ಬೆಂಗಳೂರು: ಇದೇ ಮೊದಲ ಬಾರಿಗೆ ಐತಿಹಾಸಿಕ ಬೆಂಗಳೂರು ಕರಗ ಕೊಲೆಯೊಂದಕ್ಕೆ ಸಾಕ್ಷಿಯಾಗಿದೆ. ಕರಗ ಮಹೋತ್ಸವದ ಮೆರವಣಿಗೆ ವೇಳೆ ಯುವಕರ ನಡುವೆ ನಡೆದ ಗಲಾಟೆ, ಕೊಲೆಯಲ್ಲಿ ಅಂತ್ಯವಾಗಿದೆ. ಬೆಂಗಳೂರಿನ ಮೆಜೆಸ್ಟಿಕ್ ಬಳಿಯ ಅಣ್ಣಮ್ಮ ದೇಗುಲದ ಬಳಿ ನಡೆದ ಘಟನೆಯಲ್ಲಿ ಹಲ್ಲೆಗೊಳಗಾಗಿದ್ದ ಯುವಕ ಡಿ. ಸಾರಧಿ ಮೃತಪಟ್ಟಿದ್ದಾರೆ. ಮೃತ ಸಾರಧಿ, ಶೇಷಾದ್ರಿಪುರಂನ ವಿವಿ ಗಿರಿ ಕಾಲೋನಿಯ ನಿವಾಸಿಯಾಗಿದ್ದಾರೆ. ಅಣ್ಣಮ್ಮ ದೇಗುಲದ ಮುಂದೆ ಡ್ಯಾನ್ಸ್ ಮಾಡುತ್ತಿದ್ದ ವ್ಯಕ್ತಿ ಸಾರಧಿ ಮತ್ತು ಸ್ನೇಹಿತರನ್ನ ಸ್ಪರ್ಶಿಸಿದ್ದರು. ಈ ವಿಚಾರಕ್ಕೆ ಗುಂಪುಗಳ ನಡುವೆ ಗಲಾಟೆ ಆಗಿ ಸಾರಧಿ ಮೇಲೆ ಹಲ್ಲೆ ನಡೆದಿತ್ತು. ಸಾರಧಿ ಮೇಲೆ ಮಾರಕಾಸ್ತ್ರದಿಂದ ಹಲ್ಲೆ ನಡೆಸಿ ಆರೋಪಿಗಳು ಪರಾರಿಯಾಗಿದ್ದರು.
ಗಾಯಾಳು ಸಾರಧಿಯನ್ನು ತಕ್ಷಣವೇ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾರಧಿ ಮೃತಪಟ್ಟಿದ್ದಾರೆ.
ಏಪ್ರಿಲ್ 23ರ ರಾತ್ರಿ 3.30ರಲ್ಲಿ ಅಣ್ಣಮ್ಮ ದೇಗುಲದ ಮುಂದೆ ಘಟನೆ ನಡೆದಿತ್ತು. ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆದಿದೆ.