ವಿದ್ಯುತ್ ಒದಗಿಸುವಂತೆ ಆಗ್ರಹ
ಪ್ರತಿನಿಧಿ ವರದಿ ಸೋಮವಾರಪೇಟೆ
ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಯ ಕುಂದಳ್ಳಿ, ಕುಮಾರಳ್ಳಿ ಗ್ರಾಮದಲ್ಲಿ ಹಲವು ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಸರಿಪಡಿಸುವಂತೆ ಆಗ್ರಹಿಸಿ ಸೋಮವಾರಪೇಟೆಯ ಸೆಸ್ಕ್ ಕಾರ್ಯಪಾಲಕ ಅಭಿಯಂತರರ ಕಚೇರಿಗೆ ಗ್ರಾಮಸ್ಥರು ಮುತ್ತಿಗೆ ಹಾಕಿ ಪ್ರತಿಭಟಿಸಿದರು.
ಕತ್ತಲೆಯಲ್ಲೇ ರಾತ್ರಿ ಜೀವನ ನಡೆಸುವಂತಾಗಿದ್ದು, ತಕ್ಷಣವೇ ಮುರಿದ ಕಂಬಗಳನ್ನು ಸರಿಪಡಿಸಿ ಗ್ರಾಮಕ್ಕೆ ವಿದ್ಯುತ್ ಒದಗಿಸಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. ೨೦ ದಿನಗಳಿಂದ ಗ್ರಾಮಗಳಿಗೆ ವಿದ್ಯುತ್ ಸ್ಥಗಿತಗೊಂಡಿದೆ. ಸೆಸ್ಕ್ ಇಂಜಿನಿಯರ್ಗೆ ತಿಳಿಸಿದರೂ ಯಾವುದೇ ಪ್ರಯೋಜನವಾಗಿಲ್ಲ. ಗ್ರಾಮಗಳು ಕತ್ತಲೆಯಲ್ಲಿ ಮುಳುಗಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಮುರಿದು ಬಿದ್ದಿರುವ ಕಂಬಗಳನ್ನು ಬದಲಾಯಿಸುವಲ್ಲಿ ಅಭಿಯಂತರರು ವಿಫಲರಾಗಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.
ಯಡೂರು, ಕಂಬಳ್ಳಿ, ಮಾರ್ಗವು ಅರಣ್ಯ ಪ್ರದೇಶದೊಳಗೆ ಹಾದು ಹೋಗಿರುವುದರಿಂದ ಆಗಾಗ್ಗೆ ಮರಗಳು ಬಿದ್ದು, ಮಳೆಗಾಲದಲ್ಲಿ ತಿಂಗಳುಗಟ್ಟಲೆ ವಿದ್ಯುತ್ ಸ್ಥಗಿತವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಮಾರ್ಗವನ್ನು ಬದಲಿಸಬೇಕೆಂದು ಒತ್ತಾಯಿಸಿದರು.
ಶಾಂತಳ್ಳಿಯಿಂದ ಬೆಟ್ಟದಳ್ಳಿ, ಬೇಕನಳ್ಳಿ, ಕುಂದಳ್ಳಿ ಮುಖ್ಯರಸ್ತೆಯ ಬದಿಯಲ್ಲಿ ಕಂಬಗಳನ್ನು ಅಳವಡಿಸಿ ಹೊಸ ಮಾರ್ಗ ರಚಿಸಬೇಕು. ಅಥವಾ ಬಸವನಕಟ್ಟೆ, ನಗರಳ್ಳಿಯಿಂದ ರಸ್ತೆ ಬದಿಯಲ್ಲಿ ಕಂಬಗಳನ್ನು ಅಳವಡಿಸಿ ಕುಂದಳ್ಳಿ, ಕುಮಾರಳ್ಳಿಗೆ ವಿದ್ಯುತ್ ಒದಗಿಸಬೇಕು. ಆಗಸ್ಟ್ ಅಂತ್ಯದೊಳಗೆ ಈ ಕೆಲಸ ಆರಂಭವಾಗದಿದ್ದರೆ ಸೆಸ್ಕ್ ಕಚೇರಿ ಎದುರು ಗ್ರಾಮಸ್ಥರು ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ಎಚ್ಚರಿಸಿದರು.
ಗ್ರಾಮಸ್ಥರ ಮನವಿ ಅಲಿಸಿದ ಅಭಿಯಂತರರು, ಮುಂದಿನ ಎರಡು ದಿನದೊಳಗೆ ವಿದ್ಯುತ್ ಮಾರ್ಗಗಳನ್ನು ಸರಿಪಡಿಸಿ ಗ್ರಾಮಗಳಿಗೆ ವಿದ್ಯುತ್ ಒದಗಿಸಲಾಗುವುದು. ನೂತನ ಮಾರ್ಗ ಅಳವಡಿಕೆ ಸಂಬಂಧ ಸ್ಥಳ ಪರಿಶೀಲಿಸಿ ಕ್ರಮಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಕುಮಾರಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ಯು.ಕೆ.ದೇಶ್ರಾಜ್, ಕುಂದಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ದಿನೇಶ್ ಕುಂದಳ್ಳಿ, ಬೆಟ್ಟದಳ್ಳಿ ಗ್ರಾಪಂ ಅಧ್ಯಕ್ಷ ಕೆ.ಜೆ.ತಮ್ಮಯ್ಯ, ಕುಮಾರಳ್ಳಿ ಗ್ರಾಮ ಸಮಿತಿ ಕಾರ್ಯದರ್ಶಿ ಕೆ.ಡಿ.ಕಿರಣ್, ಪ್ರಮುಖರಾದ ಯು.ಬಿ.ಗಿರೀಶ್, ಕೆ.ಈ.ಪ್ರದೀಪ್ ಇತರರಿದ್ದರು.
ಚಿತ್ರ: ಗ್ರಾಮಸ್ಥರಿಂದ ಕಚೇರಿಗೆ ಮುತ್ತಿಗೆ