ಚಿಕ್ಕಬಳ್ಳಾಪುರ : ಎರಡು ಕಳ್ಳತನ ಪ್ರಕರಣಗಳನ್ನು ಭೇದಿಸುವಲ್ಲಿ ಯಶಸ್ವಿಯಾಗಿರುವ ನಗರ ಹಾಗೂ ನಂದಿ ಗಿರಿಧಾಮ ಪೊಲೀಸ್ ಠಾಣೆಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿ, ಹಲವು ಕಳವು ಮಾಲನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ಹುಂಡಿ ಕಳ್ಳನ ಬಂಧನ: ಕಳೆದ ಮೇ.೧೨ ರಂದು ಎಸ್ಜೆಸಿಐಟಿ ಕಾಲೇಜಿನ ಬಳಿಯಿರುವ ಶ್ರೀಆಂಜನೇಯಸ್ವಾಮಿ ದೇವಾಲಯದಲ್ಲಿನ ಹುಂಡಿ ಕಳ್ಳತನವಾಗಿದೆ ಎಂದು ಬಿಜಿಎಸ್ ಸಂಸ್ಥಾನಮಠದ ದೂರಿನನ್ವಯ ಪ್ರಕರಣವನ್ನು ದಾಖಲಿಸಿಕೊಂಡಿದ್ದ ನಂದಿ ಗಿರಿಧಾಮ ಪೊಲೀಸ್ ಠಾಣೆಯ ಪೊಲೀಸರು ಶಿರಾ ತಾಲೂಕಿನ ಭೂತೇಶ್ವರ ನಗರದ ತಿಪ್ಪೇಶ ಎಂಬ ಆರೋಪಿಯನ್ನು ಬಂಧಿಸಿದ್ದಾರೆ. ಆರೋಪಿ ತಿಪ್ಪೇಶ ವಿರುದ್ಧ ಈಗಾಗಲೇ ಕೋಲಾರ ನಗರ, ಶ್ರೀನಿವಾಸಪುರ, ಹೋಸಕೋಟೆ ಪೊಲೀಸ್ ಠಾಣೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿದೆ.
ಎಸ್ಪಿ ಡಿ.ಎಲ್.ನಾಗೇಶ್ ನಿರ್ದೇಶನದಂತೆ ಅಪರ ಪೊಲೀಸ್ ಅಧೀಕ್ಷಕ ರಾಜ ಇಮಾಮ್ ಖಾಸಿಂ ಮಾರ್ಗದರ್ಶನದಲ್ಲಿ ವೃತ್ತನಿರೀಕ್ಷಕ ಹರೀಶ್ ಕುಮಾರ್, ಪಿಎಸ್ಐ ಗುರುನಾಥ ಹಾಗೂ ಸಿಬ್ಬಂದಿ ನವೀನ್ ಬಾಬು, ವೆಂಕಟೇಶಮೂರ್ತಿ, ವಿಜಯ್ ಕುಮಾರ್, ರವೀಂದ್ರ, ಮುನಿಕೃಷ್ಣ ತಂಡವು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೈಕ್ ಕಳ್ಳನ ಬಂಧನ-೧೯ ಬೈಕ್ ವಶ: ವಿವಿಧೆಡೆಗಳಲ್ಲಿ ಬೈಕ್ಗಳನ್ನು ಕಳ್ಳತನ ಮಾಡುತ್ತಿದ್ದ ಅಂತರಾಜ್ಯ ಕಳ್ಳನನ್ನು ಬಂಧಿಸಿರುವ ನಗರ ಪೊಲೀಸ್ ಠಾಣೆಯ ಪೊಲೀಸರು, ಆರೋಪಿಯಿಂದ ಸುಮಾರು ೮ ಲಕ್ಷ ಮೌಲ್ಯದ ೧೯ ವಿವಿಧ ಕಂಪನಿಗಳ ಬೈಕ್ಗಳನ್ನು ವಶಕ್ಕೆ ಪಡೆದಿರುವ ಘಟನೆ ನಡೆದಿದೆ.
ನೆರೆಯ ಆಂಧ್ರದ ಹಿಂದೂಪುರ ನಗರದ ಮಾಡೆಲ್ನಗರದ ನಿವಾಸಿ ಬಿ.ಸುಮಂತ್ ಅಲಿಯಸ್ ಪುಲಿ ಬಂಧಿತ ಆರೋಪಿ. ಕಳೆದ ಫೆ.೨೨ ರಂದು ನಗರದ ದಿನ್ನೇಹೊಸಹಳ್ಳಿ ರಸ್ತೆಯಲ್ಲಿ ಬೈಕ್ ತಳ್ಳಿಕೊಂಡು ಹೋಗುತ್ತಿದ್ದ ಆರೋಪಿ ಸುಮಂತ್ ಗಸ್ತಿನಲ್ಲಿದ್ದ ಪೊಲೀಸರನ್ನು ಕಂಡು ಪರಾರಿಯಾಗಲು ಯತ್ನಿಸಿದ್ದು, ಈ ವೇಳೆ ಆರೋಪಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ ವೇಳೆ ಬೈಕ್ ಕಳ್ಳತನದ ಕುರಿತು ತಿಳಿಸಿದ್ದಾನೆ.
ಎಸ್ಪಿ ಡಿ.ಎಲ್.ನಾಗೇಶ್, ಅಪರ ಪೊಲೀಸ್ ಅಧೀಕ್ಷಕ ರಾಜ ಇಮಾಮ್ ಖಾಸಿಂ, ಪೊಲೀಸ್ ಉಪಾಧೀಕ್ಷಕ ಎಸ್.ಶಿವಕುಮಾರ್, ವೃತ್ತ ನಿರೀಕ್ಷಕ ಎಂ.ಮಂಜುನಾಥ್ ಮಾರ್ಗದರ್ಶನದಲ್ಲಿ ಹೆಚ್ಚಿನ ವಿಚಾರಣೆಗೆ ಒಳಪಡಿಸಿದ ವೇಳೆಯಲ್ಲಿ ಆರೋಪಿಯು ಕಳೆದ ೬ ತಿಂಗಳಿಂದ ಬೆಂಗಳೂರು ನಗರ, ಯಲಹಂಕ, ದೊಡ್ಡಬಳ್ಳಾಪುರ, ಗೌರಿಬಿದನೂರು, ವಿಧುರಾಶ್ವತ್ಥ ಹಾಗೂ ಇನ್ನಿತರೆ ಕಡೆಗಳಲ್ಲಿ ಬೈಕ್ಗಳನ್ನು ಕಳವು ಮಾಡುತ್ತಿರುವುದಾಗಿ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ.
ಆರೋಪಿಯ ಸುಳಿವಿನ ಮೇರೆಗೆ ಪಿಎಸ್ಐ ನಾಗೇಂದ್ರಪ್ರಸಾದ್, ಎಎಸ್ಐ ಮುರಳಿಧರ, ಸಿಬ್ಬಂದಿ ರಿಜ್ವಾನ್ವುಲ್ಲಾ, ಲಕ್ಷ್ಮಣ, ಮಧುಸೂಧನ್, ಗೊಂದಿ, ಹರೀಶ್ ಅವರ ತಂಡ ಕಾರ್ಯಾಚರಣೆಯನ್ನು ನಡೆಸಿ ಸುಮಾರು ೮ ಲಕ್ಷ ಮೌಲ್ಯದ ೧೯ ವಿವಿಧ ಕಂಪನಿಗಳ ಬೈಕ್ಗಳನ್ನು ವಶಕ್ಕೆ ಪಡೆದಿದ್ದಾರೆ.
ಎರಡೂ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿರುವ ಪೊಲೀಸ್ ತಂಡಗಳನ್ನು ಎಸ್ಪಿ ನಾಗೇಶ್ ಅಭಿನಂದಿಸಿದ್ದಾರೆ.