ಬೆಂಗಳೂರು: ಪ್ರಜ್ವಲ್ ರೇವಣ್ಣ ಪ್ರಕರಣದ ತನಿಖೆ ಶರವೇಗದಲ್ಲಿ ಸಾಗುತ್ತಿದೆ ಮತ್ತು ಎಸ್ಐಟಿ ಅಧಿಕಾರಿಗಳ ಕಾರ್ಯವೈಖರಿ ಬಹಳ ಖುಷಿ ನೀಡಿದೆ ಎಂದು ವಕೀಲ ದೇವರಾಜೇಗೌಡ ಹೇಳಿದರು. ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತಾಡಿದ ಅವರು ಮುಂದಿನ 4-5 ದಿನಗಳಲ್ಲಿ ಮಹತ್ತರ ಸಂಗತಿಗಳು ಹೊರಬೀಳಲಿವೆ ಎಂದು ಹೇಳಿದರು. ಪ್ರಜ್ವಲ್ ರೇವಣ್ಣ ಪ್ರಕರಣದ ಸೆಕ್ಸ್ ಟೇಪುಗಳು ಬಹಿರಂಗಗೊಂಡ ಬಳಿಕ ಎಲ್ಲ ಸಂತ್ರಸ್ತೆಯರ ಬದುಕು ನರಕವಾಗಿದೆ, ಅವರು ತಮ್ಮ ಊರುಗಳಲ್ಲಿ, ವಾಸ ಮಾಡುವ ಪ್ರದೇಶಗಳಲ್ಲಿ, ರಸ್ತೆಗಳಲ್ಲಿ ತಲೆಯೆತ್ತಿ ತಿರುಗಾಡದ ಸ್ಥಿತಿ ನಿರ್ಮಾಣವಾಗಿದೆ. ತನ್ನ ಜಿಲ್ಲೆಯ ಮಹಿಳೆಯರಿಗೆ ಎದುರಾಗಿರುವ ಸಂಕಷ್ಟದ ಬಗ್ಗೆ ನೋವಾಗಿದೆ, ಲೈಂಗಿಕ ದೌರ್ಜನ್ಯ ಎಸೆಗಿದವರು ಅಪರಾಧಿಗಳಾಗಿರುವಂತೆ ಸಂತ್ರಸ್ತೆಯರ ಬಗ್ಗೆ ಒಂದಿಷ್ಟೂ ಯೋಚನೆ ಮಾಡದೆ ಟೇಪುಗಳನ್ನು ಸಾರ್ವಜನಿಕಗೊಳಿಸಿದವರು ಸಹ ಅಷ್ಟೇ ಅಪರಾಧಿಗಳು ಎಂದು ದೇವರಾಜೇಗೌಡ ಹೇಳಿದರು. ಟೇಪುಗಳನ್ನು ಬಹಿರಂಗ ಮಾಡಿದವರು ಶ್ರೀಮಂತರಾಗಿರಲೀ ಅಥವಾ ರಾಜಕೀಯವಾಗಿ ಎಷ್ಟೇ ಪ್ರಭಾವಶಾಲಿಯಾಗಿರಲಿ ಮತ್ತು ಎಲ್ಲೇ ಅಡಗಿರಲಿ, ಎಸ್ಐಟಿ ಅಧಿಕಾರಿಗಳು ಅವರನ್ನು ಬಿಡೋದಿಲ್ಲ ಎಂದು ಅವರು ಹೇಳಿದರು.