗದ್ದೆ ಜಲಾವೃತ ಗೊಂಡಿರುವುದು.
************************