ಮೈಸೂರು: ಮೈಸೂರು ಲೋಕಾಯುಕ್ತ ಅಧಿಕಾರಿಗಳ ವಿರುದ್ದ ಆರ್ ಟಿ ಐ ಕಾರ್ಯಕರ್ತ ಗಂಗರಾಜು ರಾಜ್ಯಪಾಲರಿಗೆ ದೂರು ನೀಡಿದ್ದಾರೆ. ಇ-ಮೇಲ್ ಹಾಗೂ ಅಂಚೆ ಮೂಲಕ ರಾಜ್ಯಪಾಲರಿಗೆ ದೂರು ಸಲ್ಲಿಕೆ ಮಾಡಿರುವ ಗಂಗರಾಜು, ಮುಡಾ ಹಗರಣಕ್ಕೆ ಸಂಬಂಧಿಸಿದಂತೆ 1 ಸಾವಿರ ಪುಟಗಳ ಸಾಕ್ಷ್ಯ ಸಂಗ್ರಹಿಸಿದ್ದಾಗ್ಯೂ ದಾಳಿ ನಡೆಸದೇ ಸರ್ಕಾರದ ಜೊತೆ ಲೋಕಾಯುಕ್ತ ಅಧಿಕಾರಿಗಳು ಶಾಮೀಲಾಗಿದ್ದಾರೆ ಎಂದು ಆರೋಪಿಸಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಗೆ ದೂರು ದಾಖಲಿಸಿದ್ದಾರೆ.
ಮೈಸೂರು ಲೋಕಾಯುಕ್ತ ಕಚೇರಿಯ ಇನ್ಸ್ಪೆಕ್ಟರ್ ರವಿಕುಮಾರ್ ನೇತೃತ್ವದ ತಂಡವು ಮುಡಾದಲ್ಲಿನ ಅಕ್ರಮಗಳ ಕುರಿತು ಸಾಕ್ಷಿ ಕಲೆ ಹಾಕಿ ಸರ್ಚ್ ವಾರೆಂಟ್ ಕೋರಿ ಅಂದಿನ ಲೋಕಾಯುಕ್ತ ಎಸ್ ಪಿ., ವಿ ಜೆ ಸುಜಿತ್ ಮೂಲಕ ಲೋಕಾಯುಕ್ತ ಬೆಂಗಳೂರು ಕಚೇರಿಗೆ ಮನವಿ ಸಲ್ಲಿಸಿತ್ತು. ಆದರೆ ಉದ್ದೇಶಪೂರ್ವಕವಾಗಿ 28 ದಿನ ವಿಳಂಬ ಮಾಡಿ ಲೋಕಾಯುಕ್ತವು ಸರ್ಚ್ ವಾರಂಟ್ ನೀಡಿತು. ಅಷ್ಟರೊಳಗೆ ಲೋಕಾಯುಕ್ತದ ಕೆಲವು ಅಧಿಕಾರಿಗಳಿಂದಲೇ ಈ ಮಾಹಿತಿ ಸರ್ಕಾರಕ್ಕೆ ಸೋರಿಕೆ ಆಗಿದೆ. ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಐಎಎಸ್ ಅಧಿಕಾರಿಗಳ ತಂಡವೊಂದನ್ನು ಕಳುಹಿಸಿ 140ಕ್ಕೂ ಹೆಚ್ಚು ಕಡತಗಳನ್ನು ಮುಡಾ ಕಚೇರಿಯಿಂದ ಬೆಂಗಳೂರಿಗೆ ತರಿಸಿಕೊಂಡಿದ್ದರು. ನಂತರ ಜುಲೈ 4ರಂದು ಎಸ್ ಪಿ., ಸುಜಿತ್ ಇಲ್ಲಿಂದ ವರ್ಗವಣೆಯಾಗಿದ್ದಾರೆ. ಜುಲೈ 5ರಂದು ಲೋಕಾಯುಕ್ತ ತನ್ನ ಸರ್ಚ್ ವಾರಂಟ್ ಹಿಂಪಡೆದಿದೆ. ಲೋಕಾಯುಕ್ತ ಮೈಸೂರು ಡಿವೈಎಸ್ಪಿ ಮಾಲತೇಶ್ ಈ ದಾಳಿ ಕುರಿತು ಮೊದಲೇ ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ಗೆ ಮಾಹಿತಿ ನೀಡಿದ್ದಾರೆ. ನಂತರದಲ್ಲಿ ಎಲ್ಲರೂ ಜೊತೆಗೂಡಿ ಹಣ ಪಡೆದು ಪ್ರಕರಣವನ್ನು ಮುಚ್ಚಿ ಹಾಕಿದ್ದಾರೆ. ಈ ಕಾರಣಕ್ಕಾಗಿಯೇ ಲೋಕಾಯುಕ್ತ ದಾಳಿ ನಡೆಯಲಿಲ್ಲ. ಸರ್ಚ್ ವಾರಂಟ್ ನೀಡಲು ವಿಳಂಬ ಮಾಡಿದ್ದರಿಂದ ಮುಡಾದಲ್ಲಿ ಸಾಕಷ್ಟು ಸಾಕ್ಷ್ಯಗಳನ್ನು ನಾಶಪಡಿಸಲಾಗಿದೆ ಎಂದು ದೂರಿನಲ್ಲಿ ವಿಸ್ತ್ರತವಾಗಿ ಉಲ್ಲೇಖಿಸಿ ಅರ್ ಟಿ ಐ ಕಾರ್ಯಕರ್ತ ಗಂಗರಾಜು ದೂರು ದಾಖಲಿಸಿದ್ದಾರೆ.