ಪ್ರತಿನಿಧಿ ವರದಿ ಗುಂಡ್ಲುಪೇಟೆ
ಪಟ್ಟಣದ ಮಹಾಲಕ್ಷ್ಮಿ ಬಡಾವಣೆಯಲ್ಲಿರುವ ರಾಘವೇಂದ್ರಸ್ವಾಮಿಗಳ ಮೃತ್ತಿಕಾಬೃಂದಾವನ ಸನ್ನಿದಾನದಲ್ಲಿ ರಾಘವೇಂದ್ರಸ್ವಾಮಿ ಅವರ 353ನೇ ಆರಾದನಾ ಮಹೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ಪೂರ್ವಾರಾಧನೆ, ಮಧ್ಯಾರಾಧನೆ ಹಾಗೂ ಉತ್ತರಾಧನಾ ವಿಶೇಷ ಪೂಜಾ ಕಾರ್ಯಗಳು ವಿಜೃಂಭಣೆಯಿಂದ ನಡೆಯಿತು.
ಆ.20ರಿಂದ 22ರ ವರೆಗೆ ಬೆಳಗ್ಗೆಯಿಂದ ಸಂಜೆಯ ವರೆಗೆ ಶ್ರೀ ಗಣಪತಿ ಪೂಜೆ, ಸ್ವಸ್ತಿಮಣ್ಯಾಹ, ಕಲಶ ಸ್ಥಾಪನೆ, ಗಣಪತಿ ಹೊಮ, ಸುದರ್ಶನ ಹೋಮ, ಮಹಾಮಂಗಳಾರತಿ ನೇರವೇರಿಸಲಾಯಿತು. ಬಳಿಕ ಸಾಸ್ಕೃತಿಕ ಕಾರ್ಯಕ್ರಮಗಳು ನಡೆದು ರಥೋತ್ಸವ, ಪಲ್ಲಕ್ಕಿ ಸೇವೆ, ಉಯ್ಯಾಲೆ ಸೇವೆ, ಸ್ವವಾಚನ ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು.
ವಿದೂಷಿ ಇಂದ್ರಾಣಿ ಜನಂತರಾಮ್ ಮೈಸೂರು ಅವರಿಂದ ದಾಸವಾಣಿ ದೇವರನಾಮಗಳು, ನಂಜನಗೂಡಿನ ನಟರಾಜ ನಾಟ್ಯಶಾಲೆಯ ವಿದೂಷಿ ರಮ್ಯ, ರಾಘವೇಂದ್ರ ಭರತನಾಟ್ಯ ಕಾರ್ಯಕ್ರಮ ನಡೆಯಿತು. ಇದೇ ಸಂದರ್ಭದಲ್ಲಿ ಎಸ್ ಎಸ್ಎಲ್ ಸಿ, ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಆ.22ರಂದು ಬೆಳಗ್ಗೆ ಗುಂಡ್ಲುಪೇಟೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೈಸೂರಿನ ಮಾತೃಶ್ರೀ ಭಜನಾ ಮಂಡಳಿ ತಂಡದವರಿಂದ ಭಜನೆಯೊಡನೆ ದಿವ್ಯಾ ಅಲಂಕೃತವಾದ ರಥೋತ್ಸವದಲ್ಲಿ ಸರ್ವಾಲಂಕೃತ ಶ್ರೀರಾಘವೇಂದ್ರಸ್ವಾಮಿ ಅವರ ಮೆರವಣಿಗೆ ನಡೆಯಿತು.
ಕಾರ್ಯಕ್ರಮದಲ್ಲಿ ಟ್ರಸ್ಟ್ ನ ಉಪಾಧ್ಯಕ್ಷ ಇಂದೂ ಶೇಖರ್, ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ಕೆ.ಸುರೇಶ್, ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರು ಇದ್ದರು.