ಚಿಕ್ಕಮಗಳೂರು: ನಗರ ಕೇಂದ್ರ ಗ್ರಂಥಾಲಯದ ಸಂಚಾರಿ ವಾಹನವು 25 ವರ್ಷ ಪೂರ್ಣಗೊಂಡಿದ್ದು, ವಾಹನದ ನವೀಕರಣ ಸಾಧ್ಯವಿರದ ಕಾರಣ ವಾಹನದ ಓಡಾಟವನ್ನು ಸ್ಥಗಿತಗೊಳಿಸಲಾಗಿದೆ.
ಸಂಚಾರಿ ವಾಹನದ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದ್ದು, ಸಂಚಾರಿ ಗ್ರಂಥಾಲಯದಲ್ಲಿ ಸದಸ್ಯತ್ವ ಹೊಂದಿರುವವರು ಕೇಂದ್ರ ಗ್ರಂಥಾಲಯದಲ್ಲಿ ಪುಸ್ತಕಗಳನ್ನು ಎರವಲು ಪಡೆಯಲು ವ್ಯವಸ್ಥೆ ಕಲ್ಪಿಸಲಾಗಿದೆ. ಗ್ರಂಥಾಲಯ ಸೇವೆಯನ್ನು ಮುಂದಿನ ಸಂಚಾರಿ ಗ್ರಂಥಾಲಯ ಸೇವೆ ಪ್ರಾರಂಭಿಸುವವರೆಗೂ ಬಳಸಿಕೊಳ್ಳಬಹುದಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ನಗರ ಕೇಂದ್ರ ಗ್ರಂಥಾಲಯ ಕಚೇರಿಯನ್ನು ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ನಗರ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸಾಮಾನ್ಯ ವೀಕ್ಷಕರ ನೇಮಕ
ಚಿಕ್ಕಮಗಳೂರು: ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ಸಂಬಂಧ 15-ಉಡುಪಿ ಚಿಕ್ಕಮಗಳೂರು ಲೋಕಸಭಾ ಚುನಾವಣಾ ಕ್ಷೇತ್ರದ ಸಾಮಾನ್ಯ ವೀಕ್ಷಕರನ್ನಾಗಿ ಹಿತೇಶ್ ಕೆ ಕೋಯಲ್ ಅವರನ್ನು ಚುನಾವಣಾ ಆಯೋಗ ನೇಮಿಸಿದೆ.
ಚುನಾವಣಾ ವೀಕ್ಷಕರ ಕಚೇರಿಯನ್ನು ಚಿಕ್ಕಮಗಳೂರು ಪ್ರವಾಸಿ ಮಂದಿರದ ಕೊಠಡಿ ಸಂಖ್ಯೆ 104, ಮೊದಲನೇ ಮಹಡಿಯಲ್ಲಿ ತೆರೆಯಲಾಗಿದೆ. ಚುನಾವಣೆಗೆ ಸಂಬಂಧಿಸಿದ ದೂರುಗಳಿದ್ದಲ್ಲಿ ಪ್ರತಿದಿನ ಸಲ್ಲಿಸಲು ಅವಕಾಶವಿದ್ದು, ಸಾರ್ವಜನಿಕ / ಜನಪ್ರತಿನಿಧಿಗಳು ವೀಕ್ಷಕರಿಗೆ ಸಲ್ಲಿಸಬಹುದಾಗಿದ್ದು ಇವರ ಮೊ.ಸಂ. 9482245032 ಆಗಿರುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಕ್ಕಳ ಪಾಲನಾ ಸಂಸ್ಥೆಗಳ ನೊಂದಣಿ ಕಡ್ಡಾಯ
ಚಿಕ್ಕಮಗಳೂರು: ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಚಿಕ್ಕಮಗಳೂರು ವ್ಯಾಪ್ತಿಯಲ್ಲಿ ಯಾವುದೇ ಸ್ವಯಂ ಸೇವಾ ಸಂಸ್ಥೆಗಳು ಮಠಗಳು, ಮದರಸ ಹಾಗೂ ಚರ್ಚ್ ಗಳನ್ನು ಮಕ್ಕಳನ್ನು ದಾಖಲಿಸಿ ಮಕ್ಕಳ ಪಾಲನಾ ಸಂಸ್ಥೆಗಳನ್ನು ಸರ್ಕಾರದ ನೋಂದಣಿ ಇಲ್ಲದೆ ನಡೆಸುತ್ತಿದ್ದರೆ ಹಾಗೂ ಹೊಸ ಮಕ್ಕಳ ಪಾಲನಾ ಸಂಸ್ಥೆಯನ್ನು ಪ್ರಾರಂಭಿಸಲು ಆಸಕ್ತಿ ಹೊಂದಿರುವವರು ಬಾಲ ನ್ಯಾಯ (ಮಕ್ಕಳ ಪಾಲನೆ ಪೋಷಣೆ ಮತ್ತು ರಕ್ಷಣೆ ) ಕಾಯ್ದೆ 2015 ಕಲಂ 41 ರ ಅನ್ವಯ ಕಡ್ಡಾಯವಾಗಿ ನೋಂದಾಯಿಸಿಕೊಳ್ಳಬೇಕು.
ಮಕ್ಕಳ ಪಾಲನಾ ಸಂಸ್ಥೆಗಳು ನೊಂದಣಿ ಮಾಡಿಸಲು ಏಪ್ರಿಲ್ 30 ಕೊನೆಯ ದಿನವಾಗಿರುತ್ತದೆ.
ಹೆಚ್ಚಿನ ಮಾಹಿತಿಗಾಗಿ ದೂ.ಸಂ.08262- 295654 ಕಚೇರಿ ವೇಳೆಯಲ್ಲಿ ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮಕ್ಕಳ ರಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.