ಪ್ರತಿನಿಧಿ ವರದಿ ಸರಗೂರು
ಪಟ್ಟಣದ ಸ್ವ್ವಾಮಿ ವಿವೇಕಾನಂದ ಯೂಥ್ ಮೂವ್ ಮೆಂಟ್ ಹಾಗೂ ಟಾಟಾ ಕನ್ಸೂಮರ್ಸ್ ಸಹಯೋಗದೊಂದಿಗೆ ಕೃಷಿಯಲ್ಲಿ ಸುಸ್ಥಿರತೆ ಕಾಪಾಡುವ ದೃಷ್ಟಿಯಿಂದ ರೈತರಿಗೆ ವೈಜ್ಞಾನಿಕ ಕೃಷಿ ಪದ್ಧತಿಗಳ ತರಬೇತಿ ಹಾಗೂ ಸಿರಿಧಾನ್ಯ ಬಿತ್ತನೆ ಬೀಜಗಳ ವಿತರಣಾ ಕಾರ್ಯಕ್ರಮವನ್ನು ಸರಗೂರು ತಾಲೂಕಿನ ನೆಮ್ಮನಹಳ್ಳಿ ಹಾಡಿ, ಬ್ರಹ್ಮಗಿರಿ ಹಾಡಿ ಹಾಗೂ ಎಂಜಿ ಹಳ್ಳಿ ಹಾಡಿಯಲ್ಲಿ ಹಮ್ಮಿಕೊಳ್ಳಲಾಯಿತು.
3 ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ರೈತ ಉತ್ಪಾದಕ ಕಂಪನಿ ಹಾಗೂ ಅದರ ಮಹತ್ವಗಳು ಮತ್ತು ಕಂಪನಿಯನ್ನು ಹುಟ್ಟು ಹಾಕುವ ಬಗ್ಗೆ ಮಾರ್ಗದರ್ಶನ ನೀಡುವ ಮೂಲಕ ರೈತರು ಗೊಬ್ಬರ ಹಾಗೂ ಬಿತ್ತನೆ ಬೀಜಗಳ ಸಂಗ್ರಹಣೆ ಹಾಗೂ ಅದರ ಜವಾಬ್ದಾರಿಯುತ ಬಳಕೆಯ ಬಗ್ಗೆ ಜಾಗೃತಿ ಮೂಡಿಸಲಾಯಿತು. ರೈತರಿಗೆ ನೈಸರ್ಗಿಕ ಹಾಗೂ ಸಾವಯವ ಗೊಬ್ಬರಗಳ ತಯಾರಿಕೆ ಹಾಗೂ ಅದರ ಬಳಕೆ ಬಗ್ಗೆ ರೈತರಿಗೆ ಮಾರ್ಗದರ್ಶನ ನೀಡುವುದರ ಜತೆಗೆ ರೈತರಿಗೆ ರಾಗಿ, ನವಣೆ ಸಜ್ಜೆ ಸಾಮೆ, ಕೋರಲೆ, ಹೂದಲು ಹಾಗೂ ಹಾರಕ ಸಿರಿಧಾನ್ಯಗಳನ್ನು ನೀಡಿ ಅದನ್ನ ಬೆಳೆಯುವ ಪದ್ಧತಿ ಹಾಗೂ ಅದರ ಮಾರುಕಟ್ಟೆ ವ್ಯವಸ್ಥೆಗಳ ಬಗ್ಗೆ ಮಂಡ್ಯ ಜಿಲ್ಲೆಯ ರೈತ ತರಬೇತುದಾರ ಮಂಜುನಾಥ್ ಮಾರ್ಗದರ್ಶನ ನೀಡಿದರು. ಮೂರು ದಿನಗಳ ಕಾಲ ನಡೆದ ಕೃಷಿ ತರಬೇತಿ ಕಾರ್ಯಕ್ರಮದಲ್ಲಿ 170 ರೈತರಿಗೆ ಸಿರಿಧಾನ್ಯ ಬಿತ್ತನೆ ಜೀಜಗಳ ವಿತರಣೆ ಹಾಗೂ ೪೦ಕ್ಕೂ ಹೆಚ್ಚು ಜನರಿಗೆ ಎರೆಹುಳು ಗೊಬ್ಬರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ವಾಮಿ ವಿವೇಕಾನಂದ ಯೂಥ್ ಮೂವ್ ಮೆಂಟ್ ಸುಸ್ಥಿರತೆ ಮತ್ತು ಕೃಷಿ ಸಾಮಾಜಿಕ ಆರ್ಥಿಕ ಸಬಲೀಕರಣ ಕಾರ್ಯಕ್ರಮದ ಸಂಯೋಜಕ ಅಕ್ಷಯ ಹಾಗೂ ರೈತ ಫಲಾನುಭವಿಗಳು ಹಾಜರಾಗಿದ್ದರು.