ಪ್ರತಿನಿಧಿ ವರದಿ ಮೈಸೂರು
ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಯಲ್ಲಿ ರೋಬೋಟಿಕ್ ಶಸ್ತ್ರಚಿಕಿತ್ಸೆ ವಿಧಾನದಿಂದ ರೋಗಿಯೊಬ್ಬರ ನಾಲಿಗೆ ಕ್ಯಾನ್ಸರ್ಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ ಎಂದು ಡಾ.ಕೆ.ಆರ್. ಸುಹಾಸ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಇತ್ತೀಚಿಗೆ ಸುಮಾರು ೪೦ ವರ್ಷದ ಮಹಿಳೆಯೊಬ್ಬರು ಊದಿರುವ ನಾಲಿಗೆ ಸಮಸ್ಯೆ ಕಾರಣ ನಗರದ ನಾರಾಯಣ ಆಸ್ಪತ್ರೆಗೆ ಬಂದಿದ್ದರು. ವೈದ್ಯಕೀಯ ತಪಾಸಣೆ ಬಳಿಕ ಇವರಿಗೆ ನಾಲಿಗೆಯಲ್ಲಿ ಕ್ಯಾನ್ಸರ್ ಗಡ್ಡೆ ಇರುವುದು ಪತ್ತೆಯಾಯಿತು. ಹೀಗಾಗಿ ತಾವು ರೋಬೋಟಿಕ್ ಶಸ್ತ್ರಚಿಕಿತ್ಸೆಗೆ ಸಲಹೆ ನೀಡಿದ್ದು, ಬಳಿಕ ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿ ಆಸ್ಪತ್ರೆಗೆ ಕರೆದೊಯ್ದು, ನೂತನ ವಿಧಾನದ ಮೂಲಕ ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಈ ವಿಧಾನದಿಂದ ಯಾವುದೇ ದೊಡ್ಡ ಛೇದನವಿಲ್ಲದೇ ಗಡ್ಡೆಗಳನ್ನು ತೆಗೆದುಹಾಕಬಹುದಾಗಿದೆ. ಇದರಿಂದಾಗಿ ಈಗ ರೋಗಿ ಶೀಘ್ರ ಚೇತರಿಕೆ ಕಂಡಿದ್ದಾರೆ ಎಂದು ಮಾಹಿತಿ ನೀಡಿದರು. ತಲೆ, ಕತ್ತಿನ ಕ್ಯಾನ್ಸರ್, ಮೂತ್ರನಾಳದ ಸಮಸ್ಯೆ ಮತ್ತು ಮಹಿಳೆಯರಿಗೆ ಸಾಮಾನ್ಯವಾದ ಆರೋಗ್ಯ ಸಂಬಂಧೀ ಸಮಸ್ಯೆಗಳ ವೇಳೆ ಈ ಅತ್ಯಾಧುನಿಕ ರೋಬೋಟಿಕ್ ಶಸ್ತ್ರಚಿಕಿತ್ಸಾ ವಿಧಾನ ಉಪಕಾರಿಯಾಗಿದೆ ಎಂದರು. ಗೋಷ್ಠಿಯಲ್ಲಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ಎನ್.ರವಿ ಹಾಜರಿದ್ದರು.
==================
ಜೂ.2ಕ್ಕೆ ಕರುಣಾಮಯಿ ಶಾಲೆ ಕಟ್ಟಡ ಉದ್ಘಾಟನೆ
ಪ್ರತಿನಿಧಿ ವರದಿ ಮೈಸೂರು
ಮೈಸೂರಿನ ಆರ್.ಟಿ. ನಗರದಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಕರುಣಾಮಯಿ ಫೌಂಡೇಷನ್ ವಿಶೇಷ ಮಕ್ಕಳ ಶಾಲೆಯ ನೂತನ ಕಟ್ಟಡ “ಆವಿಷ್ಕಾರ”ದ ಉದ್ಘಾಟನಾ ಸಮಾರಂಭ ಜೂ.2ರಂದು ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಜಿ.ಸಿ. ಚಿರಣ್ಕುಮಾರ್ ತಿಳಿಸಿದರು. ಕಳೆದ ಹಲವು ವರ್ಷದಿಂದ ಜನತಾನಗರದಲ್ಲಿ ನಡೆಯುತ್ತಿದ್ದ ಕರುಣಾಮಯಿ ಫೌಂಡೇಷನ್ ವಿಶೇಷ ಮಕ್ಕಳ ಶಾಲೆಗೆ ದ್ವಾರಕಾನಗರ ಬಡಾವಣೆಯ ರೋಟರಿ ಸಂಸ್ಥೆಯ ಮಾನಸ ಕುಟೀರದಲ್ಲಿ ನೂತನ ಕಟ್ಟಡ ನಿರ್ಮಿಸಲಾಗಿದೆ. ಈ ನೂತನ ಕಟ್ಟಡದ ಉದ್ಘಾಟನಾ ಸಮಾರಂಭ ಜೂ.೨ರಂದು ಬೆಳಗ್ಗೆ ೧೦.೩೦ಕ್ಕೆ ನಡೆಯಲಿದ್ದು, ಉದ್ಘಾಟನಾ ಸಮಾರಂಭದಲ್ಲಿ ರಾಜವಂಶಸ್ಥ ಯದುವೀರ್ ಒಡೆಯರ್, ಬಾಲಾಜಿ ಶ್ರೀನಿವಾಸನ್, ಡಿ. ಸುಧನ್ವ, ಎಸ್. ರಾಘವೇಂದ್ರ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು. ಕರುಣಾಮಯಿ ಫೌಂಡೇಷನ್ನ ವಿಶೇಷ ಮಕ್ಕಳ ಶಾಲೆಯಲ್ಲಿ ನೂರು ಮಂದಿ ವಿಶೇಷ ಮಕ್ಕಳಿಗೆ ತರಬೇತಿ ನೀಡಲು ಅವಕಾಶವಿದ್ದು, ರೋಟರಿ ಮಿಡ್ಟೌನ್ ನೆರವಾಗಲಿದೆ ಎಂದು ತಿಳಿಸಿದರು. ಗೋಷ್ಠಿಯಲ್ಲಿ ಕಾರ್ಯದರ್ಶಿ ಕೆ.ವಿ.ಸೌಮ್ಯ, ಅಪ್ಪು ಕೌಶಿಕ್ ಹಾಜರಿದ್ದರು.
=================