ಮೈಸೂರು: ‘ಹೆಚ್.ಡಿ ಕೋಟೆ ತಾಲೂಕಿನ ಬೀಚನಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ನ.20 ರಿಂದ ನ.25 ರವರೆಗೆ 5 ದಿನದ ಶೈಕ್ಷಣಿಕ ಪ್ರವಾಸ ಏರ್ಪಡಿಸಲಾಗಿದ್ದು ಮುಖ್ಯೋಪಾಧ್ಯಾಯ ನಾಗಣ್ಣ ಮತ್ತು ಜವಾನ ರಮೇಶ್ ಹೆಣ್ಣು ಮಕ್ಕಳಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ’ಎಂದು ಹಿತ ರಕ್ಷಣಾ ಸಮಿತಿಯ ಧನಗಹಳ್ಳಿ ಸ್ವಾಮಿ ಆರೋಪ ಮಾಡಿದ್ದಾರೆ.
“ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ವಿದ್ಯಾರ್ಥಿನಿಯರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದ ಕಾರಣ, ಪ್ರವಾಸ ತಾಣಕ್ಕೆ ಬಸ್ಸಿನಲ್ಲಿ ತೆರಳುವಾಗ ಹೆಣ್ಣು ಮಕ್ಕಳಿಗೆ ಅವರ ಜೊತೆ ಡಾನ್ಸ್ ಮಾಡುವಂತೆ ಹಾಗೂ ಮುತ್ತು ಕೊಡುವಂತೆ ಕೇಳಿ ಅಸಭ್ಯ ವರ್ತಿಸಿದ್ದ ಜೊತೆಗೆ ಮುರುಡೇಶ್ವರ ಸಮುದ್ರದಲ್ಲಿ ಆಟವಾಡುವ ಸಲುವಾಗಿ ಹೆಣ್ಣು ಮಕ್ಕಳ ಅಂಗಾಂಗಗಳನ್ನು ಮುಟ್ಟಿ ಲೈಂಗಿಕ ಕ್ರಿಯೆಗೆ ಸ್ವಂದಿಸುವಂತೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿದ್ದಾರೆ. ವಿದ್ಯಾರ್ಥಿನಿಯರು ಪೋಷಕರಿಗೆ ತಿಳಿಸಿದರೆ,ಅವರನ್ನು ಅನುತ್ತೀರ್ಣ ಮಾಡುವುದಾಗಿ ಹಾಗೂ ವರ್ಗಾವಣೆ ಪತ್ರದಲ್ಲಿ ನಡವಳಿಕೆ ಸರಿ ಇಲ್ಲವೆಂದು ಬರೆದು ಕೊಡುತ್ತೇನೆ ಎಂದು ಬೆದರಿಕೆಯನ್ನು ನೀಡಿರುತ್ತಾರೆ” ಎಂದು ದೂರಿದ್ದಾರೆ.
ಶಾಲಾ ಶೈಕ್ಷಣಿಕ ಪ್ರವಾಸ ನೆಪದಲ್ಲಿ ವಿಧ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಶಾಲೆಯ ಮುಖ್ಯ ಶಿಕ್ಷಕ ನಾಗಣ್ಣ ಮತ್ತು ಜವಾನ ರಮೇಶ ರವರ ಮೇಲೆ ಮಕ್ಕಳ ದೌರ್ಜನ್ಯ ಕಾಯ್ದೆ ಮತ್ತು ಜಾತಿ ನಿಂದನೆಯಡಿ ಸ್ವಯಂ ದೂರು ದಾಖಲಿಸಿಕೊಂಡು ಕೆಲಸದಿಂದ ವಜಾ ಮಾಡುವಂತೆ ಮನವಿ ಮಾಡಿದ್ದಾರೆ.