ಪ್ರತಿನಿಧಿ ವರದಿ ತಲಕಾಡು
ಐ.ಕ್ಯೂ.ಎ.ಸಿ ಘಟಕದ ಸಹಯೋಗದಲ್ಲಿ ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದ ವತಿಯಿಂದ ಪ್ರಸ್ತುತ ದಿನಗಳಲ್ಲಿ ಕ್ರೀಡೆ ಹಾಗೂ ಯೋಗದ ಮಹತ್ವ ಎಂಬ ವಿಷಯದ ಕುರಿತು, ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ತಲಕಾಡಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಬೈರಾಪುರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕರಾದ ಪಿ.ಕೆ.ಶಶಿರೇಖಾ ರವರು ಪಾಲ್ಗೊಂಡು ವಿಶೇಷ ಉಪನ್ಯಾಸ ನೀಡಿದರು. ಉಪನ್ಯಾಸದಲ್ಲಿ ಪ್ರಸ್ತುತ ದಿನಗಳಲ್ಲಿ ಕ್ರೀಡೆ ಹಾಗೂ ಯೋಗವು ಹೊಂದಿರುವ ಮಹತ್ವವನ್ನು ಕುರಿತು ಸವಿಸ್ತಾರ ಮಾಹಿತಿಯನ್ನು ವಿದ್ಯಾರ್ಥಿಗಳಿಗೆ ನೀಡಿದರು.
ದೈನಂದಿನ ಬದುಕಿನ ಅನುಭವಗಳೊಂದಿಗೆ ಕ್ರೀಡೆ ಹಾಗೂ ಯೋಗವನ್ನು ಅನುಸಂಧಾನ ಮಾಡುತ್ತ, ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಕ್ರೀಡೆ ಹಾಗೂ ಯೋಗವನ್ನು ಸರಿಯಾದ ರೀತಿಯಲ್ಲಿ ಅಳವಡಿಸಿಕೊಂಡರೆ ಯಶಸ್ಸು ಸಾಧಿಸಬಹುದು ಎಂದು ಅವರು ತಿಳಿಸಿದರು.
ಕಾರ್ಯಕ್ರಮವನ್ನು ಕಾಲೇಜಿನ ಪತ್ರಾಂಕಿತ ವ್ಯವಸ್ಥಾಪಕ ಮಹೇಶ್ ಎಸ್ ರವರು ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಭಾರಿ ಪ್ರಾಂಶುಪಾಲರು ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರಾದ ನಾಗಣ್ಣ ಎಂ ಎಸ್ ರವರು ಕಾರ್ಯಕ್ರಮ ಆಯೋಜಿಸಿದ್ದರು.
ಕಾಲೇಜಿನ ಹಿರಿಯ ಬೋಧಕರು ಹಾಗೂ ವಾಣಿಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ.ಹರಿಶ್ ಡಿ, ಐ.ಕ್ಯೂ.ಎ.ಸಿ ಘಟಕದ ಸಹ ಸಂಚಾಲಕ ನಾಗೇಂದ್ರ ಪ್ರಸಾದ್, ಎ.ಎಂ. ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಜಿ.ಎನ್. ಕೆಂಪೇಗೌಡ, ಕಾಲೇಜಿನ ಅತಿಥಿ ಉಪನ್ಯಾಸಕರು, ಬೋಧಕೇತರ ವರ್ಗದವರು ಹಾಗೂ ಕಾಲೇಜಿನ ಪದವಿ ತರಗತಿಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.