– ಬೇಡದ ದೇವರಿಗೆ ಮುಕ್ತಿ ನೀಡುವ ರಾಧಾ ಪಾಲಂದಿರಾ
ಸಿ.ದಿನೇಶ್ ಮೈಸೂರು
ಕುಟುಂಬದ ಪ್ರತಿಯೊಬ್ಬರಿಗೂ ಒಳಿತಾಗಲಿ ಎಂದು ಮನೆಯಲ್ಲಿ ದೇವರ ಫೋಟೋ, ವಿಗ್ರಹಗಳನ್ನು ಇರಿಸಿ ಪೂಜೆ ಮಾಡುವುದು ಹಿಂದೂಗಳಲ್ಲಿ ಸಾಮಾನ್ಯ. ಹೀಗೆ ಹತ್ತಾರು ವರ್ಷಗಳ ಕಾಲ ಮನೆಯಲ್ಲಿ ಈ ಫೋಟೋ ಅಥವಾ ವಿಗ್ರಹಗಳಿಗೆ ಭಕ್ತಿ-ಭಾವದಿಂದ ಪೂಜೆ ಮಾಡಲಾಗುತ್ತದೆ. ಆದರೆ ಈ ವಿಗ್ರಹ, ಫೋಟೋಗಳು ಒಡೆದು ಹೋದಾಗ ಅವುಗಳನ್ನು ಸಮರ್ಪಕವಾಗಿ ವಿಲೇವಾರಿ ಮಾಡದೆ, ಮರಗಳ ಬುಡದಲ್ಲಿ, ಪಾರ್ಕ್ಗಳಲ್ಲಿ, ಕಸದ ತೊಟ್ಟಿಗಳು ಸೇರಿದಂತೆ ಎಲ್ಲೆಂದರಲ್ಲಿ ಬಿಸಾಡುವುದನ್ನು ಕೂಡ ಎಲ್ಲೆಡೆ ನೋಡಬಹುದು.
ಇದರಿಂದ ವರ್ಷಗಟ್ಟಲೆ ಪೂಜಿಸಿದ ದೇವರಿಗೆ ಅಪಮಾನ ಮಾಡಿದಂತಾಗುತ್ತಿದೆ. ಸಾಕಷ್ಟು ಜನರಿಗೆ ಒಡೆದ ಫೋಟೋಗಳು, ವಿಗ್ರಹಗಳನ್ನು ವೈಜ್ಞಾನಿಕವಾಗಿ ಯಾವ ರೀತಿ ವಿಲೇವಾರಿ ಮಾಡಬೇಕೆಂದು ತಿಳಿಯದ ಕಾರಣದಿಂದಾಗಿ ಎಲ್ಲೆಂದರಲ್ಲಿ ಬಿಸಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗೆ ಪೂಜಿಸಿದ ಬಳಿಕ ಬೀದಿಯಲ್ಲಿ ಬಿಸಾಡುವ ಫೋಟೋ, ಮೂರ್ತಿಗಳನ್ನು ಸರಿಯಾಗಿ ವಿಲೇವಾರಿ ಮಾಡುವ ವಿಶೇಷ ಕಾರ್ಯವನ್ನು ಮೈಸೂರಿನ ಹೂಟಗಳ್ಳಿ ನಿವಾಸಿ ರಾಧಾ ಪಾಲಂದಿರಾ ಅವರು ನಡೆಸುವ ಮೂಲಕ ಹಲವರಿಗೆ ಮಾದರಿಯಾಗಿದ್ದಾರೆ. ಕಳೆದ ಕೆಲವು ವರ್ಷಗಳಿಂದ ಈ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ರಾಧಾ ಅವರು, ಎಲ್ಲೆಂದರಲ್ಲಿ ಬಿದ್ದಿರುವ ಫೋಟೋಗಳು, ವಿಗ್ರಹಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವ ಮೂಲಕ ಜನರಿಗೂ ಈ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡುತ್ತಾ ಬಂದಿದ್ದಾರೆ.
ಮೈಸೂರಿನ ಹೂಟಗಳ್ಳಿಯ ಹೌಸಿಂಗ್ ಬೋರ್ಡ್ ಕಾಲೋನಿ ನಿವಾಸಿಯಾದ ರಾಧಾ ಪಾಲಂದಿರಾ ಅವರು, ಸಾಮಾಜಿಕ ಸೇವಾ ಕಾರ್ಯದಲ್ಲೂ ತೊಡಗಿಸಿಕೊಂಡಿದ್ದಾರೆ. ಬಿಡುವಿನ ಸಮಯದಲ್ಲಿ ರಸ್ತೆಗಳಲ್ಲಿ ಬಿದ್ದಿರುವ ದೇವರ ಫೋಟೋ, ಮೂರ್ತಿಗಳ ಸಂಗ್ರಹಿಸಿ ಅವುಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ಕೆಲಸ ಮಾಡುತ್ತಿದ್ದಾರೆ. ರಾಧಾ ಪಾಲಂದಿರಾ ಅವರು ಮೈಸೂರಿನ ಹಲವೆಡೆ ಈ ರೀತಿಯಾಗಿ ಫೋಟೋ ಫ್ರೇಮ್ಗಳು ಮತ್ತು ವಿಗ್ರಹಗಳನ್ನು ಸಂಗ್ರಹಿಸಿ, ಅವುಗಳನ್ನು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡಿದ್ದಾರೆ.
ಮೈಸೂರಿನ ಹಲವು ಬಡಾವಣೆಗಳಲ್ಲಿ ರಸ್ತೆಬದಿಯಲ್ಲಿ ಫೋಟೋ ಫ್ರೇಮ್ಗಳು, ಭಿನ್ನವಾಗಿರುವ ಮೂರ್ತಿಗಳನ್ನು ಬಿಸಾಡಿರುವುದನ್ನು ಗಮನಿಸಿದರು. ಆದರೆ ಮನೆಗಳಲ್ಲಿ ಭಕ್ತಿ ಭಾವದಿಂದ ಪೂಜೆ ಮಾಡುವ ದೇವರ ಫೋಟೋಗಳು, ಮೂರ್ತಿಗಳನ್ನು ಎಲ್ಲೆಂದರಲ್ಲಿ ಬಿಸಾಡಬಾರದು ಎಂಬ ಭಾವನೆಯೊಂದಿಗೆ ಈ ಕೆಲಸ ಆರಂಭಿಸಿದರು. ಈ ರೀತಿಯಾಗಿ ಪ್ರಸ್ತುತ ಹೂಟಗಳ್ಳಿ ಸೇರಿದಂತೆ ಹಲವು ಕಡೆಗಳಲ್ಲಿ ಈ ಕಾರ್ಯಾಚರಣೆ ನಡೆಸಿರುವ ರಾಧಾ ಅವರು, ತಮಗೆ ಸಿಕ್ಕ ದೇವರ ಫೋಟೋಗಳನ್ನು ಸಾಧ್ಯವಾದಷ್ಟು ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವ ಪ್ರಯತ್ನ ಮಾಡಿದ್ದಾರೆ.
ಆರಂಭದಲ್ಲಿ ತಮ್ಮ ಬಡಾವಣೆ ಸುತ್ತಮುತ್ತ ಈ ಕಾರ್ಯಾಚರಣೆ ನಡೆಸುತ್ತಿದ್ದ ರಾಧಾ ಅವರು, ಸದ್ಯ ಹಲವು ಬಡಾವಣೆಗಳಲ್ಲಿ ಈ ಕೆಲಸ ಮಾಡಿದ್ದಾರೆ. ತಮ್ಮ ಬಿಡುವಿನ ಸಮಯವನ್ನು ಬಳಸಿಕೊಂಡು ಗೆಳೆಯರೊಂದಿಗೆ ಸೇರಿ ವಿಶೇಷ ಕಾರ್ಯವನ್ನು ನಡೆಸುತ್ತಾ ಬಂದಿದ್ದಾರೆ. ಜನರೊಂದಿಗೆ ತಮ್ಮ ಮೊಬೈಲ್ ಸಂಖ್ಯೆಯನ್ನು ಹಂಚಿಕೊಂಡ ರಾಧಾ ಅವರು, ರಸ್ತೆಬದಿಯಲ್ಲಿ ಎಲ್ಲಿಯೇ ದೇವರ ಫೋಟೋಗಳು, ಮೂರ್ತಿಗಳು ಬಿದ್ದಿದ್ದರೂ ಅದರ ಬಗ್ಗೆ ಮಾಹಿತಿ ನೀಡುವಂತೆ ತಿಳಿಸುತ್ತಾರೆ. ಬಳಿಕ ಆ ಸ್ಥಳಕ್ಕೆ ತೆರಳಿ, ರಸ್ತೆಯಲ್ಲಿ ಯಾರಿಗೂ ಬೇಡದೆ ಬಿಸಾಡಿರುವ ಪೋಟೋಗಳನ್ನು ಸಂಗ್ರಹಿಸುತ್ತಾರೆ. ನಂತರ ಅವರುಗಳನ್ನು ತಮ್ಮ ಮನೆಯಲ್ಲಿ ಸಂಗ್ರಹಿಸಿಟ್ಟು, ಬಿಡುವಿನ ಸಮಯದಲ್ಲಿ ಅವುಗಳನ್ನು ಸರಿಯಾದ ರೀತಿಯಲ್ಲಿ ವಿಲೇವಾರಿ ಮಾಡುತ್ತಾರೆ.
ತಮ್ಮ ಕುಟುಂಬ ಸದಸ್ಯರ ಸಹಾಯದೊಂದಿಗೆ ಫೋಟೋಗಳನ್ನು ವೈಜ್ಞಾನಿಕವಾಗಿ ವಿಲೇವಾರಿ ಮಾಡುವ ರಾಧಾ ಪಾಲಂದಿರಾ ಅವರು, ಫೋಟೋಗಳಲ್ಲಿ ಗಾಜು, ಕಾರ್ಡ್ಬೋರ್ಡ್, ಮರದ ತುಂಡುಗಳು, ದೇವರುಗಳ ಫೋಟೋಗಳನ್ನು ಪ್ರತ್ಯೇಕಿಸಿ, ಮರ ಮತ್ತು ಹಲಗೆಯನ್ನು ಸೌದೆಯಾಗಿ ಬಳಸಿಕೊಳ್ಳುತ್ತಾರೆ. ಇನ್ನು ಗಾಜನ್ನು ಮರುಬಳಕೆಗೆ ಯೋಗ್ಯವಾಗಿದ್ದರೆ ಅವುಗಳನ್ನು ಬಳಸುತ್ತಾರೆ, ಇಲ್ಲವಾದರೆ ಸಮರ್ಪಕವಾಗಿ ವಿಲೇವಾರಿ ಮಾಡುತ್ತಾರೆ. ಇನ್ನು ದೇವರ ಚಿತ್ರಗಳನ್ನು ನೀರಿನಲ್ಲಿ ನೆನೆಯಲು ಹಾಕಿ, ಆ ನೀರನ್ನು ಗಿಡಗಳಿಗೆ ಹಾಕುತ್ತಾರೆ. ಕೆಲವು ಸಂದರ್ಭಗಳಲ್ಲಿ ಈ ಫೋಟೋವನ್ನು ಸುಡಲಾಗುತ್ತದೆ. ರಾಧಾ ಅವರ ಈ ಕಾರ್ಯಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಮೋಕ್ಷ ಪಡೆದುಕೊಳ್ಳಲು ಜನರು ದೇವರಿಗೆ ಪೂಜೆ ಮಾಡಿದರೆ, ರಾಧಾ ಪಾಲಂದಿರಾ ಅವರು ಯಾರಿಗೂ ಬೇಡದೆ ಬೀದಿಯಲ್ಲಿ ಬಿದ್ದಿರುವ ದೇವರಿಗೇ ಮೋಕ್ಷ ನೀಡುವ ಕಾಯಕ ಮಾಡುತ್ತಿದ್ದಾರೆ.
=================
ಕೋಟ್
ದೇವರ ಫೋಟೋಗಳಿಗೆ ವರ್ಷಗಟ್ಟಲೇ ಮನೆಯಲ್ಲಿ ಪೂಜೆ ಮಾಡಿ, ನಮ್ಮ ಕಷ್ಟ-ಸುಖಗಳನ್ನು ಅದರ ಜೊತೆಗೆ ಹಂಚಿಕೊಂಡಿರುತ್ತೇವೆ. ಇಂತಹ ಫೋಟೋಗಳು ಪೂಜಿಸಲು ಯೋಗ್ಯವಲ್ಲದಿದ್ದಾಗ ಅವುಗಳನ್ನು ಎಲ್ಲೆಂದರಲ್ಲಿ ಬಿಸಾಡುವುದು ಸರಿಯಲ್ಲ. ಹೀಗೆ ಮಾಡುವುದರಿಂದ ನಾವು ಪೂಜಿಸುವ ದೇವರಿಗೆ ಬೆಲೆಯೇ ಇಲ್ಲದಂತಾಗಲಿದೆ. ಹೀಗಾಗಿ ಈ ಕಾರ್ಯವನ್ನು ಆರಂಭಿಸಿದೆ ಸಾರ್ವಜನಿಕರು ಈ ಬಗ್ಗೆ(ಮೊ.ಸಂ. 9739997504) ಮಾಹಿತಿ ನೀಡಬಹುದು ಅಥವಾ ನನ್ನೊಂದಿಗೆ ಕೈಜೋಡಿಸಬಹುದು.
ರಾಧಾ ಪಾಲಂದಿರಾ, ಸಮಾಜ ಸೇವಕಿ.
=================