ಕೇಂದ್ರ ಸರ್ಕಾರ ಇತ್ತೀಚೆಗೆಷ್ಟೇ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಜಾರಿ ಮಾಡಿತ್ತು. ಇದೀಗ ಇದನ್ನು ದೇಶದ್ಯಾಂತ ಅನುಷ್ಠಾನ ಮಾಡಲಾಗಿದೆ. ಆದರೆ ಈ ಕಾನೂನಿಗೆ ಕೆಲವು ರಾಜ್ಯಗಳು ಅಂದರೆ ಬಿಜೆಪಿಯೇತರ ಸರ್ಕಾರಗಳು ವಿರೋಧಿಸಿದೆ. ಈ ಕಾನೂನನ್ನು ಜಾರಿ ಮಾಡಿರುವುದು ಕೇಂದ್ರ, ಇದನ್ನು ಅನುಷ್ಠಾನ ಮಾಡುವುದಿಲ್ಲ ಎನ್ನುವ ಅಧಿಕಾರ ರಾಜ್ಯಗಳಿಗೆ ಇದ್ದೀಯಾ? ಅಥವಾ ಈ ಕಾನೂನನ್ನು ವಿರೋಧಿಸುವ ಅವಕಾಶ ಅವರಿಗೆ ಯಾರು ನೀಡಿದ್ದು? ಎಂಬ ಪ್ರಶ್ನೆಗಳು ಹುಟ್ಟಿಕೊಂಡಿದೆ. ಈ ಬಗ್ಗೆ ಕೇಂದ್ರ ಗೃಹಸಚಿವ ಅಮಿತ್ ಶಾ ಎಎನ್ಐ ನಡೆಸಿದ ಸಂದರ್ಶನದಲ್ಲಿ ಉತ್ತರಿಸಿದ್ದಾರೆ. ಸಿಎಎಯನ್ನು ತಮಿಳುನಾಡು, ಕೇರಳ, ಪಶ್ಚಿಮ ಬಂಗಾಳ ರಾಜ್ಯಗಳು ವಿರೋಧಿಸಿದೆ. ಈ ಬಗ್ಗೆ ಉತ್ತರಿಸಿದ ಶಾ, ಸಿಎಎ ಸಂವಿಧಾನದ ಯಾವುದೇ ನಿಬಂಧನೆಗಳನ್ನು ಉಲ್ಲಂಘಿಸುವುದಿಲ್ಲ ಮತ್ತು ಪೌರತ್ವಕ್ಕೆ ಸಂಬಂಧಿಸಿದ ಕಾನೂನುಗಳನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರಕ್ಕೆ ಮಾತ್ರ ಅಧಿಕಾರವಿದೆ. ಈ ಕಾನೂನನ್ನು ಮೋದಿ ಸರ್ಕಾರ ತಂದಿದೆ ಮತ್ತು ಅದನ್ನು ರದ್ದುಗೊಳಿಸುವುದು ಅಸಾಧ್ಯ ಎಂದು ಹೇಳಿದರು.
ಈ ವಿಚಾರವನ್ನು ಇಟ್ಟುಕೊಂಡು ವಿರೋಧ ಪಕ್ಷದ ನಾಯಕರು ತುಷ್ಟೀಕರಣ ರಾಜಕಾರಣ ಮಾಡುತ್ತಿದ್ದಾರೆ ಎಂದು ಹೇಳಿದರು. ಅದರ ಅನುಷ್ಠಾನವನ್ನು ನಿರಾಕರಿಸುವ ಹಕ್ಕು ನಿಮಗೆ ಇದೆಯೇ? ಅವರು ಇದನ್ನು ಅರ್ಥಮಾಡಿಕೊಳ್ಳಬೇಕು. ನಮ್ಮ ಸಂವಿಧಾನದಲ್ಲಿ, ಪೌರತ್ವಕ್ಕೆ ಸಂಬಂಧಿಸಿದ ಕಾನೂನುಗಳನ್ನು ಮಾಡುವ ಹಕ್ಕನ್ನು ಸಂಸತ್ತಿಗೆ ಮಾತ್ರ ನೀಡಲಾಗಿದೆ. ಇದು ಕೇಂದ್ರ ಸರ್ಕಾರದ ಅಧಿಕಾರ. ಹಾಗಾಗಿ ರಾಜ್ಯದಲ್ಲಿ ಕಾನೂನು ಮತ್ತು ಅದರ ಅನುಷ್ಠಾನ ಎರಡನ್ನೂ ಕೇಂದ್ರ ಮಾಡುತ್ತದೆ. ಲೋಕಸಭೆ ಚುನಾವಣೆ ನಂತರ ಎಲ್ಲ ರಾಜಕೀಯ ಪಕ್ಷಗಳು ಒಂದೆಡೆ ಬಂದು ಸಹಕಾರ ನೀಡಲಿವೆ ಎಂದು ಹೇಳಿದರು.