ದೆಹಲಿ. ಜ 13: ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರೂ ಅಧಿಕಾರಿಗಳು ಕೂತು ಮಾತನಾಡಿ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಐಪಿಎಸ್ ಅಧಿಕಾರಿ ಡಿ.ರೂಪಾ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯವರಿಗೆ ಸುಪ್ರೀಂಕೋರ್ಟ್ ಶುಕ್ರವಾರ ಸಲಹೆ ನೀಡಿದೆ.
ಸುಪ್ರೀಂಕೋರ್ಟ್ ನ ನ್ಯಾಯಮೂರ್ತಿ ಅಭಯಚಂದ್ರ ಓಕಾ ನೇತೃತ್ವದ ಪೀಠದಲ್ಲಿ ಶುಕ್ರವಾರ ಪ್ರಕರಣದ ವಿಚಾರಣೆ ನಡೆ ಯಿತು. ಈ ವೇಳೆ ಸಿಂಧೂರಿ ಪರ ವಾದ ಮಂಡಿಸಿದ ವಕೀಲರು, ಸಾಮಾಜಿಕ ಜಾಲತಾಣಗಳಲ್ಲಿ ಹಾಕಿರುವ ಪೋಸ್ಟ್ ಗಳನ್ನು ತೆಗೆದ ತಕ್ಷಣ ಮಾನಹಾನಿ ಸರಿ ಹೋಗಲ್ಲ, ಸಿಂಧೂರಿ ವಿರುದ್ಧ ಮಾಡಿರುವ ಅವಹೇಳನ ಕಾರಿ ಪೋಸ್ಟ್ಗಳನ್ನು ತೆಗೆದು ಹಾಕಬಹುದು. ಆದರೆ, ಘಟನೆಯಿಂದ ಅವರ ಕುಟುಂಬಕ್ಕೆ ಘಾಸಿಯಾಗಿದೆ. ಈ ರೀತಿಯ ಮಾನಹಾನಿ ಮಾಡಿದರೆ ಸಾರ್ವಜನಿಕ ಜೀವನದಲ್ಲಿ ಕೆಲಸ ಮಾಡುವುದಾದರೂ ಹೇಗೆ?. ಇದಕ್ಕಾಗಿ ಡಿ.ರೂಪಾ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದರು. ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ಡಿ.ರೂಪಾ ಪರ ವಕೀಲರು, ರೋಹಿಣಿ ಸಿಂಧೂರಿ ಕೂಡಾ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಬುದ್ದಿ ಭ್ರಮಣೆಯಾಗಿದೆ ಎಂದು ಮಾಧ್ಯಮಗಳಲ್ಲಿ ಹೇಳಿಕೆ ನೀಡಿದ್ದಾರೆ ಎಂದರು. ಆಗ ಸಿಂಧೂರಿ ಪರ ವಕೀಲರು, ಬುದ್ದಿ ಭ್ರಮಣೆಯಾದವರು ಈ ರೀತಿ ಪೋಸ್ಟ್ ಮಾಡುತ್ತಾರೆ ಎಂದಿದ್ದೇವೆಯೇ ಹೊರತು, ರೂಪಾ ಅವರಿಗೆ ಬುದ್ದಿ ಭ್ರಮಣೆ ಯಾಗಿದೆ ಎಂದು ಹೇಳಿಲ್ಲ ಎಂದರು.
ವಾದ, ಪ್ರತಿವಾದ ಆಲಿಸಿದ ನ್ಯಾ.ಎ.ಎಸ್ ಓಕಾ, ಇಬ್ಬರೂ ಅಧಿಕಾರಿಗಳು ಒಂದು ನಿರ್ಧಾರಕ್ಕೆ ಬರಬೇಕು. ಇದಕ್ಕಾಗಿ ಒಂದು ತಿಂಗಳ ಸಮಯ ನೀಡಲಾಗುವುದು. ಇಬ್ಬರೂ ಕೂತು ಮಾತಾಡಿ, ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಸಲಹೆ ನೀಡಿದರು. ಬಳಿಕ, ಪ್ರಕರಣದ ವಿಚಾರಣೆಯನ್ನು ಫೆ.15ಕ್ಕೆ ಮುಂದೂಡಿದರು.