ಮೈಸೂರು, ಮಾರ್ಚ್ 11 , 2025 : ಪಾರ್ಶ್ವವಾಯು ಪೀಡಿತ ವ್ಯಕ್ತಿಯೋರ್ವರು ಅನುಮಾನಸ್ಪದವಾಗಿ ಮೃತಪಟ್ಟಿರುವ ಘಟನೆ ಮೈಸೂರಿನ ಲಕ್ಷ್ಮಿಕಾಂತನಗರದಲ್ಲಿ ನಡೆದಿದೆ. ನನ್ನ ಸಾವಿಗೆ ಕೆಳಗಡೆ ಮನೆಯವರಾದ ಶ್ರೀನಿವಾಸ್ ಹಾಗೂ ಮಂಜುಳ ಕಾರಣ ಎಂದು ಸೆಲ್ಫೀ ವೀಡಿಯೋ ಮಾಡಿರುವ ಹಿನ್ನೆಲೆಯಲ್ಲಿ ಮೃತರ ಪತ್ನಿ ತನಿಖೆ ನಡೆಸುವಂತೆ ಹೆಬ್ಬಾಳು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ರಾಜು ಅನುಮಾನಾಸ್ಪದವಾಗಿ ಮೃತಪಟ್ಟವರು. ಕೆಲವು ವರ್ಷಗಳ ಹಿಂದೆ ಪೆರಾಲಿಸಿಸ್ ಆದ ಕಾರಣ ರಾಜು ಮನೆಯಲ್ಲೇ ಉಳಿದುಕೊಂಡಿದ್ದರು. ಪತ್ನಿ ಜಯಪ್ರದ ಇನ್ಫೋಸಿಸ್ ನಲ್ಲಿ ಸೆಕ್ಯೂರಿಟಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದಾರೆ. ನಾಲ್ಕು ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ರಾಜು ಸೆಲ್ಫೀ ವೀಡಿಯೋ ಮಾಡಿದ್ದಾರೆ. ಈ ವಿಚಾರ ಪತ್ನಿ ಹಾಗೂ ಮಕ್ಕಳಿಗೆ ತಿಳಿದು ಧೈರ್ಯ ತುಂಬಿ ಆತ್ಮಹತ್ಯೆ ಪ್ರಯತ್ನವನ್ನು ತಡೆಹಿಡಿದಿದ್ದಾರೆ. ಇದಾದ ಮರುದಿನವೇ ತಾನು ವಿಷ ಕುಡಿದಿರುವುದಾಗಿ ಪರಿಚಯಸ್ತರ ಬಳಿ ಹೇಳಿದ್ದಾರೆ. ಈ ಮಾಹಿತಿ ಜಯಪ್ರದರವರಿಗೆ ಗೊತ್ತಾಗಿ ಕೂಡಲೇ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ರಾಜು ಮೃತಪಟ್ಟಿದ್ದಾರೆ. ಸೆಲ್ಪೀ ವೀಡಿಯೋ ಪ್ರಕಾರ ಕೆಳಗಡೆ ಮನೆಯವರು ಆಗಾಗ ಜಗಳ ಮಾಡುತ್ತಿದ್ದರು. ನನ್ನ ಸಾವಿಗೆ ಶ್ರೀನಿವಾಸ್ ಹಾಗೂ ಮಂಜುಳ ಕಾರಣ ಎಂದು ವೀಡಿಯೋದಲ್ಲಿ ತಿಳಿಸಿರುವ ಹಿನ್ನೆಲೆಯಲ್ಲಿ ಪತಿಯ ಸಾವಿನ ಬಗ್ಗೆ ಅನುಮಾನವಿದೆ. ಹಾಗಾಗಿ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವಂತೆ ಕೆಳಗಡೆ ಮನೆಯವರ ವಿರುದ್ದ ಪತ್ನಿ ಜಯಪ್ರದ ಪ್ರಕರಣ ದಾಖಲಿಸಿದ್ದಾರೆ.
