ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಕಕ್ಕಡ ಪದ್ನೆಟ್ಟ್ ಸಂಭ್ರಮ । ಪಟ್ಟೋಲೆ ಪಳಮೆ ಮರು ಮುದ್ರಣಗೊಳ್ಳಲಿ । ಚಿರಿಯಪಂಡ ರಾಜಾ ನಂಜಪ್ಪ ಒತ್ತಾಯಿ । ಕಲಾ ತಂಡಗಳಿಂದ ಕಲಾ ಪ್ರರ್ದಶನ
ಪ್ರತಿನಿಧಿ ವರದಿ ಶ್ರೀಮಂಗಲ
ಪೊನ್ನಂಪೇಟೆ ಕ್ಗ್ಗಟ್ಟ್ನಾಡ್ ಕೊಡವ ಹಿತರಕ್ಷಣಾ ಬಳಗದ ವತಿಯಿಂದ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಕಕ್ಕಡ ಪದ್ನೆಟ್ಟ್ ಆಚರಣೆ ಸಭ್ರಮದಿಂದ ನಡೆಯಿತು.
ಮಂದತವ್ವ ತಂಡದಿಂದ ಗೆಜ್ಜೆತಂಡ್ ನೃತ್ಯ, ಯಂಗ ಕಲಾರಂಗ ತಂಡದಿಂದ ಕೊಡವ ಕಿರು ನಾಟಕ, ಹಾಡು ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು.
ಕಟ್ಟಡ ಪದ್ನೆಟ್ಟ್ ವಿಶೇಷ ಸಾಂಪ್ರದಾಯಿಕ ಊಟೋಪಚಾರ ನಡೆಯಿತು. ಪೊನ್ನಂಪೇಟೆಯಲ್ಲಿ ಪಂಜಿನ ಮೆರವಣಿಗೆ ಮೂಲಕ ಆಚರಣೆಗೆ ವಿಶೇಷತೆ ಮೂಡಿಸಲಾಯಿತು. ಪೊನ್ನಂಪೇಟೆ ಕೊಡವ ಸಮಾಜದಿಂದ ಆರಂಭವಾದ ಮೆರವಣಿಗೆ ಮುಖ್ಯಬೀದಿಯಲ್ಲಿ ಸಾಗಿ ಬಸವೇಶ್ವರ ದೇವಸ್ಥಾನ ವೃತ್ತ, ಬಸ್ ನಿಲ್ದಾಣದಲ್ಲಿ ಒಡ್ಡೋಲಗದೊಂದಿಗೆ ವಾಲಗತಾಟ್ಗೆ ಹೆಜ್ಜೆ ಹಾಕಿದ ಮಹಿಳೆಯರು, ಮಕ್ಕಳು ಸೇರಿ ಸಾಮೂಹಿಕವಾಗಿ ಕುಣಿದು ಸಂಭ್ರಮಿಸಿದರು.
ಸಾಧಕರಿಗೆ ಸನ್ಮಾನ: ಪೊನ್ನಂಪೇಟೆ ರಾಮಕೃಷ್ಣ ಆಶ್ರಮದ ಹಿರಿಯ ವೈದ್ಯಾಧಿಕಾರಿ ಡಾ.ಬಿಜ್ಜಂಡ ಕಾರ್ಯಪ್ಪ ಮತ್ತು ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ವೈದ್ಯಾಧಿಕಾರಿ ಡಾ.ಮುಕ್ಕಾಟೀರ ಗ್ರೀಷ್ಮ ಬೋಜಮ್ಮ ಅವರುಗಳನ್ನು ಸನ್ಮಾನಿಸಲಾಯಿತು. 10ನೇ ತರಗತಿಯಲ್ಲಿ ಪ್ರಥಮ ಸ್ಥಾನ ಪಡೆದ ಲಯನ್ಸ್ ಶಾಲಾ ವಿದ್ಯಾರ್ಥಿ ಕಾಟಿಮಾಡ ಭಾಷಿತ ದೇವಯ್ಯ ಹಾಗೂ ಪೊನ್ನಂಪೇಟೆ ಸಿಐಟಿ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಪ್ರಥಮ ಸ್ಥಾನ ಪಡೆದ ಚೆಪ್ಪುಡೀರ ಹರ್ಷಿಣಿ ಪ್ರದೀಪ್ ಅವರನ್ನು ಸನ್ಮಾನಿಸಲಾಯಿತು.
ಭತ್ತ ಕೃಷಿ ಕ್ಷೀಣ ಆತಂಕಕಾರಿ: ಭತ್ತ ಕೃಷಿ 30 ಸಾವಿರ ಹೆಕ್ಟರ್ ಪ್ರದೇಶದಲ್ಲಿ ಬೆಳೆಯುತ್ತಿದ್ದ ಭತ್ತ ಕೃಷಿ 19 ಸಾವಿರ ಹೆಕ್ಟೇರ್ ಪ್ರದೇಶಕ್ಕೆ ಕುಸಿದಿರುವುದು ಆತಂಕಕಾರಿ ಎಂದು ಕೊಡಗು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಅಧ್ಯಕ್ಷ ಕೊಡಂದೇರ ಬಾಂಡ್ ಗಣಪತಿ ಹೇಳಿದರು. ಸಮಾರೋಪ ಕಾರ್ಯಕ್ರಮದಲ್ಲಿ ಮಾತನಾಡಿ, ಭತ್ತ ಕೃಷಿ ಕ್ಷೀಣಿಸುತ್ತಿರುವುದು ಹಬ್ಬಕ್ಕೆ ಹಿನ್ನಡೆಯಾಗುತ್ತದೆ ಎಂದರು. ಕೊಡವ ಸಮಾಜಗಳು ಕೊಡವ ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸುವ ಮೂಲಕ ಮಕ್ಕಳಿಗೂ ಸಂಸ್ಕೃತಿಯ ಬಗ್ಗೆ ಅಭಿಮಾನ ಹಾಗೂ ಅರಿವಿಕೆಯನ್ನು ಮೂಡಿಸುತ್ತಿರುವುದು ಪ್ರಶಂಸನೀಯವಾಗಿದೆ. ಐನ್ಮನೆಗಳಲ್ಲಿ ವಾಸಿಸುತ್ತಿದ್ದ ಕಾಲಘಟ್ಟದಲ್ಲಿ ಹೆಚ್ಚಿನ ಜನಸಂಖ್ಯೆ ಇದ್ದಾಗ ಎಲ್ಲರೂ ಸೇರಿ ಹಬ್ಬದ ಸಂಭ್ರಮಾಚರಣೆ ಮಾಡುತ್ತಿದ್ದರು ಎಂದರು.
ಪೊನ್ನಂಪೇಟೆ ಕೊಡವ ಸಮಾಜದ ಅಧ್ಯಕ್ಷ ಕಾಳಿಮಾಡ ಮೋಟಯ್ಯ ಮಾತನಾಡಿ, ಕಕ್ಕಡ ಪದ್ನೆಟ್ಟ್ ಆಚರಣೆಯ ವಿಶೇಷತೆಯಲ್ಲಿ ತೀವ್ರ ಚಳಿ ಶೀತಾ ವಾತಾವರಣ ಹಾಗೂ ಕೃಷಿ ಚಟುವಟಿಕೆಯಲ್ಲಿ ನಿರತರಾದ ಸಂದರ್ಭ ಜನರ ಆರೋಗ್ಯ ರಕ್ಷಣೆಗೆ ಆಹಾರವನ್ನು ಪೂರ್ವಜರು ವೈಜ್ಞಾನಿಕವಾಗಿ ನಿರ್ಧರಿಸಿದ್ದಾರೆ. ಪ್ರಕೃತಿಯಿಂದ ನಾವು ಆಹಾರವನ್ನು ಪಡೆಯುತ್ತೇವೆ. ಅದರಿಂದ ಪ್ರಕೃತಿಯನ್ನು ರಕ್ಷಿಸಬೇಕು ಹಾಗೂ ಪೂಜೆ ಮಾಡಬೇಕು. ಎಂದಿಗೂ ನಾಶ ಮಾಡಬಾರದು ಎಂದು ಹೇಳಿದರು. ಕೊಡಗಿನ ಭವಿಷ್ಯದ ಬಗ್ಗೆ ನಾವೆಲ್ಲರೂ ಗಂಭೀರವಾಗಿ ಚಿಂತಿಸಬೇಕಿದೆ. ಜಾಗಗಳನ್ನು ಸಹ ಹೊರಗಿನವರಿಗೆ ಮಾರಾಟ ಮಾಡುವ ಮೂಲಕ ಆತಂಕದ ಸ್ಥಿತಿಯನ್ನು ನಿರ್ಮಾಣವಾಗುತ್ತಿದೆ. ಈ ಬಗ್ಗೆ ಪ್ರತಿಯೊಬ್ಬರು ಎಚ್ಚರಿಕೆ ವಹಿಸಬೇಕಾಗಿದೆ ಎಂದು ಹೇಳಿದರು.
ಡಾ.ಬಿಜ್ಜಂಡ ಕಾರ್ಯಪ್ಪ ಅವರು ಮಾತನಾಡಿ, ಕೊಡವ ಮಕ್ಕಳು ವ್ಯಾಸಂಗಕ್ಕಾಗಿ ಹೊರಗೆ ಹೋಗುವ ಸಂದರ್ಭ ಕೊಡವಾಮೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು. ವ್ಯಾಸಂಗದ ನಂತರ ಕೊಡಗಿನಲ್ಲಿಯೂ ಸೇವೆ ಮಾಡಬೇಕು. ತಂದೆ-ತಾಯಿ ನಿರೀಕ್ಷೆಯಂತೆ ಜಾಗ ಉಳಿಸಿಕೊಂಡು ಕೊಡಗಿನ ಬಗ್ಗೆ ಕಾಳಜಿ ವಹಿಸಬೇಕು ಎಂದರು.
ಡಾ.ಮುಕ್ಕಾಟೀರ ಗ್ರೀಷ್ಮ ಬೋಜಮ್ಮ ಮಾತನಾಡಿ, ಇಂದಿಗೂ ಶೇ.65 ರಷ್ಟು ಜನರು ಸರ್ಕಾರಿ ಆರೋಗ್ಯ ಸೇವೆಯನ್ನು ಅವಲಂಬಿಸಿದ್ದಾರೆ. ಇಲಾಖೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುವ ಅವಕಾಶಗಳನ್ನು ಸದುಪಯೋಗ ಪಡೆಸಿಕೊಳ್ಳಬೇಕು ಎಂದರು.
ಕೊಡವ ಹಿತಾರಕ್ಷಣಾ ಬಳಗದ ಅಧ್ಯಕ್ಷ ಚಿರಿಯಪಂಡ ರಾಜಾ ನಂಜಪ್ಪ ಮಾತನಾಡಿ, ನ್ಯಾಯ ತೀರ್ಮಾನದ ಕೇಂದ್ರಗಳಾಗಿದ್ದ ಕೊಡಗಿನಲ್ಲಿ ಅಂಬಲಗಳು, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕೇಂದ್ರಗಳಾಗಿದ್ದ ಮಂದ್ ಉಳಿದರೆ ಎಲ್ಲರಿಗೂ ಒಳಿತಾಗುತ್ತದೆ. ಕೊಡವ ಸಂಸ್ಕೃತಿ ನಾಡು, ನುಡಿ, ನೆಲ-ಜಲ ಹಿತಾರಕ್ಷಣೆಗೆ ಸೇವೆ ಸಲ್ಲಿಸಬೇಕೆಂದು ಕರೆ ನೀಡಿದರು. ಮಣ್ಣು ಉಳಿದರೆ ಸಂಸ್ಕೃತಿ ಉಳಿಯುತ್ತದೆ. ಕೊಡಗಿನ ಮಣ್ಣು ಮಾರಾಟವಾಗದಂತೆ ಎಚ್ಚರವಹಿಸಬೇಕು ಎಂದು ಸಲಹೆ ನೀಡಿದರು.
ಪಟ್ಟೋಲೆ ಪಳಮೆ ಮರು ಮುದ್ರಣಗೊಳ್ಳಲಿ: ಕೊಡವರ ಭಗವದ್ಗೀತೆ ಎಂದೇ ಕರೆಯುವ ಪಟ್ಟೋಲೆ ಪಳಮೆ ಕೃತಿ ಮರು ಮುದ್ರಣ ಆಗಬೇಕು ಎಂದು ಚಿರಿಯಪಂಡ ರಾಜಾ ನಂಜಪ್ಪ ಒತ್ತಾಯಿಸಿದರು. ನಡಿಕೇರಿಯಂಡ ಚಿಣ್ಣಪ್ಪ ಅವರು ಬರೆದಿರುವ ಕೃತಿ ನೂರು ವರ್ಷ ಪೂರೈಸಿದ ಹಿನ್ನೆಲೆ ನಡಿಕೇರಿಯಂಡ ಚೆಣ್ಣಪ್ಪ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಲಾಯಿತು.
ಕೊಡಗಿನಲ್ಲಿ 1924ರಲ್ಲಿ ಯಾವುದೇ ಸಂಪರ್ಕಗಳು, ವಾಹನಗಳು ಸೌಲಭ್ಯ ಇಲ್ಲದ ಸಂದರ್ಭದಲ್ಲಿ ಕೊಡಗಿನ ಉದ್ದಗಲಕ್ಕೆ ನಡೆದು ಕೊಡಗಿನ ಸಂಸ್ಕೃತಿ, ಭೌಗೋಳಿಕ ವಿಚಾರ, ಇತಿಹಾಸ ಅಧ್ಯಯನ ಮಾಡಿ ಪಟ್ಟೋಲೆ ಪಳಮೆಯನ್ನು ರಚಿಸಿರುವ ಚಿಣ್ಣಪ್ಪ ಅವರ ಸಾಧನೆ ಮಹತ್ತರವಾಗಿದೆ. ಅವರು ಕೊಡವ ಸಾಹಿತ್ಯಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ ಎಂದು ಕಾಳಿಮಾಡ ಮೋಟಯ್ಯ ಸ್ಮರಿಸಿದರು.
ಹಿತರಕ್ಷಣ ಬಳಗದ ಅಧ್ಯಕ್ಷ ಕಾಯಪಂಡ ಸನ್ನಿ ಬೋಪಣ್ಣ ಅವರ ಅಕಾಲಿಕ ನಿಧನಕ್ಕೆ ಮೌನಚರಣೆ ಸಲ್ಲಿಸಲಾಯಿತು.
ಬಳಗದ ಉಪಾಧ್ಯಕ್ಷ ಚೆಕ್ಕೇರ ರಮೇಶ್, ಚೆಟ್ಟಂಗಡ ಲೇಖನ, ಚೊಟ್ಟೆಕಾಳಪಂಡ ಆಶಾ ಪ್ರಕಾಶ್, ಬಲ್ಲಡಿಚಂಡ ಕಸ್ತೂರಿ, ಉಳುವಂಗಡ ಲೋಹಿತ್ ಭೀಮಯ್ಯ, ಬೋಡಂಗಡ ಜಗದೀಶ್ ಇದ್ದರು.
ಫೋಟೋ : 4 ಎಂಡಿಕೆ 03 ; ಪಂಜಿನ ಮೆರವಣಿಗೆ
04 ; ವೇದಿಕೆಯಲ್ಲಿ ಗಣ್ಯರು