– ಪಾಲಿಕೆ ಅಧಿಕಾರಿಗಳಿಗೆ ಶಾಸಕ ಶ್ರೀವತ್ಸ ಸೂಚನೆ
ಪ್ರತಿನಿಧಿ ವರದಿ ಮೈಸೂರು
ಕೆ.ಆರ್. ಕ್ಷೇತ್ರ ವ್ಯಾಪ್ತಿಯಲ್ಲಿನ ಕುಡಿಯುವ ನೀರಿನ ಸಮಸ್ಯೆಗೆ ಸಂಬಂಧಿಸಿದಂತೆ ಉಂಟಾಗಿರುವ ತಾಂತ್ರಿಕ ಸಮಸ್ಯೆಯನ್ನು ನ.15ರೊಳಗೆ ಬಗೆಹರಿಸುವ ಮೂಲಕ ಪ್ರತಿ ಮನೆಗೂ ನೀರು ಪೂರೈಕೆ ಮಾಡಬೇಕು ಎಂದು ಅಧಿಕಾರಿಗಳಿಗೆ ಶಾಸಕ ಟಿ.ಎಸ್. ಶ್ರೀವತ್ಸ ಸೂಚನೆ ನೀಡಿದರು.
ನಗರಪಾಲಿಕೆ ಹಳೆಯ ಕೌನ್ಸಿಲ್ ಸಭಾಂಗಣದಲ್ಲಿ ಕೃಷ್ಣರಾಜ ಕ್ಷೇತ್ರದ ಪ್ರಗತಿ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು, ಬಹಳ ದಿನಗಳ ಬಳಿಕ ಪರಿಶೀಲನೆ ನಡೆಸಲಾಗುತ್ತಿದ್ದು, ಅಧಿಕಾರಿಗಳು ತಮ್ಮ ವ್ಯಾಪ್ತಿಯಲ್ಲಿ ಆಗುವ ಕೆಲಸಗಳ ಬಗ್ಗೆ ಚಾರ್ಟ್ ಮಾಡಿಕೊಳ್ಳಬೇಕು. ಒಂದು ವರ್ಷದ ಚಾರ್ಟ್ ತಯಾರು ಮಾಡಿಕೊಂಡು ಆರು ತಿಂಗಳಲ್ಲಿ ಮುಗಿಸಬೇಕು. ನಗರದಲ್ಲಿ ಅತಿ ಹೆಚ್ಚು ರಸ್ತೆಗಳು ಗುಂಡಿ ಬಿದ್ದಿರುವ ಬಗ್ಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಆದ್ಯತೆ ಮೇರೆಗೆ ಮುಚ್ಚುವ ಕ್ರಮಕೈಗೊಳ್ಳಬೇಕು. ಬೀದಿ ದೀಪದ ಸಮಸ್ಯೆಯಿದ್ದು, ಸಂಬಂಧ ಪಟ್ಟ ಅಧಿಕಾರಿಗಳು ಅಗತ್ಯ ಕ್ರಮ ವಹಿಸಬೇಕು ಎಂದು ಹೇಳಿದರು.
ನಗರದ ವಿವಿಧ ಕಡೆಗಳಲ್ಲಿ ರಸ್ತೆಬದಿ ವ್ಯಾಪಾರಿಗಳಿಗೆ ನಿರ್ಮಿಸಿರುವ ಜಾಗಗಳಿಗೆ ಫಾಸ್ಟ್ ಫುಡ್ ವ್ಯಾಪಾರಿಗಳನ್ನು ಸ್ಥಳಾಂತರಿಸಬೇಕು. ಸಾರ್ವಜನಿಕರು ಹೆಚ್ಚು ಸಂಚರಿಸುವ ರಸ್ತೆಗಳಲ್ಲಿ ಅವಕಾಶ ಕೊಡದೆ ನಿರ್ಮಿಸಿರುವ ಕಡೆಗೆ ಸ್ಥಳಾಂತರಿಸುವಂತೆ ಕ್ರಮ ಜರುಗಿಸಬೇಕು. ಅಲ್ಲದೆ ನಗರದ ಲಲಿತಾದ್ರಿಪುರ, ಗೊರೂರು ಬಡಾವಣೆಯಲ್ಲಿ ನಿರ್ಮಾಣ ಮಾಡುತ್ತಿರುವ ಬಹು ವಸತಿ ಸಮುಚ್ಛಯಗಳ ಕಟ್ಟಡದ ಪರಿಶೀಲನೆ ಸೇರಿ ಆಶ್ರಯಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆಯನ್ನು ಆಯೋಜಿಸಲು ಪಾಲಿಕೆ ಆಯುಕ್ತರಿಗೆ ಸೂಚಿಸಿದರು.
ಈ ವೇಳೆ ಪಾಲಿಕೆ ಆಯುಕ್ತ ಆಶಾದ್ ಉರ್ ರೆಹಮಾನ್ ಷರೀಫ್ ಮಾತನಾಡಿ, ನಗರದ ಪ್ರತಿಯೊಂದು ಟ್ಯಾಂಕ್ಗಳಲ್ಲಿ ಓವರ್ ಫ್ಲೋ ತಡೆಯಲು ಸೆನ್ಸಾರ್ ಅಳವಡಿಸಬೇಕು. ಬಲ್ಕ್ ಫ್ಲೋ ಮೀಟರ್ಗಳನ್ನು ಅಳವಡಿಸಿದರೆ ಸಣ್ಣ ಸಮಸ್ಯೆಗಳನ್ನು ಪರಿಹರಿಸಬಹುದು ಎಂದು ಸಲಹೆ ನೀಡಿದರು.
ಸ್ಲಂ ಬೋರ್ಡ್ ಇಇ ಎಂ.ರಾಮಚಂದ್ರ ಮಾತನಾಡಿ, ಕೆ.ಆರ್. ಕ್ಷೇತ್ರಕ್ಕೆ ಸ್ಲಂ ಬೋರ್ಡ್ನಿಂದ 1329 ಮನೆಗಳು ಮಂಜೂರಾಗಿದ್ದು, 875 ಮನೆಗಳ ಕಾಮಗಾರಿ ಶುರುವಾಗಿದೆ. 150 ಮನೆಗಳ ನಿರ್ಮಾಣಕ್ಕೆ ಸಂಬಂಧಿಸಿದಂತೆ ವ್ಯಾಜ್ಯ ಇದ್ದು, ನಿವೇಶನ ಇಲ್ಲದೆ 350 ಮನೆಗಳ ನಿರ್ಮಾಣ ಕಾರ್ಯ ಶುರುವಾಗಿಲ್ಲ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿ ಹೆಚ್ಚುವರಿ ಆಯುಕ್ತರಾದ ಮೋಹನಕುಮಾರಿ, ಜೆ.ಎಸ್.ಸೋಮಶೇಖರ್, ಅಧೀಕ್ಷಕ ಅಭಿಯಂತರರಾದ ಕೆ.ಜೆ.ಸಿಂಧು, ವಲಯ ಸಹಾಯಕ ಆಯುಕ್ತರಾದ ಎಸ್.ಸತ್ಯಮೂರ್ತಿ, ಮಂಜುನಾಥ್ ರೆಡ್ಡಿ, ಕಾರ್ಯಪಾಲಕ ಅಭಿಯಂತರರಾದ ಮಹೇಶ್, ಅಶ್ವಿನ್ ಇದ್ದರು.