ಸಿದ್ದತೆಗೆ ಜಿಲ್ಲಾಧಿಕಾರಿ ಸೂಚನೆ । ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸುವುದು ಅಗತ್ಯ । ಆಂದೋಲನದ ಪೂರ್ವಭಾವಿ ಸಭೆ
ಪ್ರತಿನಿಧಿ ವರದಿ ಚಾಮರಾಜನಗರ
ಜಿಲ್ಲೆಯಾದ್ಯಂತ ಸೆ.14ರಿಂದ ಸ್ವಚ್ಚತಾ ಹೀ ಸೇವಾ ಆಂದೋಲನವನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಸ್ವಚ್ಚ್ಚತೆಗೆ ಸಂಬಂಧಿಸಿದ ವಿವಿಧ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಟಾನಗೊಳಿಸಲು ಅವಶ್ಯ ಸಿದ್ಧತಾ ಪ್ರಕ್ರಿಯೆಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸ್ವಭಾವ ಸ್ವಚ್ಚತಾ-ಸಂಸ್ಕಾರ ಸ್ಚಚ್ಚತಾ ಧ್ಯೇಯೋದ್ದೇಶದೊಂದಿಗೆ ಸೆ.14ರಿಂದ ಅ.2ರವರೆಗೆ ಏರ್ಪಡಿಸಲಾಗುವ ಸ್ವಚ್ಚತಾ ಹೀ ಸೇವಾ ಆಂದೋಲನ ಪಾಕ್ಷಿಕ ಆಚರಣೆ ಕುರಿತ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸರ್ಕಾರದ ನಿರ್ದೇಶನದನ್ವಯ ಪ್ರತಿ ವರ್ಷದಂತೆ ಈ ಬಾರಿಯೂ ಸ್ವಚ್ಚತೆ ಸಂಬಂಧ ವಿಶಿಷ್ಟ ಕಾರ್ಯಕ್ರಮಗಳನ್ನು ಜಿಲ್ಲೆಯ ಎಲ್ಲ ನಗರ ಹಾಗೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಯೋಜಿಸಲಾಗುತ್ತಿದೆ. ಸ್ವಚ್ಚತೆಯೇ ಸೇವೆ ಶೀರ್ಷಿಕೆಯಡಿ ಸಾರ್ವಜನಿಕರಿಗೆ ಶುಚಿತ್ವ, ನೈರ್ಮಲ್ಯದ ಮಹತ್ವ ಕುರಿತು ವ್ಯಾಪಕ ಅರಿವು ಮೂಡಿಸುವುದೇ ಪಾಕ್ಷಿಕ ಆಚರಣೆಯ ಉದ್ದೇಶವಾಗಿದೆ. ಸ್ವಚ್ಚತಾ ಹೀ ಸೇವಾ ಆಂದೋಲನವನ್ನು ಸ್ಚಚ್ಚತಾ ಕಿ ಭಾಗಿದಾರಿ, ಸಂಪೂರ್ಣ ಸ್ವಚ್ಚತಾ ಕಾರ್ಯಕ್ರಮಗಳು ಹಾಗೂ ಸಫಾಯಿ ಮಿತ್ರ ಆರೋಗ್ಯ ಸುರಕ್ಷಾ ಶಿಬಿರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದರು.
ಪಾಕ್ಷಿಕ ಆಚರಣೆಯ ಮೊದಲ ದಿನ ಸ್ಚಚ್ಚತಾ ಕಿ ಭಾಗಿದಾರಿ ಕಾರ್ಯಕ್ರಮದಡಿ ಸ್ವಚ್ಚತಾ ಪ್ರತಿಜ್ಞಾ ಸ್ವೀಕಾರ, ಸ್ವಚ್ಚತಾ ಅರಿವು ಕಾರ್ಯಾಗಾರ, ಮ್ಯಾರಾಥಾನ್, ಸೈಕಲ್ ಜಾಥಾ, ಮಾನವ ಸರಪಳಿ, ವಿಶೇಷ ಗ್ರಾಮಸಭೆ, ಯುವಕರ ಜಾಥಾ, ತ್ಯಾಜ್ಯವಸ್ತುಗಳಿಂದ ಚಿತ್ರಕಲೆ, ಬ್ರ್ಯಾಂಡಿಂಗ್ ಚಟುವಟಿಕೆ, ತಾಯಿ ಹೆಸರಿನಲ್ಲಿ ಸಸಿ ನೆಡುವ ಅಭಿಯಾನ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪ್ರಬಂಧ, ರಂಗೋಲಿ, ಚರ್ಚಾಸ್ಪರ್ಧೆ, ಗ್ರಾಮೀಣ ಕ್ರೀಡಾಕೂಟ, ಹಸಿಕಸ ಒಣಕಸ ವಿಂಗಡಣೆ, ತ್ಯಾಜ್ಯದ ಮರುಬಳಕೆ, ಕಲಾಕೃತಿಗಳ ರಚನೆ, ಬೀದಿಬದಿ ಶುಚಿತ್ವ, ಜಾಗೃತಿ ಸೇರಿದಂತೆ ಇತರೆ ಸ್ವಚ್ಚತಾ ಅಭಿಯಾನಕ್ಕಾಗಿ ಅಗತ್ಯ ಸಿದ್ದತೆಗಳನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಸೂಚಿಸಿದರು.
ಸಂಪೂರ್ಣ ಸ್ವಚ್ಚತಾ ಚಟುವಟಿಕೆಗಳಡಿಯಲ್ಲಿ ಸಾರ್ವಜನಿಕ ಸ್ಥಳ, ಎಲ್ಲ ಸರ್ಕಾರಿ ಕಚೇರಿಗಳು, ವಾಣಿಜ್ಯ-ಮಾರುಕಟ್ಟೆ, ಶಿಕ್ಷಣ ಸಂಸ್ಥೆಗಳು, ಸಾರ್ವಜನಿಕ ಸಾರಿಗೆ ಕೇಂದ್ರಗಳು, ರಸ್ತೆ, ಹೆದ್ದಾರಿಗಳು, ರೈಲುಹಳಿಗಳು, ಅಭಯಾರಣ್ಯಗಳು, ನದಿ, ಸರೋವರ, ಕೊಳಗಳು, ಚರಂಡಿ ಸೇರಿದಂತೆ ವಿವಿಧ ಜಲಮೂಲಗಳ ಸ್ವಚ್ಚತೆ, ಪ್ರವಾಸಿ ತಾಣಗಳು, ಧಾರ್ಮಿಕ ಸ್ಥಳಗಳು, ಪರಂಪರೆಯ ತ್ಯಾಜ್ಯ ಶೇಖರಣಾ ತಾಣಗಳು, ಶೌಚಾಲಯ, ಗ್ರಾಮಗಳ ಬೃಹತ್ ತ್ಯಾಜ್ಯ ಶೇಖರಣಾ ಘಟಕ, ಕಚೇರಿಗಳ ಕಡತ ವಿಲೇವಾರಿ, ಕುಡಿಯುವ ನೀರಿನ ಮೂಲಗಳ ಸಮೀಪದ ಸ್ವಚ್ಚತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಂಬಂಧಪಟ್ಟ ಪಂಚಾಯತಿ ಅಧಿಕಾರಿಗಳು ಈಗಿನಿಂದಲೇ ಕಾರ್ಯೋನ್ಮುಖರಾಗುವಂತೆ ಸೂಚಿಸಿದರು.
ಸ್ವಚ್ಚತಾ ಹೀ ಸೇವಾ ಆಂದೋಲನ ಪಾಕ್ಷಿಕ ಆಚರಣೆಯನ್ನು ಎಲ್ಲ ಗ್ರಾಮ ಪಂಚಾಯಿತಿ, ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಪರಿಣಾಮಕಾರಿಯಾಗಿ ಏರ್ಪಡಿಸಲು ಜಿಲ್ಲಾ ಪಂಚಾಯತಿ ಅಧಿಕಾರಿಗಳು ಉಸ್ತುವಾರಿ ವಹಿಸಲಿದ್ದಾರೆ. ಸ್ವಚ್ಚತಾ ಕಾರ್ಯಕ್ರಮ ಆಯೋಜನೆಗೆ ಜಿಲ್ಲಾ ಪಂಚಾಯತಿಯೊಂದಿಗೆ ಸಂಬಂಧಪಟ್ಟ ಎಲ್ಲ ಇಲಾಖೆಗಳು ಸಹಕಾರ ನೀಡಬೇಕು. ಜನಪ್ರತಿನಿಧಿಗಳನ್ನು ಶಿಷ್ಠಾಚಾರ ಪ್ರಕಾರ ಆಹ್ವಾನಿಸಬೇಕು. ಕಾರ್ಯಕ್ರಮ ಬಹಳ ಅರ್ಥಪೂರ್ಣವಾಗಬೇಕು ಎಂದರು.
ಸ್ವಚ್ಚತಾ ಕಾರ್ಯದಲ್ಲಿ ಉತ್ತಮವಾಗಿ ತೊಡಗಿಸಿಕೊಳ್ಳುವ 3 ಗ್ರಾಮ ಪಂಚಾಯಿತಿಗಳಿಗೆ ಪ್ರಶಸ್ತಿಗೆ ಅವಕಾಶವಿದೆ. ಇದಕ್ಕಾಗಿ ಅಧಿಕಾರಿಗಳು ತಮಗೆ ವಹಿಸಿರುವ ಕೆಲಸಗಳನ್ನು ರಚನಾತ್ಮಕವಾಗಿ ಮಾಡುವಲ್ಲಿ ಕಾರ್ಯಪ್ರವೃತ್ತರಾಗಬೇಕು. ಸ್ವಚ್ಚತಾ ಹೀ ಸೇವಾ ಆಂದೋಲನದಲ್ಲಿ ಇತರೆ ಜಿಲ್ಲೆಗಳಿಗಿಂತ ಹೆಚ್ಚಾಗಿ ಸ್ವಚ್ಚತಾ ಚವಟುವಟಿಕೆಗಳಲ್ಲಿ ಪಾಲ್ಗೊಂಡು ಜಿಲ್ಲೆ ಮುಂಚೂಣಿಯಲ್ಲಿರುವಂತೆ ನೋಡಿಕೊಳ್ಳುವ ಮೂಲಕ ರಾಜ್ಯಮಟ್ಟದಲ್ಲಿ ಮೊದಲ ಸ್ಥಾನಕ್ಕಾಗಿ ಪ್ರಯತ್ನಿಸಬೇಕು. ಈ ನಿಟ್ಟಿನಲ್ಲಿ ಎಲ್ಲರ ಪರಿಶ್ರಮ, ಪ್ರಯತ್ನ ಅವಶ್ಯವಾಗಿದೆ ಎಂದು ತಿಳಿಸಿದರು.
ಜಿಪಂ ಸಿಇಒ ಮೋನಾ ರೋತ್, ಎಸ್ಪಿ ಡಾ.ಬಿ.ಟಿ.ಕವಿತಾ, ಎಡಿಸಿ ಗೀತಾ ಹುಡೇದ, ಜಿಪಂ ಡಿಎಸ್ಪಿ ಲಕ್ಷ್ಮಿ, ಅಬಕಾರಿ ಉಪ ಆಯುಕ್ತ ನಾಗಶಯನ, ಜಿಪಂ ಸಹಾಯಕ ಕಾರ್ಯದರ್ಶಿ ಶ್ರೀಕಂಠರಾಜೇ ಅರಸ್, ನಗರಸಭೆ ಪೌರಾಯುಕ್ತ ಎಸ್.ವಿ.ರಾಮದಾಸ್, ಸಮಾಜ ಕಲ್ಯಾಣ ಇಲಾಖೆ ಡಿಡಿ ಮುನಿರಾಜು, ಡಿಎಚ್ಒ ಡಾ.ಎಸ್.ಚಿದಂಬರ, ಆಹಾರ ಇಲಾಖೆ ಡಿಡಿ ಯೋಗಾನಂದ, ಡಿಡಿಪಿಐ ರಾಮಚಂದ್ರರಾಜೇ ಅರಸ್ ಸೇರಿದಂತೆ ಇತರರು ಇದ್ದರು.
8ಸಿಎಚ್ಎನ್.3: ಚಾಮರಾಜನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ಅಧ್ಯಕ್ಷತೆಯಲ್ಲಿ ಸ್ವಚ್ಚತಾ ಹೀ ಸೇವಾ ಆಂದೋಲನ ಪಾಕ್ಷಿಕ ಆಚರಣೆ ಕುರಿತ ಪೂರ್ವಭಾವಿ ಸಭೆ ನಡೆಯಿತು.