ಕಾಲಕ್ಕೆ ತಕ್ಕಂತೆ ಎಲ್ಲವೂ ಬದಲಾಗಬೇಕು. ಆದರೆ ಜಿಡ್ಡುಗಟ್ಟಿದ ವ್ಯವಸ್ಥೆಯಲ್ಲಿ ಕೆಲವು ಬಾರಿ ಬದಲಾವಣೆ ಮಾಡಲು ಸಾಧ್ಯವಾಗದ ಸ್ಥಿತಿಯನ್ನು ಅಧಿಕಾರಿಗಳು ನಿರ್ಮಾಣ ಮಾಡಿರುತ್ತಾರೆ. ಆದರೆ, ಇದೀಗ ಅದೆಲ್ಲವನ್ನೂ ಸರಿ ದಾರಿಗೆ ತರಲು ಕಂದಾಯ ಇಲಾಖೆ ವಿನೂತನ ಪ್ರಯತ್ನಕ್ಕೆ ನಾಂದಿ ಹಾಡಿದೆ. ಕಂದಾಯ ಇಲಾಖೆಯ ಎಲ್ಲಾ ದಾಖಲೆಗಳನ್ನು ಡಿಜಿಟಲೀಕರಣ ಮಾಡಲು ಮುಂದಾಗಿದೆ. ವಿಶೇಷವೆಂದ್ರೇ ರಾಜ್ಯದಲ್ಲಿ ಡಿಜಿಟಲೀಕರಣ ಮಾಡೋದ್ರಲ್ಲಿ ಬಳ್ಳಾರಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ.
ಸಾರ್ವಜನಿಕರಿಗೆ ಲಭ್ಯವಾಗೋ ರೀತಿಯಲ್ಲಿ ದಾಖಲೆ ಡಿಜಿಟಲೀಕರಣ: ಕಂದಾಯ ಇಲಾಖೆಯ ದಾಖಲೆಗಳು ಈ ಹಿಂದೆ ಇದ್ದಕ್ಕಿಂದ್ದಂತೆ ಮಾಯವಾಗುತ್ತಿದ್ದವು. ಕೆಲವು ಬಾರಿ ಸುಟ್ಟು ಹೋಗಿರುವ ಉದಾಹರಣೆಗಳಿವೆ. ದಶಕಗಳಿಂದ ಇರೋ ಹಳೇಯ ದಾಖಲೆಗಳನ್ನು ಸಂಗ್ರಹ ಮಾಡಿ ಸ್ಕಾನಿಂಗ್ ಮಾಡಿ ಹೊಸ ತಂತ್ರಾಂಶಕ್ಕೆ ತಕ್ಕಂತೆ ಬದಲಾವಣೆ ಮಾಡಲು ಮುಂದಾಗಿದೆ ಕಂದಾಯ ಇಲಾಖೆ.. ಹೌದು, ಆಧುನಿಕ ಜಗತ್ತಿನಲ್ಲಿ ಎಲ್ಲವೂ ಡಿಜಿಟಲ್ ಆಗಿದೆ. ಕಂಪ್ಯೂಟರ್ ಬಂದ ಮೇಲೆ ಮೊದಲು ಖಾಸಗಿ ಸಂಸ್ಥೆಗಳು ಇದೀಗ ಸರ್ಕಾರದ ಎಲ್ಲ ಇಲಾಖೆಗಳು ಆಧುನಿಕತೆಗೆ ತಕ್ಕಂತೆ ಎಲ್ಲ ರೀತಿಯ ತಂತ್ರಾಂಶವನ್ನು ಬದಲಾವಣೆ ಮಾಡಿಕೊಂಡಿವೆ. ಆದರೆ, ಈ ವಿಚಾರದಲ್ಲಿ ಕಂದಾಯ ಇಲಾಖೆ ಮಾತ್ರ ಬಹಳ ಹಿಂದೆ ಬಿದ್ದಿತ್ತು.
ಇದೀಗ ಕಂದಾಯ ಸಚಿವ ಕೃಷ್ಣ ಬೈರೆಗೌಡ ಅವರ ಇಚ್ಚಾಶಕ್ತಿಯಿಂದ ಇಡೀ ಇಲಾಖೆಯ ದಾಖಲೆಗಳನ್ನು ಡಿಜಿಟಲೀಕರಣ ಮಾಡಲಾಗ್ತಿದೆ. ಇದೀಗ ಈ ಕೆಲಸದಲ್ಲಿ ಬಳ್ಳಾರಿ ಮೊದಲ ಸ್ಥಾನದಲ್ಲಿದೆ. ಬ್ರಿಟಿಷರ, ನಿಜಾಮರ ಕಾಲದ ದಾಖಲೆ ಸೇರಿದಂತೆ ದಶಕಗಳಿಂದಲೂ ಕಂದಾಯ ಇಲಾಖೆಯಲ್ಲಿ ಕಾಗದದ ರೂಪದಲ್ಲಿರೋ ಎಲ್ಲಾ ದಾಖಲೆಗಳನ್ನು ಇಂದಿನ ದಿನಮಾನಕ್ಕೆ ತಕ್ಕಂತೆ ಬದಲಾವಣೆ ಮಾಡೋದ್ರ ಜೊತೆ ಎಲ್ಲವನ್ನು ಸ್ಕಾನಿಂಗ್ ಮಾಡಿ ಸಂಗ್ರಹ ಮಾಡೋ ಕೆಲಸ ಮಾಡಲಾಗುತ್ತಿದೆ. ಈ ರೀತಿಯಲ್ಲಿ ಡಿಜಿಟಲೀಕರಣ ಮಾಡೋದ್ರಿಂದ ಇಲಾಖೆಗೂ ಸೇರಿದಂತೆ ಸಾರ್ವಜನಿಕರಿಗೂ ದಾಖಲೆಗಳು ಬೇಕಾದಾಗ ಲಭ್ಯವಿರುತ್ತದೆ. ವಿಶೇಷವೆಂದ್ರೆ, ಈಗಾಗಲೇ 80ರಷ್ಟು ಡಿಜಿಟಲೀಕರಣ ಮಾಡೋ ಮೂಲಕ ರಾಜ್ಯದಲ್ಲಿಯೇ ಬಳ್ಳಾರಿ ಮೊದಲ ಸ್ಥಾನದಲ್ಲಿದೆ.
ಹೊಸ ತಂತ್ರಜ್ಞಾನದೊಂದಿಗೆ ದಾಖಲೆ ಸಂಗ್ರಹ: ಕಾಗದದ ರೂಪದಲ್ಲಿರೋ ದಾಖಲೆಗಳನ್ನು ಅದೆಷ್ಟೋ ಬಾರಿ ತಿರುಚಿದ್ದಾರೆ. ಕೆಲವೊಮ್ಮೆ ದಾಖಲೆಗಳನ್ನು ಸುಟ್ಟಿವೆ. ಕಳೆದು ಹೋಗಿವೆ ಎನ್ನುವ ಸಿದ್ಧ ಉತ್ತರವನ್ನು ಅಧಿಕಾರಿಗಳು ನೀಡಿದ ಉದಾಹರಣೆಗಳಿವೆ. ಹೀಗಾಗಿ ಈ ರೀತಿಯಲ್ಲಿ ಎಲ್ಲಾ ದಾಖಲೆಗಳನ್ನು ಡಿಜಿಟಲೀಕರಣ ಮಾಡಿ ಸಾಫ್ಟವೇರ್ ಗಳಿಗೆ ಅಪ್ಲೋಡ ಮಾಡಿಟ್ಟರೇ ಕಂದಾಯ ಇಲಾಖೆ ದಾಖಲೆಗಳು ಶಾಶ್ವತವಾಗಿ ಸುರಕ್ಷಿತವಾಗಿರತ್ತವೆ ಅನ್ನೋದು ಸರ್ಕಾರದ ಲೆಕ್ಕಾಚಾರ. ಅಲ್ಲದೇ ಹಣಕ್ಕಾಗಿ ಕೆಲ ಬ್ರೋಕರ್ಗಳು ದಾಖಲೆಗಳನ್ನು ಮರುಸೃಷ್ಠಿ ಮಾಡಿ ಸರ್ಕಾರಿ ಸ್ಥಳವನ್ನು ಕಬಳಿಸೋದು ತಪ್ಪುತ್ತದೆ.
ಶಾಶ್ವತವಾಗಿ ಉಳಿಯಲಿವೆ ದಾಖಲೆ ಪತ್ರಗಳು: ಇದು ಕೇವಲ ಅಕ್ರಮ ತಡೆಯೋದು ಮಾತ್ರವಲ್ಲದೇ ಎಲ್ಲರಿಗೂ ಎಲ್ಲ ಕಾಲಕ್ಕೂ ದಾಖಲೆಗಳು ಅವಶಕತೆಗೆ ತಕ್ಕಂತೆ ಶೀಘ್ರದಲ್ಲಿ ಸಿಗುತ್ತದೆ. ಅಲ್ಲದೇ ದಶಕಗಳ ದಾಖಲೆಗಳನ್ನು ಶಾಶ್ವತವಾಗಿ ಉಳಿಸುವ ನಿಟ್ಟಿನಲ್ಲಿ ಕಂದಾಯ ಇಲಾಖೆ ತೆಗೆದು ಕೊಂಡಿರೋ ಕ್ರಮ ನಿಜಕ್ಕೂ ವಿಶೇವಾಗಿದೆ.