ಮೈಸೂರು: ಸಿಎಂ ಸಿದ್ದರಾಮಯ್ಯ ಪರ ಸಚಿವ ಎಚ್ ಸಿ ಮಹದೇವಪ್ಪ ಬ್ಯಾಟಿಂಗ್ ಬೀಸಿದ್ದಾರೆ. ರಾಜೀನಾಮೆ ಕೊಡುವಂತಹ ಘಟನೆ ಏನು ನಡೆದಿದೆ ಹೇಳಿ? ತನಿಖೆ ಆಗುತ್ತೇ ಬಿಡಿ, ವರದಿ ಬರಲಿ, ವರದಿ ಬರುವುದಕ್ಕೆ ಮುಂಚೆಯೇ ಮಾತನಾಡುವುದಕ್ಕೆ ಇವರೇನು ಜಡ್ಜ್ ಗಳಾ? ಎಂದು ಪ್ರಶ್ನಿಸಿರುವ ಸಚಿವ ಮಹದೇವಪ್ಪ, ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರುಪಯೋಗ ಪಡಿಸಿಕೊಳ್ಳುತ್ತಿದೆ. ಹೀಗಾಗಿ ಸಿಬಿಐ ಮೇಲೆ ಅಂಕುಶ ತಂದಿದ್ದೇವೆ. ವಿರೋಧ ಪಕ್ಷದವರ ಗುರಿ ಚುನಾಯಿತ ಪಕ್ಷಗಳನ್ನು ವಜಾ ಮಾಡುವುದು. ಶಾಸಕರು, ಹೈಕಮಾಂಡ್, ಜನರು ಸಿದ್ದರಾಮಯ್ಯ ಪರವಾಗಿ ಇರುವವರೆಗೂ ಸಿದ್ದರಾಮಯ್ಯನವರನ್ನು ಅಲ್ಲಾಡಿಸಲು ಸಾಧ್ಯವಿಲ್ಲ ಎಂದರು.
ಅವರ ರಾಜೀನಾಮೆ ಕೊಡಿಸಲು ಸಾಧ್ಯವಿಲ್ಲ. ಸಿಎಂ ಪ್ರಾಮಾಣಿಕರು, ಇದರ ಬಗ್ಗೆ ಎಳ್ಳಷ್ಟೂ ಅನುಮಾನ ಬೇಡ. ನೈತಿಕತೆ ಬಗ್ಗೆ ಮಾತಾಡುವವರ ನೈತಿಕತೆ ಎಷ್ಟಿದೆ ಕೇಳಿ? ಎಂದು ಪ್ರತಿಪಕ್ಷಗಳಿಗೆ ಪ್ರಶ್ನೆ ಮಾಡಿದ್ದಾರೆ. ಹೈಕಮಾಂಡ್ 100 ಕ್ಕೆ 100 ರಷ್ಟು ಸಿದ್ದರಾಮಯ್ಯ ಪರವಿದ್ದು, ಸಿಎಂ ರಾಜೀನಾಮೆ ಕೊಡಿಸಲು ಸಾಧ್ಯವಿಲ್ಲ ಎಂದರು. ಆರ್ ಟಿ ಐ ಕಾಯ್ದೆಗಳನ್ನು ಕ್ರಿಮಿನಲ್ ಹಿನ್ನೆಲೆ ಇರುವವರು ಹೆಚ್ಚಾಗಿ ಬಳಸುತ್ತಿದ್ದಾರೆ ಹೀಗಾಗಿ ಆರ್ ಟಿ ಐ ಕಾಯ್ದೆ ದುರುಪಯೋಗ ಆಗುತ್ತಿದೆ ಎಂದರು.