- ಒಂದು ತಿಂಗಳಿನಿಂದ ಸರಬರಾಜಾಗುತ್ತಿದ್ದ ಮಣ್ಣು ಮಿಶ್ರಿತ ಕೆಂಪು ನೀರಿಗೆ ಮುಕ್ತಿ । ವಾಟರ್ ಪಿಲ್ಟರ್ ಬೆಡ್ ಬದಲಾಯಿಸುವ ಕಾಮಗಾರಿ ಪ್ರಾರಂಭ
ಕೆ.ಎಸ್.ವಿನೋಧ್ ರಾಜ್ ಕೆ.ಆರ್.ನಗರ
ಪಟ್ಟಣಕ್ಕೆ ಒಂದು ತಿಂಗಳಿನಿಂದ ಸರಬರಾಜಾಗುತ್ತಿದ್ದ ಮಣ್ಣು ಮಿಶ್ರಿತ ಕೆಂಪು ನೀರಿಗೆ ಮುಕ್ತಿ ನೀಡಿ ಶುದ್ದ ಕುಡಿಯುವ ನೀರಿನ ಸರಬರಾಜು ಮಾಡಲು ನೀರು ಶುದ್ಧಿಕರಣ ಘಟಕಕ್ಕೆ ವಾಟರ್ ಪಿಲ್ಟರ್ ಬೆಡ್ ಬದಲಾಯಿಸುವ ಕಾಮಗಾರಿ ಪ್ರಾರಂಭವಾಗಿದ್ದು, ಪಟ್ಟಣದ ನಿವಾಸಿಗಳಿಗೆ ಶೀಘ್ರದಲ್ಲೆ ಶುದ್ದ ಕುಡಿಯುವ ನೀರು ಲಭ್ಯವಾಗಲಿದೆ.
ಪಟ್ಟಣದ ಹಳೆಯ ಎಡತೊರೆಯಲ್ಲಿರುವ ಕಾವೇರಿ ನದಿಯ ದಡದಲ್ಲಿ ಪುರಸಭೆಯಿಂದ ಪಂಪ್ಹೌಸ್ ನಿರ್ಮಿಸಿ, ಪಟ್ಟಣದ ೨೩ ವಾರ್ಡಗಳಿಗೂ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಮಳೆಗಾಲ ಪ್ರಾರಂಭವಾಗಿದ್ದರಿಂದ ಹಾಗೂ ನದಿಗೆ ಬೇಸಿಗೆ ಕಾಲದಲ್ಲಿ ನೀರಿನ ಅಭಾವ ಆಗಬಾರದೆಂಬ ಉದ್ದೇಶದಿಂದ ಜಾಕ್ವೆಲ್ ಬಳಿ ಮರಳಿನ ಮೂಟೆಗಳ ತಡೆಗೋಡೆ ನಿರ್ಮಿಸಿದ್ದರ ಪರಿಣಾಮ ತ್ಯಾಜ್ಯಾ ಮತ್ತು ಕೆಂಪು ಮಣ್ಣು ಮಿಶ್ರಿತ ನೀರು ಮುಂದಕ್ಕೆ ಹೋಗದೆ ಅಲ್ಲೇ ನಿಂತು ಕಲುಷಿತಗೊಂಡಿತು.
ಮಳೆಗಾಲದಲ್ಲಿ ನಗರದ ಜನತೆಗೆ ಕೆಂಪು ಮಣ್ಣು ಮಿಶ್ರಿತ ಕಲುಷಿತಗೊಂಡ ನೀರು ಸರಬರಾಜು ಆಗುವುದು ಮಾಮೂಲಿಯಾಗಿದೆ. ಈ ಸಮಸ್ಯೆ ಸರಿಪಡಿಸಲು ಹೆಚ್ಚಿನ ಸಾಮರ್ಥ್ಯದ ಫಿಲ್ಟರ್ ಬೆಡ್ಗಳು, ಪೈಪ್ಗಳನ್ನು ಅಳವಡಿಸಬೇಕಾಗಿದ್ದು ಹೆಚ್ಚು ಮೊತ್ತದ ಹಣ ಖರ್ಚಾಗುತ್ತದೆ ನಮ್ಮ ಬಳಿ ಅಷ್ಟು ಅನುದಾನವಿಲ್ಲಾ ಎಂದು ಇಲ್ಲಿಯವರೆಗೆ ಅಧಿಕಾರಿಗಳು ಶಾಶ್ವತ ಕ್ರಮಕ್ಕೆ ಮುಂದಾಗದೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದರು. ಜನಸಾಮಾನ್ಯರು ವಿಧಿ ಇಲ್ಲದೇ ದಿನ ಬಳಕೆ, ಗೃಹ ಬಳಕೆ ಮತ್ತು ಕುಡಿಯಲು ಮಣ್ಣು ಮಿಶ್ರಿತ ನೀರನ್ನೆ ಬಳಕೆ ಮಾಡುತ್ತಿದ್ದು ಇದರಿಂದ ಅನಾರೋಗ್ಯ ಕಾಡುವ ಭೀತಿ ಎದುರಾಗಿತ್ತು.
ಶಾಸಕರ ಡಿ.ರವಿಶಂಕರ್ ವಿಶೇಷ ಕಾಳಜಿ: ಇಂತಹ ಸಂದರ್ಭದಲ್ಲಿ ಚುನಾವಣಾ ನೀತಿ ಸಂಹಿತೆ ಇದ್ದರು ಕೂಡ ತುರ್ತು ಪರಿಸ್ಥಿತಿಯಾದ್ದರಿಂದ ಸ್ಥಳೀಯಾ ಶಾಸಕ ಡಿ.ರವಿಶಂಕರ್ ಅವರು ಅಧಿಕಾರಿಗಳ ತಂಡದೊಂದಿಗೆ ಪಂಪ್ಹೌಸ್ಗೆ ತೆರಳಿ ಪರಿಶೀಲನೆ ಮಾಡಿದರಲ್ಲದೇ ನೀರು ಶುದ್ಧಿಕರಣವಾಗಲು ಇರುವ ಸಮಸ್ಯೆಗಳು, ಕಾರ್ಯ ನಿರ್ವಹಿಸಿದ ಯಂತ್ರಗಳ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರಲ್ಲದೇ ಏನಾದರು ಆಗಲಿ ಪಟ್ಟಣದ ಜನತೆಗೆ ಶುದ್ದ ಕುಡಿಯುವ ನೀರು ಪೂರೈಕೆ ಆಗುವಂತೆ ಕ್ರಮಕೈಗೊಂಡು ಜನರ ಆರೋಗ್ಯದ ಮೇಲೆ ಯಾವುದೇ ದುಷ್ಪರಿಣಾಮಗಳು ಉಂಟಾಗಬಾರದೆಂದು ಖಡಕ್ ಸೂಚನೆ ನೀಡಿದರು.
ಪುರಸಭಾ ಆಡಳಿತಾಧಿಕಾರಿ ಮೊಹಮದ್ ಹ್ಯಾರಿಸ್ ಸುಮೈರ್, ಜಿಲ್ಲಾ ಯೋಜನಾ ನಿರ್ದೇಶಕಿ ಶುಭ ಮತ್ತು ಪುರಸಭಾ ಮುಖ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಕಾಮಗಾರಿಗೆ ಬೇಕಾಗುವ ಅನುದಾನವನ್ನು ಪುರಸಭೆಯಿಂದಲೇ ಭರಿಸುವಂತೆ ಈ ಕೆಲಸಕ್ಕೆ ಅಗತ್ಯವಾದ ಅಂದಾಜು ಪಟ್ಟಿ ತಯಾರಿಸಿ ಶೀಘ್ರವಾಗಿ ಪ್ರಾರಂಭವಾಗಿ ಸಿಂಗಲ್ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸುವಂತೆ ತಿಳಿಸಿ ಕೆಲಸ ನಡೆಯುತ್ತಿರುವುದರ ಬಗ್ಗೆ ಸ್ಥಳಕ್ಕೆ ಪ್ರತಿದಿನ ಪುರಸಭಾ ಮುಖ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ನನಗೆ ತಿಳಿಸುವಂತೆ ಆದೇಶಿಸಿದರು.
ಕಳೆದ ಹಲವು ವರ್ಷಗಳಿಂದಲೂ ಯಾವುದೇ ಶಾಸಕರಾಗಲಿ ಮತ್ತು ಅಧಿಕಾರಿಗಳಾಗಲಿ ಕೈಹಾಕದೆ ಇದ್ದ ಕೆಲಸಕ್ಕೆ ಶಾಸಕ ಡಿ.ರವಿಶಂಕರ್ ವಿಶೇಷ ಕಾಳಜಿ ವಹಿಸಿ ಅಮೃತ ಯೋಜನೆಯಡಿಯಲ್ಲಿ ಬರುವ ೩೦ ಕೋಟಿ ಅನುಧಾನದಲ್ಲಿ ಈ ಕಾಮಗಾರಿಯನ್ನು ಮಾಡಿಸೋಣ ಎಂದು ಕೈಕಟ್ಟಿ ಕುಳಿತಿದ್ದ ಸಿಬ್ಬಂದಿ ಮತ್ತು ಅಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ಪುರಸಭೆಯ ಅನುದಾನ ೩೨ ಲಕ್ಷ ವೆಚ್ಚದಲ್ಲಿ ತುರ್ತಾಗಿ ಕೆಲಸ ಪ್ರಾರಂಭಿಸಿದ್ದು, ಆದಷ್ಟು ಬೇಗ ಕೆಲಸ ಮುಗಿಸಿ ಪಟ್ಟಣದ ಜನತೆಗೆ ಶುದ್ದು ಕುಡಿಯುವ ನೀರನ್ನು ಪೂರೈಕೆ ಮಾಡಬೇಕೆಂಬ ವಿಶೇಷ ಆಸಕ್ತಿ ತಳೆದಿದ್ದಾರೆ.
ಘಟಕ ನಿರ್ಮಾಣ: ಮೈಸೂರು ಅರಸರಿಂದ ನಿರ್ಮಾಣವಾಗಿರುವ ಕೆ.ಆರ್.ನಗರ ಪಟ್ಟಣಕ್ಕೆ ೧೯೭೯ರಲ್ಲಿ ಮೊದಲನೇಯ ಹಂತದ ಶುದ್ದಕುಡಿಯುವ ನೀರಿನ ಸರಬರಾಜು ಘಟಕ ನಂತರ ೨೦೦೩ ಎರಡನೇ ಹಂತದ ಘಟಕ ನಿರ್ಮಿತಗೊಂಡು ಕಾವೇರಿ ನದಿಗೆ ೨ ಜಾಕ್ವೇಲ್ಗಳನ್ನು ಅಳವಡಿಸಿ ಪಟ್ಟಣದ ೨೩ ವಾರ್ಡ್ಗಳಿಗೆ ಪ್ರತೀದಿನ ಸುಮಾರು ೬.೮೦ ದಶಲಕ್ಷ ಲೀಟರ್ ನಷ್ಟು ಕುಡಿಯುವ ನೀರು ಸರಬರಾಜಾಗುತ್ತಿದೆ.
ಶುದ್ದಿಕರಣ ಘಟಕಗಳ ಸಾಮರ್ಥ್ಯ: ಕಲುಷಿತ ನೀರು ಸರಬರಾಜು ಆಗಲು ನೀರು ಶುದ್ದಿಕರಣ ಘಟಕಕ್ಕೆ ಅಳವಡಿಸಿರುವ ಕಡಿಮೆ ಸಾಮರ್ಥ್ಯದ ಉಪಕರಣಗಳು. ಮೊದಲನೆ ಹಂತದಲ್ಲಿ ೭೦ ಎಚ್ಪಿ ಮತ್ತು ೧೦೦ ಹೆಚ್ಪಿ ಸಾಮರ್ಥ್ಯದ ಮೋಟಾರಗಳಿದ್ದು ೧೦೦ ಎಚ್ಪಿ ಸಮರ್ಥ್ಯದ ೨ ಪಿಲ್ಟರ್ ಬೆಡ್ಗಳನ್ನು ಅಳವಡಿಸಲಾಗಿದೆ. ಹಾಗೂ ಎರನೇ ಹಂತಹ ಘಟಕಕ್ಕೆ ೧೭೦ ಹೆಚ್ಪಿ ೨೪೦ ಹೆಚ್ಪಿ ಸಾಮರ್ಥ್ಯದ ಮೋಟಾರ್ಗಳಿದ್ದು ೨೦೦ ಹೆಚ್ಪಿ ಸಾಮರ್ಥ್ಯದ ೨ ಪಿಲ್ಟರ್ ಬೆಡ್ ಬದಲಾವಣೆ ಕೆಲಸ ನಡೆಯುತ್ತಿದ್ದು ಎರಡು ದಿನಗಳಲ್ಲಿ ಮುಕ್ತಾಯಗೊಳ್ಳಲಿದೆ.
ಪಿಲ್ಟರ್ ಬೆಡ್ನಲ್ಲಿ ನಾಲ್ಕೈದು ಲೋಡ್ನಷ್ಟು ಮಣ್ಣು ಶೇಖರಣೆಯಾಗಿದ್ದು ಅದನೆಲ್ಲಾ ಈಗ ಹೊರ ಆಕುವ ಮೂಲಕ ನೀರು ಶುದ್ಧಿಕರಣಕ್ಕೆ ಬೇಕಾದ ಮರಳು, ಬೆಣಚುಕಲ್ಲುಗಳು, ರಾಸಾಯನೀಕಗಳನೆಲ್ಲಾ ಈಗಾಗಲೇ ತಂದು ಇಡಲಾಗಿದ್ದು ಎರಡನೇ ಹಂತಹ ಘಟಕದ ಕೆಲಸ ಮುಗಿದ ನಂತರ ಮೊದಲ ಹಂತಹದ ಘಟಕದ ಪಿಲ್ಟರ್ ಬೆಡ್ ಬದಲಾಯಿಸುವ ಕೆಲಸ ಪ್ರಾರಂಭವಾಗಿ ಕಳೆದ ೧೦-೧೫ ವರ್ಷಗಳಿಂದ ಮಳೆಗಾಲದಲ್ಲಿ ಕೆಂಪು ಮಿಶ್ರಿತ ಕಲುಷಿತ ಕುಡಿಯುವ ನೀರನ್ನೇ ಕುಡಿಯುತ್ತಿದ್ದ ಜನತೆಗೆ ಈಗ ಶುದ್ಧಕುಡಿಯುವ ನೀರು ಸಿಗಲಿದೆ ಎಂಬ ನೆಮ್ಮದಿ ದೊರೆಯಲಿದೆ.
ಕೋಟ್
ಪಟ್ಟಣದ ಜನತೆಗೆ ಮಣ್ಣು ಮಿಶ್ರಿತ ಕೆಂಪು ನೀರು ಸರಬರಾಜಾಗುತ್ತಿದ್ದು ಸಮಸ್ಯೆ ಎದುರಾಗಿತ್ತು ಶುದ್ದ ಮತ್ತು ಶುಚಿ ಕುಡಿಯುವ ನೀರಿನ ಸರಬರಾಜಾಗಬೇಕೆಂಬ ಉದ್ದೇಶದಿಂದ ಪಂಪ್ಹೌಸ್ಗೆ ಅಧಿಕಾರಿಗಲೊಂದಿಗೆ ಬೇಟಿ ನೀಡಿ ಪರಿಶೀಲಿಸಿ ತುರ್ತಾಗಿ ವಾಟರ್ ಫಿಲ್ಟರ್ ಬೆಡ್ ಬದಲಾಯಿಸುವ ಕೆಲಸ ಮಾಡಿಸಲಾಗುತ್ತಿದೆ. ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲಾಗಿದ್ದು ಇನ್ನೆರಡು ದಿನಗಳಲ್ಲಿ ಕಾಮಗಾರಿ ಪೂರ್ಣವಾಗಲಿದ್ದು ಚಾಲನೆ ಸಿಗಲಿದೆ. ಜನ ಸಾಮಾನ್ಯರ ಆರೋಗ್ಯದ ದೃಷ್ಠಿಯಿಂದ ತುರ್ತಾಗಿ ತೆಗೆದುಕೊಂಡ ಕೆಲಸವಾಗಿದೆ. – ಡಿ.ರವಿಶಂಕರ್, ಶಾಸಕರು.
ಮಳೆಗಾಲದಲ್ಲಿ ಕೆಂಪು ಮಿಶ್ರಿತ ನೀರು ಸರಬರಾಜು ಆಗುತ್ತಿದ್ದು ಶುದ್ಧಿಕರಣ ಘಟಕದ ವಾಟರ್ ಪಿಲ್ಟರ್ ಬೆಡ್ಗಳನ್ನು ಅಳವಡಿಸಲಾಗುತ್ತಿದೆ. ಶಾಸಕರ ಸೂಚನೆ ಮತ್ತು ಉಪವಿಭಾಗಾಧಿಕಾರಿಗಳ ನಿರ್ದೇಶನದಂತೆ ಪ್ರತಿನಿತ್ಯ ನಾನು ಸ್ಥಳಕ್ಕೆ ತೆರಳಿ ಪರಿಶೀಲನೆ ಮಾಡಿ ಶಾಸಕರಿಗೆ, ಉಪವಿಭಾಗಾಧಿಕಾರಿಗಳಿಗೆ ಮತ್ತು ಪಿಡಿಯವರಿಗೆ ವರದಿ ನೀಡುತ್ತಿದ್ದೇನೆ. ಎರಡು ದಿನಗಳಲ್ಲಿ ಶುದ್ಧ ಕುಡಿಯುವ ನೀರು ಸರಬರಾಜಾಗಲಿದೆ. -ಡಾ.ಜಯಣ್ಣ, ಪುರಸಭಾ ಮುಖ್ಯಾಧಿಕಾರಿ.
೨೬ ಕೆಆರ್ಎನ್-೧,೨,೩:- ಕೆ.ಆರ್.ನಗರದ ಹಳೆಯ ಎಡತೊರೆಯಲ್ಲಿರುವ ಪಂಪ್ಹೌಸ್ನಲ್ಲಿ ಇರುವ ನೀರು ಶುದ್ಧಿಕರಣಘಟಕಗಳು.
೨೬ ಕೆಆರ್ಎನ್-೪,೫:- ಪಂಪೌಸ್ನ ನೀರು ಶುದ್ದೀಕರಣ ಘಟಕಗಳಲ್ಲಿ ವಾಟರ್ ಫಿಲ್ಟರ್ ಬೆಡ್ನಲ್ಲಿ ತುಂಬಿಕೊಂಡಿದ್ದು ಹೊರ ತೆಗೆದಿರುವ ಮಣ್ಣಿನ ರಾಶಿ.
೨೬ ಕೆಆರ್ಎನ್-೬,೭:- ಪಂಪೌಸ್ನ ನೀರು ಶುದ್ದೀಕರಣ ಘಟಕಗಳಲ್ಲಿ ವಾಟರ್ ಫಿಲ್ಟರ್ ಬೆಡ್ನ ಬದಲಾಯಿಸುತ್ತಿರುವ ಕಾರ್ಮಿಕರು ಅದನ್ನು ಪುರಸಭಾ ಸದಸ್ಯರೊಂದಿಗೆ ಪರಿಶೀಲನೆ ಮಾಡುತ್ತಿರುವ ಮುಖ್ಯಾಧಿಕಾರಿ ಡಾ.ಜಯಣ್ಣ.
೨೬ ಡಿ.ರವಿಶಂಕರ್-೮
೨೬ ಡಾ.ಜಯಣ್ಣ-೯