ಯುವಜನ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ಸಿ.ಕೆ.ಹರೀಶ್ ಅಭಿಪ್ರಾಯ
ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟನೆ
ಪ್ರತಿನಿಧಿ ವರದಿ ಹಾಸನ
ಕ್ರೀಡೆಯಲ್ಲಿ ಭಾಗವಹಿಸುವುದರಿಂದ ಮನೋರಂಜನಯ ಜತೆಗೆ ಆರೋಗ್ಯದ ರಕ್ಷಣೆಗೂ ಸಹಕಾರಿಯಾಗಲಿದೆ ಎಂದು ಯುವಜನ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕ ಸಿ.ಕೆ.ಹರೀಶ್ ತಿಳಿಸಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಪತ್ರಿಕಾ ದಿನಾಚರಣೆ ಅಂಗವಾಗಿ ಹಾಗೂ ಪತ್ರಕರ್ತ ಎ.ಬಿ.ಮುರಳಿ ಅವರ ಸ್ಮರಣಾರ್ಥ ನಗರದ ಹಾಸನಾಂಬ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಜತೆಗೆ ಸಹಕಾರ ಮನೋಭಾವ, ಇತರರನ್ನು ಗೌರವಿಸುವುದು, ಸೋಲುಗೆಲುವನ್ನು ಸಮಾನವಾಗಿ ಸ್ವೀಕರಿಸುವ ಗುಣವು ಬೆಳೆಯುತ್ತದೆ. ಕ್ರೀಡೆಯಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಂಡಲ್ಲಿ ಸಮರ್ಪಣಾ ಭಾವದಿಂದ ಇರುತ್ತೇವೆ ಎಂದರು.
ಪ್ರತಿಯೊಬ್ಬರೂ ದಿನದಲ್ಲಿ ಒಂದು ಗಂಟೆ ಬಿಡುವು ಮಾಡಿಕೊಂಡು ಕ್ರೀಡಾ ಚಟುವಟಿಕೆಯಲ್ಲಿ ಭಾಗವಹಿಸುವುದು ಉತ್ತಮ. ಪತ್ರಕರ್ತರು ತಮ್ಮ ವೃತ್ತಿ ಜತೆಗೆ ಕೌಟುಂಬಿಕ ಬದುಕಿನ ಏಳಿಗೆಗೆ ಸಮಯ ಮೀಸಲಿಡಬೇಕು. ಪ್ರತಿ ವರ್ಷ ಕ್ರೀಡಾ ಚಟುವಟಿಕೆಗೆ ನಮ್ಮ ಸಹಕಾರ ಇರಲಿದೆ ಎಂದರು.
ಜಿಲ್ಲಾ ವಾರ್ತಾಧಿಕಾರಿ ಮೀನಾಕ್ಷಮ್ಮ ಮಾತನಾಡಿ, ಪತ್ರಕರ್ತರ ಸಂಘವು ಸಂಘಟಿತವಾಗಿ ಪ್ರತಿ ವರ್ಷ ಕ್ರೀಡಾಕೂಟವನ್ನು ಆಯೋಜನೆ ಮಾಡುತ್ತಿರುವುದು ಸಂತಸದ ವಿಷಯ, ಮತ್ತಷ್ಟು ಉತ್ತಮ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಿ ಎಂದು ಶುಭ ಕೋರಿದರು.
ಪತ್ರಕರ್ತರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ಎಚ್.ವೇಣುಕುಮಾರ್ ಮಾತನಾಡಿ, ಪ್ರತಿ ವರ್ಷವೂ ಕ್ರೀಡಾಕೂಟವನ್ನು ಆಯೋಜನೆ ಮಾಡುತ್ತಿದ್ದು, ಈ ಬಾರಿ ನಮ್ಮೆಲ್ಲರ ಹಿತೈಷಿ, ಸ್ನೇಹಿತ ಎ.ಬಿ ಮುರಳಿ ಅವರ ಸ್ಮರಣಾರ್ಥ ಬ್ಯಾಡ್ಮಿಂಟನ್ ಪಂದ್ಯಾವಳಿಯನ್ನು ಆಯೋಜನೆ ಮಾಡಲಾಗಿದೆ ಎಂದರು.
ಜನಪ್ರಿಯ ಆಸ್ಪತ್ರೆಯ ಮುಖ್ಯಸ್ಥ ಡಾ.ಬಶೀರ್, ಪತ್ರಕರ್ತರ ಸಂಘದ ವಿಶೇಷ ಆಹ್ವಾನಿತ ರವಿನಾಕಲಗೂಡು, ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಸಿ.ಶಶಿಧರ್, ಉಪಾಧ್ಯಕ್ಷರಾದ ಕೆ.ಎಂ.ಹರೀಶ್, ಎಚ್.ಟಿ.ಮೋಹನ್, ಕಾರ್ಯದರ್ಶಿ ಸಿ.ಬಿ.ಸಂತೋಷ್, ಸಂಗಮ್, ಕಾರ್ಯಕಾರಿ ಸಮಿತಿ ಸದಸ್ಯರು, ಹಿರಿಯ ಕಿರಿಯ ಸದಸ್ಯರು ಹಾಜರಿದ್ದರು.