ಪ್ರತಿನಿಧಿ ವರದಿ ಹಾಸನ
ಮಾಜಿ ಸಂಸದ ಪ್ರಜ್ವಲ್ ರೇವಣ್ಣನನ್ನು ಶುಕ್ರವಾರ ನಗರದ ಸಂಸದರ ನಿವಾಸಕ್ಕೆ ಬೆಂಗಳೂರಿನಿಂದ ಕರೆ ತಂದಿದ್ದ ಎಸ್ಐಟಿ ತಂಡ ಸುಮಾರು 4 ಗಂಟೆಗೂ ಹೆಚ್ಚು ಕಾಲ ಸ್ಥಳ ಮಹಜರು ನಡೆಸಿತು.
ಪ್ರಜ್ವಲ್ ವಿರುದ್ಧ ದಾಖಲಾಗಿರುವ ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣ ಹಿನ್ನೆಲೆಯಲ್ಲಿ ಎಂಪಿ ಆಗಿದ್ದಾಗ ಇದೇ ಸರ್ಕಾರಿ ನಿವಾಸದಲ್ಲಿ ಪ್ರಜ್ವಲ್ ಅತ್ಯಾಚಾರ ನಡೆಸಿದ್ದ ಎಂದು ಸಂತ್ರಸ್ತ ಮಹಿಳೆಯೊಬ್ಬರು ದೂರು ನೀಡಿರುವುದರಿಂದ ಅವರ ಸಮಕ್ಷಮದಲ್ಲಿ ಸಿಐಡಿ ಎಸ್ಪಿ ನೇತೃತ್ವದಲ್ಲಿ ಮತ್ತೊಮ್ಮೆ ಸ್ಥಳ ಮಹಜರ್ ನಡೆಸಲಾಯಿತು.
ಇದೇ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಪ್ರಜ್ವಲ್ನನ್ನು ಬಾಡಿ ವಾರೆಂಟ್ ಪಡೆದು ಇಲ್ಲಿಗೆ ಕರೆತಲಾಗಿತ್ತು. ತನಿಖಾ ತಂಡದ ಜತೆಗೆ ಎಫ್ ಎಸ್ಎಲ್ ತಂಡವೂ ನಿವಾಸದ ವಿವಿಧೆಡೆ ಅವಲೋಕನ ನಡೆಸಿತು. ಈ ವೇಳೆ ಪ್ರಜ್ವಲ್ ರಿಂದ ಹೇಳಿಕೆ ಪಡೆಯಿತು. ಅಲ್ಲದೆ ಪಂಚರ ಸಮ್ಮುಖದಲ್ಲಿ ಮಾಹಿತಿ ರೆಕಾರ್ಡ್ ಮಾಡಿಕೊಳ್ಳಲಾಯಿತು. ಕಳೆದ ಮೇ 4ರಂದು ಸಂತ್ರಸ್ತ ಮಹಿಳೆ ಕರೆತಂದು ಮಹಜರ್ ನಡೆಸಿದ್ದ ಎಸ್ಐಟಿ, ಶುಕ್ರವಾರ ಮಾಜಿ ಸಂಸದನನ್ನು ಕರೆ ತಂದಿತ್ತು.
ಮಧ್ಯಾಹ್ನ 12 ಗಂಟೆಯಿಂದ ಸಂಜೆ 4 ಗಂಟೆವರೆಗೂ ಮಹಜರ್ ನಡೆಸಲಾಯಿತು. ಸತತ 4 ಗಂಟೆ ಕಾಲ ಸ್ಥಳ ಮಹಜರ್ ಮುಗಿದ ನಂತರ ಪ್ರಜ್ವಲ್ ಅವರನ್ನು ಕೂರಿಸಿಕೊಂಡು ಎಸ್ಐಟಿ ತಂಡ ಬೆಂಗಳೂರು ಕಡೆಗೆ ಹೊರಟಿತು.