– ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ
ಪ್ರತಿನಿಧಿ ವರದಿ ಮೈಸೂರು
ಪ್ರತಿಷ್ಠೆಯ ಕಣವಾಗಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಜಿದ್ದಾಜಿದ್ದಿನ ಚುನಾವಣೆಗೆ ಸಾಕ್ಷಿಯಾಗಲು ಸಜ್ಜಾಗಿದೆ. ಲೋಕಸಭಾ ಸಾರ್ವತ್ರಿಕ ಚುನಾವಣೆಗೆ ನಾಮಪತ್ರ ಸಲ್ಲಿಕೆಗೆ ಅಂತಿಮ ದಿನವಾದ ಗುರುವಾರ ಒಂದೇ ದಿನ 13 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಇದರೊಂದಿಗೆ ಒಟ್ಟು 28 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.
ಪಕ್ಷೇತರ ಅಭ್ಯರ್ಥಿಗಳಾಗಿ ಪಿ.ಕೆ.ದರ್ಶನ್ ಶೌರಿ, ರಾಜು, ಸಣ್ಣ ನಾಯಕ, ಅಂಬೇಡ್ಕರ್ ಸಿ.ಜೆ, ರಾಜಣ್ಣ, ರಾಮಯ್ಯ.ಡಿ, ಆರ್.ಮಹೇಶ್, ಡಿ. ಎನ್.ನವೀನ್ ಕುಮಾರ್ ಹಾಗೂ ಶಿವಕುಮಾರ್ ಜೆ ನಾಮಪತ್ರ ಸಲ್ಲಿಸಿದ್ದಾರೆ. ಸಮಾಜವಾದಿ ಜನತಾ ಪಕ್ಷದ ಅಭ್ಯರ್ಥಿಯಾಗಿ(ಕರ್ನಾಟಕ) ಎಚ್.ಎಂ. ನಂಜುಂಡಸ್ವಾಮಿ, ಕರ್ನಾಟಕ ಜನತಾ ಪಕ್ಷದ ಅಭ್ಯರ್ಥಿಯಾಗಿ ಎನ್. ಅಂಬರೀಷ್, ಜಾತ್ಯತೀತ ಪ್ರಜಾಪ್ರಭುತ್ವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿ ಎ.ಜಿ. ರಾಮಚಂದ್ರರಾವ್ ಹಾಗೂ ಬಹುಜನ ಸಮಾಜ ಪಕ್ಷ ಅಭ್ಯರ್ಥಿಯಾಗಿ ರೇವತಿ ರಾಜ್ ನಾಮಪತ್ರ ಸಲ್ಲಿಸಿದ್ದಾರೆ.
ಒಟ್ಟಾರೆ ನಾಮಪತ್ರ ಸಲ್ಲಿಕೆಯ ಕೊನೆಯ ದಿನದವರೆಗೆ 28 ಅಭ್ಯರ್ಥಿಗಳಿಂದ 37 ಸೆಟ್ ನಾಮಪತ್ರ ಸಲ್ಲಿಕೆಯಾಗಿದೆ. ನಾಮಪತ್ರ ಸಲ್ಲಿಕೆಯ ದಿನಾಂಕ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಏ.5ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಉಮೇದುವಾರಿಕೆ ಹಿಂಪಡೆಯಲು ಏ.8 ಕೊನೆಯ ದಿನವಾಗಿದೆ.
ಇಬ್ಬರು ಮಹಿಳೆಯರ ನಾಮಪತ್ರ: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ನಾಮಪತ್ರ ಸಲ್ಲಿಕೆಸಿರುವ 28 ಅಭ್ಯರ್ಥಿಗಳಲ್ಲಿ ಇಬ್ಬರು ಮಹಿಳೆಯರು ಉಮೇದುವಾರಿಕೆ ಸಲ್ಲಿಸಿದ್ದಾರೆ. ಉತ್ತಮ ಪ್ರಜಾಕೀಯ ಪಕ್ಷದಿಂದ ಜೆ.ಎಸ್. ಲೀಲಾವತಿ ಹಾಗೂ ಬಹುಜನ ಸಮಾಜವಾದಿ ಪಕ್ಷದಿಂದ ರೇವತಿರಾಜ್ ಅವರುಗಳು ನಾಮಪತ್ರ ಸಲ್ಲಿಸಿದ್ದಾರೆ.