ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ ಮಾಹಿತಿ
ಡೆಂಘೆ ಜಾಗೃತಿ ಸಭೆ
ಪ್ರತಿನಿಧಿ ವರದಿ ಶ್ರೀರಂಗಪಟ್ಟಣ
ಡೆಂಘೆ ಮತ್ತು ಚಿಕೂನ್ ಗುನ್ಯಾ ಜ್ವರ ನಿಯಂತ್ರಣ ನಿಮ್ಮ ಕೈಯಲ್ಲಿದೆ. ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸುವದರಿಂದ ಸೊಳ್ಳೆ ಕಡಿತದಿಂದ ಬರುವ ರೋಗಗಳಿಂದ ಪಾರಾಗಬಹುದೆಂದು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್.ಡಿ.ಬೆನ್ನೂರ ಹೇಳಿದರು.
ಪಟ್ಟಣದ ಪುರಸಭೆ ಸಭಾಂಗಣದಲ್ಲಿ ತಾಲೂಕು ಆರೋಗ್ಯಾಧಿಕಾರಿಗಳ ಕಾರ್ಯಾಲಯ ಹಾಗೂ ಸಾರ್ವಜನಿಕ ಆಸ್ಪತ್ರೆ ವತಿಯಿಂದ ಆಯೋಜಿಸಿದ್ದ ಡೆಂಘೆ ಜಾಗೃತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಡೆಂಘೆ ಹಾಗೂ ಚಿಕೂನ್ ಗುನ್ಯ ಜ್ವರಗಳು ಸೋಂಕು ಹೊಂದಿದ ಈಡಿಸ್ ಎಂಬ ಸೊಳ್ಳೆಯ ಕಡಿತದಿಂದ ಬರುತ್ತವೆ. ನಿಂತ ಸ್ವಚ್ಛ ನೀರಿನಲ್ಲಿ ಹುಟ್ಟುವ ಈ ಸೊಳ್ಳೆ ಸಾಧಾರಣವಾಗಿ ಹಗಲಿನಲ್ಲಿ ಕಚ್ಚುತ್ತವೆ. ಕಡಿತ ಚಿಕ್ಕದಾದರೂ ಭೀತಿ ದೊಡ್ಡದು. ನಿರ್ದಿಷ್ಟ ಚಿಕಿತ್ಸೆ ಇಲ್ಲದ ಈ ಖಾಯಿಲೆಗೆ ಮುಂಜಾಗ್ರತೆಯೆ ಮದ್ದು ಎಂದ ಅವರು ಸೊಳ್ಳೆಯ ಜೀವನ ಚಕ್ರ ಕುರಿತು ಮಾಹಿತಿ ನೀಡಿ, ಸೊಳ್ಳೆ ಉತ್ಪತ್ತಿ ತಡೆಗಟ್ಟಿ ರೋಗ ನಿಯಂತ್ರಣ ಮಾಡಬೇಕು. ಇದ್ದಕ್ಕಿದ್ದಂತೆ ಜ್ವರ, ಕಣ್ಣಿನ ಹಿಂಭಾಗ ನೋವು, ಸ್ನಾಯು ಮತ್ತು ಕೀಲುಗಳಲ್ಲಿ ನೋವು, ಹೊಟ್ಟೆ ನೋವು ಮುಂತಾದ ರೋಗ ಲಕ್ಷಣಗಳಾಗಿದ್ದು ಇಂತಹ, ಲಕ್ಷಣಗಳು ಕಂಡು ಬಂದಾಗ ತಕ್ಷಣ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಪರೀಕ್ಷೆ ಮಾಡಿಸಿಕೊಳ್ಳಬೇಕು. ಸಮುದಾಯದೊಂದಿಗೆ ಸೇರಿ ಡೆಂಘೆ ನಿಯಂತ್ರಣ ಮಾಡೋಣ ಎಂದು ಸಲಹೆ ನೀಡಿದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ಮೋಹನ್ ಮಾತನಾಡಿ, ಸೊಳ್ಳೆ ಕಡಿತದಿಂದ ಪಾರಾಗಲು ಮೈತುಂಬ ಬಟ್ಟೆ ಧರಿಸುವುದು, ಸೊಳ್ಳೆ ಪರದೆ ಉಪಯೋಗಿಸುವುದು, ನೀರಿನ ಶೇಖರಣೆಗಳನ್ನು ಮುಚ್ಚಿಡುವುದು, ಮನೆಯ ಸುತ್ತ-ಮುತ್ತ ನೀರು ನಿಲ್ಲದಂತೆ ಎಚ್ಚರ ವಹಿಸುವದು ಮತ್ತು ಪರಿಸರವನ್ನು ಶುಚಿಯಾಗಿಟ್ಟು ಕೊಳ್ಳುವುದರಿಂದ ರೋಗವನ್ನು ತಡೆಗಡಬುಹುದು. ಪ್ರತಿ ಶುಕ್ರವಾರ ಪ್ರತಿಯೊಬ್ಬರು ತಮ್ಮ-ತಮ್ಮ ಮನೆಯಲ್ಲಿ ಒಣ ದಿನ ಆಚರಿಸುವ ಮೂಲಕ ಮುಂತಾದ ಸ್ವಯಂ ರಕ್ಷಣಾ ವಿಧಾನಗಳನ್ನು ಅನುಸರಿಸರಿಸಬೇಕು. ಒಟ್ಟಾರೆ ಸೊಳ್ಳೆ ಕಡಿತದಿಂದ ಜಾಗೃತರಾಗಬೇಕೆಂದು ಸಲಹೆ ನೀಡಿದರು.
ಪುರಸಭೆ ಸದಸ್ಯ ಎಂ.ಶ್ರೀನಿವಾಸ, ಪುರಸಭೆ ಮುಖ್ಯಾಧಿಕಾರಿ ರಾಜಣ್ಣ ಮಾತನಾಡಿದರು. ಪುರಸಭೆ ಸದಸ್ಯರುಗಳಾದ ಕೃಷ್ಣಪ್ಪ ,ಎಸ್.ಟಿ.ರಾಜು, ಎಂ.ಶ್ರೀನಿವಾಸ್, ಗಂಜಾಂ ಶಿವು, ಪೂರ್ಣಿಮಾ, ವಸಂತ ಕುಮಾರಿ, ನಿರ್ಮಲಾ, ಪಿ.ಎಸ್.ನಂದೀಶ್, ಪುರಸಭೆ ಮುಖ್ಯಾಧಿಕಾರಿ ರಾಜಣ್ಣ, ಹಿರಿಯ ಆರೋಗ್ಯ ನೀರಿಕ್ಷಣಾಧಿಕಾರಿ ರಾಜ, ಪರಿಸರ ಇಂಜಿನಿಯರ ಸಹನ, ಆರೋಗ್ಯ ನಿರೀಕ್ಷಣಾಧಿಕಾರಿ ಚಂದನ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಬಿ.ಮಂಗಳಾ ಹಾಜರಿದ್ದರು.