ಮಾಜಿ ಪರಿಷತ್ತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ಆಕ್ರೋಶ
ಪ್ರತಿನಿಧಿ ವರದಿ ಮಂಡ್ಯ
ಅಧಿಕಾರದಲ್ಲಿರುವ ಸರ್ಕಾರಕ್ಕೆ ತಾಳ್ಮೆ ಇರಬೇಕು. ಜಿಲ್ಲೆಯ ಉಸ್ತುವಾರಿ ಸಚಿವ ಚಲುವರಾಯಸ್ವಾಮಿ ತಾಳ್ಮೆ ಕಳೆದುಕೊಂಡಿದ್ದಾರೆ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಮಾತನಾಡಬೇಕಾದರೆ ಎಚ್ಚರಿಕೆ ಇರಲಿ ಎಂದು ಮಾಜಿ ಪರಿಷತ್ತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡ ತಾಕೀತು ಮಾಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಟೀಕೆ ಟಿಪ್ಪಣಿಗಳು ಸಹಜ. ಟೀಕೆ ಟಿಪ್ಪಣಿಗಳನ್ನ ಸ್ವೀಕರಿಸುವವರು ನಿಜವಾದ ನಾಯಕ. ಕುಮಾರಸ್ವಾಮಿ ಅವರ ಬಗ್ಗೆ ಹಗುರವಾಗಿ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.
ಅಧಿಕಾರದಲ್ಲಿರುವವರು ಯಾವತ್ತು ತಾಳ್ಮೆ ಕಳೆದುಕೊಳ್ಳಬಾರದು. ವಿರೋಧ ಪಕ್ಷದ ಟೀಕೆಗಳನ್ನ ಸ್ವೀಕರಿಸಿ ಮಾರ್ಗದರ್ಶನ ಅಂತ ತಿಳಿದುಕೊಳ್ಳಿ. ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಯಾಕೆ ಕುಮಾರಸ್ವಾಮಿ ಬಗ್ಗೆ ಮಾತನಾಡುತ್ತೀರಿ, ನೀವು ಕಬ್ಬು ಅರಿಯುವಿಕೆ ಬಗ್ಗೆ ಯೋಚನೆ ಮಾಡಿ ಎಂದು ತಾಕೀತು ಮಾಡಿದ ಅವರು ಪಾಂಡವಪುರದ ಕಾರ್ಯಕ್ರಮ ಪೂರ್ವನಿಗದಿತ ಕಾರ್ಯಕ್ರಮವಾಗಿದ್ದು ಅದರ ಬಗ್ಗೆ ಮಾತನಾಡುವ ಅಧಿಕಾರ ಅವರಿಗಿಲ್ಲ ಎಂದರು.
ಮಳೆಯಿಂದ ಪ್ರವಾಹ ಬಂದು ನೀರು ಸಮುದ್ರಕ್ಕೆ ಸೇರುತ್ತಿದೆ. ತಮಿಳುನಾಡಿಗೆ ನೀರು ಹೋಗುತ್ತಿದೆ, ಮೇಕೆದಾಟು ಕಟ್ಟಿಸಿ ನೀರು ಉಳಿಸಿ ಎಂದು ಚೇಡಿಸಿದರು.
ಎಲ್ಲ ನಾಯಕರು ಸೇರಿ ಮೇಕೆದಾಟು ಸಮಸ್ಯೆ ಬಗೆಹರಿಸಿ. ಎರಡೂ ರಾಜ್ಯದ ಸಿಎಂ ಜತೆಗೆ ಮಾತನಾಡಿ ಮೇಕೆದಾಟು ಕಟ್ಟಿಸಿ. ವ್ಯರ್ಥವಾಗುವ ನೀರನ್ನ ಉಳಿಸಿಕೊಳ್ಳಿ. ಚಲುವರಾಯಸ್ವಾಮಿ ಸಚಿವರಾಗಿ ಜವಾಬ್ದಾರಿಯುತ ಕೆಲಸ ಮಾಡಬೇಕು ಎಂದು ಚಿವುಟಿದರು.
ಜಿಲ್ಲೆಯ ಸಂಸದರು ಹಾಗೂ ಕೇಂದ್ರದ ಸಚಿವರು ಆಗಿರುವ ಎಚ್.ಡಿ.ಕುಮಾರಸ್ವಾಮಿ ಅವರ ಬಗ್ಗೆ ಏಕವಚನದಲ್ಲಿ ಮಾತನಾಡಬೇಡಿ. ಅವರ ನೇತೃತ್ವದಲ್ಲಿ ನೀವು ಮುಂದೆ ಬಂದಿದ್ದಿರಿ. ಮಾತನಾಡಬೇಕಾದರೆ ಸ್ವಲ್ಪ ಗೌರವ ಇರಲಿ. ಜಿಲ್ಲೆಯ ಯಾವುದೇ ರಾಜಕೀಯ ಪಕ್ಷದ ಮುಖಂಡರು ತಾಳ್ಮೆಯಿಂದ ಕೆಲಸ ಮಾಡಿ. ಕಾವೇರಿ ಸಮಸ್ಯೆ ಪರಿಹಾರಕ್ಕೆ ಗಮನ ಕೊಡಿ. ಟೀಕೆ ಮಾಡುವುದು ಸರಿಯಲ್ಲ. ಇದನ್ನ ಎಲ್ಲರು ನಿಲ್ಲಿಸಿ ಎಂದು ಸಲಹೆ ನೀಡಿದರು.
ಜೆಡಿಎಸ್ ಎಸ್ಸಿ,ಎಸ್ಟಿ ಘಟಕದ ಜಿಲ್ಲಾಧ್ಯಕ್ಷ ಜಯರಾಮ್, ನಾಗಪ್ಪ ಸೇರಿದಂತೆ ಇತರರಿದ್ದರು.