ಪ್ರತಿನಿಧಿ ವರದಿ ಕೋಲಾರ
ಜಿಲ್ಲೆಯಾದ್ಯಂತ ರೈತರ ಬೆಳೆಗಳಿಗೆ ಹೆಚ್ಚಾಗಿರುವ ಬಿಂಗಿ ರೋಗದ ನಿಯಂತ್ರಣಕ್ಕೆ ವಿಶೇಷ ವಿಜ್ಞಾನಿಗಳ ತಂಡವನ್ನು ರಚನೆ ಮಾಡಿ, ನಕಲಿ ಬಿತ್ತನೆ ಬೀಜ ಹಾಗೂ ಕೀಟನಾಶಕಗಳ ಹಾವಳಿಗೆ ಸದನದಲ್ಲಿ ಧ್ವನಿ ಎತ್ತುವಂತೆ ಶಾಸಕ ಕೊತ್ತೂರು ಮಂಜುನಾಥ್ ಅವರಿಗೆ ರೈತ ಸಂಘದಿಂದ ಮನವಿ ಸಲ್ಲಿಸಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ನಡೆದ ಜನಸ್ವಂದನ ಸಭೆಯಲ್ಲಿ ಮನವಿ ನೀಡಿ ಒತ್ತಾಯಿಸಿದದರು. ಕೋಲಾರ ತಾಲೂಕಿನಲ್ಲಿ ಕೆರೆ ಕುಂಟೆ ಸೇರಿದಂತೆ ಸರ್ಕಾರಿ ಜಮೀನುಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಉಳಿಸಿ ಮುಂದಿನ ಪೀಳಿಗೆಗೆ ಕೊಡುಗೆಯಾಗಿ ನೀಡಬೇಕು. ಇದಕ್ಕೆ ಕೂಡಲೇ ಸದಸದಲ್ಲಿ ಚರ್ಚಿಸಿ ವಿಶೇಷ ತಂಡ ರಚನೆ ಮಾಡಬೇಕು. ಕೋಲಾರ ನಗರ ಜಿಲ್ಲಾ ಕೇಂದ್ರದಿಂದ ಕೂಡಿದ್ದು ಗ್ರಾಮೀಣ ಮತ್ತು ನಗರದ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳು ಹಾಳಾಗಿದ್ದು ಕೂಡಲೇ ರಸ್ತೆಗಳನ್ನು ಸರಿಪಡಿಸಲು ಸರಕಾರದಿಂದ ವಿಶೇಷ ಅನುದಾನವನ್ನು ತಂದು ಅಭಿವೃದ್ಧಿಗೆ ಅಧ್ಯತೆ ನೀಡುವಂತೆ ಶಾಸಕರನ್ನು ಒತ್ತಾಯಿಸಿದರು.
ಜಿಲ್ಲೆಯ ಬಹುದಿನಗಳ ಬೇಡಿಕೆಯಾದ ಎತ್ತಿನಹೊಳೆ ಯೋಜನೆಯನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಸಂಚಾರಿ ದಟ್ಟವಾಗಿರುವ ಕಡೆಗಳಲ್ಲಿ ಹೊರ ವರ್ತುಲ ರಸ್ತೆಗಳನ್ನು ನಿರ್ಮಾಣ ಮಾಡಬೇಕು. ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಮಂಜೂರು ಮಾಡಿಸಬೇಕು. ಚೆನ್ನೈ ಕಾರಿಡಾರ್ ರಸ್ತೆಗೆ ಭೂಮಿಯನ್ನು ಕಳೆದುಕೊಂಡ ರೈತರಿಗೆ ಪರಿಹಾರ ನೀಡಬೇಕು. ಜತೆಗೆ ಅಕ್ರಮ ಕಲ್ಲು ಗಣಿಗಾರಿಕೆಗೆ ಕಡಿವಾಣ ಹಾಕುವಂತೆ ಸರ್ಕಾರದ ಗಮನ ಸೆಳೆಯಲು ಶಾಸಕರಿಗೆ ಮನವಿ ನೀಡಿ ಒತ್ತಾಯಿಸಿದರು. ರೈತ ಸಂಘದ ಮುಖಂಡರಾದ ಈಕಂಬಳ್ಳಿ ಮಂಜುನಾಥ್, ಯಾರಂಘಟ್ಟ ಗಿರೀಶ್ ಇದ್ದರು.