ಪ್ರತಿನಿಧಿ ವರದಿ ಹೊಸೂರು
ಸಾಲಿಗ್ರಾಮ ತಾಲೂಕಿನ ಇತಿಹಾಸ ಪ್ರಸಿದ್ದ ಚುಂಚನಕಟ್ಟೆಯ ಶ್ರೀರಾಮ ದೇವಾಲಯದಲ್ಲಿ ಬುಧವಾರ ಶ್ರೀರಾಮ ನವಮಿಯ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು ಸಾವಿರಾರು ಭಕ್ತರ ಸಮ್ಮುಖದಲ್ಲಿ ಭಾರಿ ವಿಜೃಂಭಣೆಯಿಂದ ನಡೆದವು.
ದೇವಾಲಯದಲ್ಲಿ ಬೆಳಗ್ಗೆ 5 ರಿಂದಲೇ ಶ್ರೀರಾಮ ದೇವರಿಗೆ ಎಳನೀರು, ಅರಿಸಿನ ಕುಂಕುಮ, ಹಾಲು, ಮೊಸರು ಮತ್ತು ಕಾವೇರಿ ನೀರಿನಿಂದ ಮಂತ್ರ ಘೋಷಗಳೊಂದಿಗೆ ಅಭಿಷೇಕ ಮಾಡಲಾಯಿತು. ಶ್ರೀರಾಮ ದೇವರ ಮೆರವಣಿ ಬಳಿಕ ದೇವಾಲಯದಲ್ಲಿ ತೀರ್ಥಪ್ರಸಾದ ಮತ್ತು ಮಹಾಮಂಗಳಾರತಿ ಮಾಡಲಾಯಿತು. ದೇವಾಲಯಕ್ಕೆ ಆಗಮಿಸಿದ ಸಾವಿರಾರು ಭಕ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ನಂತರ ತಮ್ಮಇಷ್ಟಾರ್ಥವನ್ನು ನೆರವೇರಿಸುವಂತೆ ಪ್ರಾರ್ಥಿಸಿದರು.
ಶ್ರೀರಾಮ ನವಮಿಯ ಪ್ರಯುಕ್ತ ದೇವಾಯಲದ ಆವರಣವನ್ನು ತಳಿರು-ತೋರಣಗಳಿಂದ ಶೃಂಗಾರಿಸಿ, ಬಣ್ಣ-ಬಣ್ಣದ ರಂಗೋಲಿ ಹಾಕಿ ಅಲಂಕರಿಸಿದ್ದರು. ಧಾರ್ಮಿಕ ಪೂಜಾ ಕಾರ್ಯಕ್ರಮಗಳನ್ನು ದೇವಾಲಯದ ಅರ್ಚಕರಾದ ನಾರಾಯಣ ಅಯ್ಯಂಗಾರ್, ವಾಸುದೇವನ್ ನಡೆಸಿಕೊಟ್ಟರು.
ಭಕ್ತಾದಿಗಳಿಗೆ ಪ್ರಸಾದ ಮತ್ತು ಪಾನಕ ವಿತರಣೆಯನ್ನು ದೇವಾಲಯದ ಆಡಳಿತಾಧಿಕಾರಿ ರಘು ಅವರ ನೇತೃತ್ವದಲ್ಲಿ ಮಾಡಲಾಯಿತು.
ದೇವಾಲಯಕ್ಕೆ ಶಾಸಕ ಡಿ.ರವಿಶಂಕರ್ ಭೇಟಿ ನೀಡಿ ಶ್ರೀರಾಮನ ದರ್ಶನ ಪಡೆದು ಪೂಜೆ ಸಲ್ಲಿಸಿದರು.