ಶಾಸಕ ಎ. ಎಸ್.ಪೊನ್ನಣ್ಣ ಅಭಿಪ್ರಾಯ
ಜಿಲ್ಲಾ ಮಟ್ಟದ ಪ್ರಾಥಮಿಕ-ಪ್ರೌಢಶಾಲಾ ಕ್ರೀಡಾಕೂಟಕ್ಕೆ ಚಾಲನೆ
ಪ್ರತಿನಿಧಿ ವರದಿ ಶ್ರೀಮಂಗಲ
ಕ್ರೀಡೆಯ ಮುಖ್ಯ ಉದ್ದೇಶ ಮಕ್ಕಳಲ್ಲಿ ಸವಾಲುಗಳನ್ನು ಎದುರಿಸವ ಮನೋಭಾವವನ್ನು ಬೆಳೆಸಲು ಸಹಕಾರಿ ಯಾಗುತ್ತದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರ ಶಾಸಕ ಅಜ್ಜಿಕುಟ್ಟಿರ ಎ.ಎಸ್.ಪೊನ್ನಣ್ಣ ಅಭಿಪ್ರಾಯಪಟ್ಟರು.
ಹುದಿಕೇರಿಯಲ್ಲಿ ಜಿಲ್ಲಾ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಬಾಲಕ ಮತ್ತು ಬಾಲಕಿಯರ ಕ್ರೀಡಾಕೂಟದ ಉದ್ಘಾಟನಾ ಸಮಾರಂಭದ ಮುಖ್ಯ ಅಥಿತಿಯಾಗಿ ಹಾಗೂ ಮುಖ್ಯಮಂತ್ರಿಗಳ ವಿಶೇಷ ಅನುದಾನ ರೂ. 25 ಲಕ್ಷ ರೂ. ಹುದಿಕೇರಿಯ ಜನತಾ ಪ್ರೌಢಶಾಲೆಯ ಮೈದಾನ ಪುನಶ್ಚೇತನ ಕಾಮಗಾರಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸೋಲು- ಗೆಲುವನ್ನು ಸಮಾನವಾಗಿ ಸ್ವೀಕರಿಸುವ ಮನೋಭಾವವನ್ನು ಕ್ರೀಡೆಯಲ್ಲಿ ಬೆಳೆಸಿಕೊಳ್ಳಬಹುದು. ಸೋಲು ಇಲ್ಲದೆ ಗೆಲುವು ಇಲ್ಲ ಸೋಲು- ಗೆಲುವು ಕ್ರೀಡೆ ಹಾಗೂ ಜೀವನದಲ್ಲಿ ಸಹಜ. ಆದರಿಂದಲೇ ಕ್ರೀಡಾ ಸ್ಪೂರ್ತಿಯಿಂದ ಸೋಲನ್ನು ಸ್ವೀಕರಿಸಬೇಕು ಎಂದರು.
ಮೈದಾನ ಅಭಿವೃದ್ಧಿ: ಕ್ರೀಡೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಈ ಹಿಂದೆ ನೀಡಿದ ಆಶ್ವಾಸನೆಯಂತೆ ಕ್ಷೇತ್ರದ 8 ಹೋಬಳಿ ಗಳಲ್ಲಿ ತಲಾ ಒಂದು ಮೈದಾನಕ್ಕೆ ರೂ.25 ಲಕ್ಷದಂತೆ ಒಟ್ಟು ಎರಡು ಕೋಟಿ ಅನುದಾನದಲ್ಲಿ ಕ್ರೀಡಾ ಮೈದಾನವನ್ನು ಪುನಶ್ಚೇತನ ಗೊಳಿಸುವ ನಿಟ್ಟಿನಲ್ಲಿ ಕಾರ್ಯ ಕಾರ್ಯಕ್ರಮ ಆರಂಭವಾಗಿದೆ. ಈಗಾಗಲೇ ವಿರಾಜಪೇಟೆ ತಾಲೂಕು ಮೈದಾನವನ್ನು ಪುನಶ್ಚೇತನ ಮಾಡಿ ಉದ್ಘಾಟಿಸಿದ ನಂತರ ಎರಡನೆಯ ಮೈದಾನವಾಗಿ ಹುದಿಕೇರಿಗೆ ಹೋಬಳಿಯ ಹುದಿಕೇರಿ ಜನತಾ ಪ್ರೌಢಶಾಲೆಯ ಮೈದಾನವನ್ನು ಅಭಿವೃದ್ಧಿಗೊಳಿಸಿ ಉದ್ಘಾಟಿಸಲಾಗುತ್ತಿದೆ. ಜನತಾ ಪ್ರೌಢಶಾಲೆ ತನ್ನದೇ ಆದ ಇತಿಹಾಸ ಹೊಂದಿದ್ದು ಇಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳು ಗಣ್ಯಾತಿಗಣ್ಯರು ಇದ್ದಾರೆ.ನನ್ನ ಗ್ರಾಮದ ಶಾಲೆ ಎಂಬ ಅಭಿಮಾನ ನನಗೆ ಇದೆ, ಈ ಶಾಲೆಯಲ್ಲಿ ಜಿಲ್ಲಾ ಮಟ್ಟದ ಕ್ರೀಡಾ ಕೂಟ ಆಯೋಜಿಸರುವುದು ಹೆಮ್ಮೆಯಾಗುತ್ತಿದೆ ಎಂದು ಪೊನ್ನಣ್ಣ ಹೇಳಿದರು.
ಹುದಿಕೇರಿ ಜನತಾ ಪ್ರೌಢಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಮಂಡಂಗಡ ಎಂ.ಅಶೋಕ್ ಮಾತನಾಡಿದರು. ಹುದಿಕೇರಿ ಗ್ರಾಪಂ ಅಧ್ಯಕ್ಷೆ ಕುಪ್ಪಣಮಾಡ ನಿವ್ಯ ಕಾವೇರಮ್ಮ, ಜಿಲ್ಲಾ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿಸ್ಮಯ ಚಕ್ರವರ್ತಿ, ಜಿಲ್ಲಾ ಶಿಕ್ಷಣಾಧಿಕಾರಿ ಬಿ.ಆರ್.ಗಾಯತ್ರಿ , ಕ್ಷೇತ್ರ ಶಿಕ್ಷಣಾಧಿಕಾರಿ ರವಿ ಇದ್ದರು.
————-
ಕೋಟ್
ಕೊಡಗು ಜಿಲ್ಲೆ ಕ್ರೀಡೆಯಲ್ಲಿ ಹೆಚ್ಚಿನ ಪ್ರಸಿದ್ಧಿ ಪಡೆದಿದೆ. ಕೊಡಗು ಜಿಲ್ಲೆಯಿಂದ ಪ್ರತಿನಿಧಿಸುವಷ್ಟು ಕ್ರೀಡಾಪಟುಗಳು ದೇಶದ ಬೇರೆ ಯಾವುದೇ ಜಿಲ್ಲೆಯಿಂದ ಪ್ರತಿನಿಧಿಸಲು ಸಾಧ್ಯವಿಲ್ಲ. ಒಲಿಂಪಿಕ್ನಿಂದ ರಾಷ್ಟ್ರೀಯ ಮತ್ತು ರಾಜ್ಯ ಮಟ್ಟದವರೆಗೂ ಕ್ರೀಡಾಪಟುಗಳನ್ನು ಜಿಲ್ಲೆಯು ಕೊಡುಗೆ ನೀಡಿದೆ. ಆದ್ದರಿಂದ ಇಂತಹ ಕ್ರೀಡಾ ಪರಂಪರೆ ಮುಂದುವರಿಸಬೇಕು ಜಿಲ್ಲೆಯ ನಾನಾ ಕಡೆ ಕ್ರೀಡಾಕೂಟ ಆಯೋಜಿಸಲಾಗುತ್ತಿದೆ. ಮಕ್ಕಳಲ್ಲಿ ಕ್ರೀಡಾ ಉತ್ಸಾಹ ಬೆಳೆಸುವ ಉದ್ದೇಶದಿಂದ ಇಂತಹ ಕ್ರೀಡಾಕೂಟ ಸಹಕಾರಿಯಾಗಲಿದೆ ಪೋಷಕರು ಸಹ ಆಸಕ್ತಿಯಿಂದ ಭಾಗವಹಿಸಿ ಮಕ್ಕಳಲ್ಲಿ ಕ್ರೀಡಾ ಸ್ಪೂರ್ತಿ ಬೆಳೆಸಲು ಪ್ರೋತ್ಸಾಹ ನೀಡಬೇಕು.
ಎ. ಎಸ್.ಪೊನ್ನಣ್ಣ
ಶಾಸಕ