ಮಡಿಕೇರಿ : ಕಾಂಗ್ರೆಸ್ ಪಕ್ಷದಲ್ಲಿ ಸುದೀರ್ಘಾವಧಿ ಸೇವೆ ಸಲ್ಲಿಸಿರುವ ಕಾರ್ಯಕರ್ತರನ್ನು ಮೀರಿ, ಇತರೆ ಪಕ್ಷಗಳಿಂದ ಬಂದವರಿಗೆ ಮಣೆ ಹಾಕಲಾಗಿದೆ. ಇಂತಹ ಪಕ್ಷಾಂತರಿಗಳ ವಿರುದ್ಧ ನೈರುತ್ಯ ಪದವೀಧರ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ತಾನು ಸ್ಪರ್ಧೆಗೆ ಇಳಿದಿದ್ದೇನೆ ಎಂದು ವಿಧಾನ ಪರಿಷತ್ ಅಭ್ಯರ್ಥಿ ಶಿವಮೊಗ್ಗದ ಎಸ್.ಪಿ.ದಿನೇಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, 2012 ರ ಎಂಎಲ್ಸಿ ಚುನಾವಣೆಯಲ್ಲಿ ತಾನು ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿ ಬಿಜೆಪಿಯ ಪ್ರಬಲ ಅಭ್ಯರ್ಥಿ ಡಿ.ಹೆಚ್.ಶಂಕರಮೂರ್ತಿ ಅವರ ವಿರುದ್ಧ ಕೇವಲ 918 ಮತಗಳ ಅಲ್ಪ ಅಂತರದಿಂದ ಪರಾಭವಗೊಂಡಿದ್ದೆ. 2018 ರಲ್ಲು ಕಾಂಗ್ರೆಸ್ ಪರವಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದೆ.
ಈ ಬಾರಿ ನೈರುತ್ಯ ಪದವೀಧರ ಕ್ಷೇತ್ರಕ್ಕೆ ಪಕ್ಷದಿಂದ ನಿಷ್ಠಾವಂತ ಯಾವುದೇ ಕಾರ್ಯಕರ್ತನನ್ನು ಪಕ್ಷ ಕಣಕ್ಕಿಳಿಸಿದ್ದಲ್ಲಿ ತಾನು ಕಣಕ್ಕಿಳಿಯುತ್ತಿರಲಿಲ್ಲ. ಆದರೆ ಹಿಂದೆ ಬಿಜೆಪಿಯಲ್ಲಿದ್ದು ವಿಧಾನಸಭಾ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡು, ಇದೀಗ ಕಾಂಗ್ರೆಸ್ ಪಕ್ಷಕ್ಕೆ ಬಂದವರಿಗೆ ಟಿಕೆಟ್ ನೀಡಲಾಗಿದೆ. ಈ ಹಿನ್ನೆಲೆ ನನ್ನ ಸ್ಪರ್ಧೆ ಪಕ್ಷಾಂತರಿಯ ವಿರುದ್ಧ ಎಂದು ಪರೋಕ್ಷವಾಗಿ ಕಾಂಗ್ರೆಸ್ ಅಭ್ಯರ್ಥಿ ಆಯನೂರು ಮಂಜುನಾಥ್ ಸ್ಪರ್ಧೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನೈರುತ್ಯ ಪದವೀಧರ ಕ್ಷೇತ್ರ ಕೊಡಗನ್ನು ಒಳಗೊಂಡಂತೆ ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು ಮತ್ತು ದಾವಣಗೆರೆಯ ಮೂರು ತಾಲ್ಲೂಕುಗಳನ್ನು ಹೊಂದಿದ್ದು, ಸುಮಾರು 80 ಸಾವಿರ ಮತ್ತು ಕೊಡಗು ಜಿಲ್ಲೆಯಲ್ಲಿ 3900 ಮತದಾರರಿದ್ದಾರೆ. ಶಿವಮೊಗ್ಗದಲ್ಲಿ ಪದವೀಧರರ ಸಹಕಾರ ಸಂಘದ ಅಧ್ಯಕ್ಷನಾಗಿ, ಶಿವಮೊಗ್ಗದ ದೇಶೀಯ ವಿದ್ಯಾಶಾಲಾ ಸಮಿತಿಯ ಪದಾಧಿಕಾರಿಯಾಗಿ ಪದವೀಧರ ಮತದಾರರ ನಾಡಿ ಮಿಡಿತವನ್ನು ಅರಿತಿದ್ದು, ಗೆಲುವಿನ ವಿಶ್ವಾಸ ಹೊಂದಿರುವುದಾಗಿ ತಿಳಿಸಿದರು.
ತಾನು ಆಯ್ಕೆಯಾಗಿ ಬಂದಲ್ಲಿ ಜಿಲ್ಲಾ ಕೇಂದ್ರಗಳಲ್ಲಿ ಪದವೀಧರರ ಭವನವನ್ನು ನಿರ್ಮಿಸುವ ಮೂಲಕ, ಪದವೀಧರರಿಗೆ ಅಗತ್ಯವಾದ ತರಬೇತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ನಡೆಸುವ ಉದ್ದೇಶ ಹೊಂದಿರುವುದಾಗಿ ಎಸ್.ಪಿ.ದಿನೇಶ್ ತಿಳಿಸಿದರು. ಈಶ್ವರ್ ಹಾಗೂ ಸಿದ್ದೇಶ್ ಉಪಸ್ಥಿತರಿದ್ದರು.
ಫೋಟೋ :: ಎಸ್.ಪಿ ದಿನೇಶ್