ಶಾಸಕ ಎ.ಆರ್.ಕೃಷ್ಣಮೂರ್ತಿ ಅಭಿಪ್ರಾಯ । ಪೌರಕಾರ್ಮಿಕರ ದಿನಾಚರಣೆ ಸಮಾರಂಭ
ಪ್ರತಿನಿಧಿ ವರದಿ ಕೊಳ್ಳೇಗಾಲ
ನಾಗರೀಕ ಸ್ವಚ್ಛ ಹಾಗೂ ಆರೋಗ್ಯ ಸಮಾಜ ನಿರ್ಮಾಣದಲ್ಲಿ ಪೌರಕಾರ್ಮಿಕರ ಕೊಡುಗೆ ಅಪಾರ ಎಂದು ಶಾಸಕ ಎ.ಆರ್.ಕೃಷ್ಣಮೂರ್ತಿ ಬಣ್ಣಿಸಿದರು.
ನಗರಸಭಾ ಆಡಳಿತದಿಂದ ಮಂಗಳವಾರ ಪಟ್ಟಣದ ಶ್ರೀ ವೆಂಕಟೇಶ್ವರ ಮಹಲ್ ಕಲ್ಯಾಣ ಮಂಟದಲ್ಲಿ ನಗರಸಭಾಧ್ಯಕ್ಷೆ ಸಿ.ಎನ್.ರೇಖಾ ರಮೇಶ್ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಸಮಾರಂಭವನ್ನು ಅವರು ಉದ್ಘಾಟಿಸಿ ಮಾತನಾಡಿದರು.
ಎಲ್ಲೆಡೆ ಜನರು ಬೆಳಗ್ಗೆ ಎದ್ದೇಳುವ ಮುನ್ನವೇ ನಸುಕಿನಲ್ಲಿಯೇ ಪಟ್ಟಣದ ಸ್ವಚ್ಚತೆಗಾಗಿ ಶ್ರಮಿಸುವ ಪೌರ ಕಾರ್ಮಿಕರನ್ನು ಎಲ್ಲ ಜಾತಿ ವರ್ಗದ ಜನರೆಲ್ಲರೂ ತಪ್ಪದೇ ಗೌರವಿಸಬೇಕು. 1994ರಲ್ಲಿ ಮೊದಲ ಬಾರಿಗೆ ನಾನು ಸಂತೆಮರಹಳ್ಳಿ ಕ್ಷೇತ್ರದಿಂದ ಶಾಸಕನಾದಾಗಿನಿಂದಲೂ ಪೌರ ಕಾರ್ಮಿಕರನ್ನು ಗೌರವಿಸುತ್ತಿದ್ದೇನೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಭಾರತ ದೇಶಕ್ಕೆ ಕೊಟ್ಟ ಸಂವಿಧಾನ ಹಾಗೂ ಅದರ ಆಶಯಗಳಿಂದ ನಾವೆಲ್ಲ ಉತ್ತಮ ನಾಗರೀಕರರಾಗಿ ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಬಾಳಿ ಬದುಕುತ್ತಿದ್ದೇವೆ ಎಂದರು.
ಭಾರತ ದೇಶ ಮುಂದುವರೆದ ದೇಶಗಳ ಸಾಲಿನಲ್ಲಿ ನಿಲ್ಲಬೇಕಾದರೆ, ನಾವೆಲ್ಲರೂ ಸ್ವಚ್ಛತೆಗೆ ಹೆಚ್ಚು ಒತ್ತು ನೀಡಬೇಕು. ಪಟ್ಟಣದ ಆರೋಗ್ಯ ಕಾಪಾಡಲು ಕೇಲವ ಪೌರ ಕಾರ್ಮಿಕರಿಗೆ ಜವಾಬ್ದಾರಿ ನೀಡದೆ, ಪ್ರತಿಯೊಬ್ಬ ನಾಗರೀಕನೂ ತಮ್ಮ ಸುತ್ತಮುತ್ತಲ ಪರಿಸರವನ್ನು ಸ್ವಚ್ಛವಾಗಿಟ್ಟಿಕೊಳ್ಳಲು ಮುಂದಾಗಬೇಕು ಎಂದು ಕೆರೆ ನೀಡಿದರು.
ಪೌರ ಕಾರ್ಮಿಕರಿಗೆ ನಿವೇಶನ ನಿರ್ಮಾಣ ಮಾಡಿಕೊಡಲು ಪ್ರಯತ್ನಿಸಲಾಗುತ್ತಿದೆ. ಅಲ್ಲದೇ, ಅವರಿಗೆ ಗುಣಮಟ್ಟದ ಮನೆಯಲ್ಲಿ ವಾಸ ಮಾಡುವಂತೆ ಕ್ರಮವಹಿಸಲಾಗುವುದು ಎಂದು ಹೇಳಿದರು.
ಪೌರ ಕಾರ್ಮಿಕರ ಮಕ್ಕಳು ಸ್ವಾವಲಂಬಿ ಬದುಕು ನಡೆಸುವಂತೆ ಉತ್ತಮ ವಿದ್ಯಾಭ್ಯಾಸ ಹಾಗೂ ಉದ್ಯೋಗ ಕೊಡಿಸಲು ಪಾಲಕರು ಮುಂದಾಗಬೇಕು. ನಿಮಗೆ ಏಕಾದರೂ ಕೆಲಸ ಕಾರ್ಯವಾಗಬೇಕಾದಲ್ಲಿ ನನಗೆ ತಿಳಿಸಿ ಎಂದು ಕಿವಿ ಮಾತು ಹೇಳಿದರು.
ನಗರಸಭಾ ಉಪಾಧ್ಯಕ್ಷ ಎ.ಪಿ.ಶಂಕರ್ ಮಾತನಾಡಿ, ಪೌರಕಾರ್ಮಿಕರ ಸೇವೆ ಪ್ರಪಂಚಾಧ್ಯಂತ ಅತ್ಯಮುಲ್ಯ. ಇಂತಹ ಮಹತ್ವದ ಕಾಯಕದಲ್ಲಿ ತೊಡಗುವ ಪೌರಕಾರ್ಮಿಕರ ಜತೆ ಸಾರ್ವಜನಿಕರು ಸಂಯಮವಾಗಿ ವರ್ತಿಸಬೇಕು. ಹಿಂದಿನ ಅಮಾನವಿಯ ಪದ್ಧತಿಗಳನ್ನು ಅಂತ್ಯಗೊಳಿಸಬೇಕು. ಸಾರ್ವಜನಿಕರು ಪೌರಕಾರ್ಮಿಕರೊಟ್ಟಿಗೆ ಸ್ವಚ್ಛತೆ ವಿಚಾರದಲ್ಲಿ ಸಾಧ್ಯವಾದಷ್ಟು ಕೈ ಜೋಡಿಸಬೇಕು. ಪೌರ ಕಾರ್ಮಿಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ವಿವಿಧ ಕ್ಷೇತ್ರಗಳಲ್ಲಿ ಉನ್ನತ ವೃತ್ತಿ ಮತ್ತು ಅಧಿಕಾರ ಅಲಂಕರಿಸುವಂತೆ ಪಣತೊಡಬೇಕು ಎಂದು ಕರೆ ನೀಡಿದರು.
ಪರಿಸರ ವಿಭಾಗದ ಎಇಇ ಎ.ಟಿ.ಪ್ರಸನ್ನ ಮಾತನಾಡಿ, ಕೊಳ್ಳೇಗಾಲ ನಗರಸಭೆಯಲ್ಲಿ ಒಟ್ಟು 91 ಕಾರ್ಮಿಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರೆಲ್ಲರಿಗೆ ನಗರಸಭೆಯಿಂದ ಆರೋಗ್ಯ ವಿಮೆ ವ್ಯವಸ್ಥೆ ಮಾಡಲಾಗಿದೆ. 30 ಜನರಿಗೆ ಗೃಹಭಾಗ್ಯ ಯೋಜನೆಯಡಿ ಮನೆ ನಿರ್ಮಾಣ ಮಾಡಿಕೊಡಲಾಗಿದೆ. ಕಾಲ-ಕಾಲಕ್ಕೆ ಆರೋಗ್ಯ ತಪಾಸಣೆ ಮಾಡಲಾಗುತ್ತಿದೆ. 21 ದಿನ ವಿಶೇಷ ವೇತನವನ್ನು ವರ್ಷದಲ್ಲಿ ನೀಡಲಾಗುತ್ತಿದೆ. ನಿಧನರಾದ 4 ಪೌರಕಾರ್ಮಿಕರ ಕುಟುಂಬಕ್ಕೆ ಸರ್ಕಾರಿ ಕೆಲಸ ನೀಡಲಾಗಿದೆ. ಪೌರಕಾರ್ಮಿಕ ದಿನಾಚರಣೆ ಹಿನ್ನೆಲೆ ಪ್ರತಿ ಕಾರ್ಮಿಕರಿಗೆ 7 ಸಾವಿರ ರೂ. ನೀಡಲಾಗುತ್ತಿದೆ. ಪೌರ ಕಾರ್ಮಿಕರ ಮಕ್ಕಳ ಉನ್ನತ ವಿದ್ಯಾಬ್ಯಾಸಕ್ಕೆ ಅನುಕೂಲವಾಗುಂತೆ ಲ್ಯಾಪ್ ಟಾಪ್ ಕೊಡಲು ನಗರಸಭೆ ನಿಧಿಯಿಂದ ಅನುದಾನ ಮೀಸಲಿಡಲಾಗಿದೆ ಎಂದು ತಿಳಿಸಿದ ಅವರು, ಪಟ್ಟಣದ ಸ್ವಚ್ಛತೆ ಜತೆಗೆ ನಿಮ್ಮ ಆರೋಗ್ಯವನ್ನು ಪಾಪಾಡಿಕೊಳ್ಳಿ ಮತ್ತು ಮಕ್ಕಳಿಗೆ ಉತ್ತಮ ವಿದ್ಯಾಬ್ಯಾಸ ನೀಡಿ ಎಂದು ಕರೆ ನೀಡಿದರು ಹಾಗೂ ಪ್ರತಿವರ್ಷ ಸೆ.23 ರಂದು ಪೌರಕಾರ್ಮಿಕರ ದಿನಾಚರಣೆ ಆಚರಿಸಲು ಸರ್ಕಾರ ಆದೇಶಿಸಿದೆ. ಆದರೆ, ಅನ್ಯ ಕಾರಣದಿಂದ ಈ ದಿನ ಆಚರಿಸಲಾಯಿತು ಎಂದು ಹೇಳಿದರು.
ನಗರಸಭಾ ಸದಸ್ಯೆ ಸುಶೀಲ, ಭಾಗ್ಯ, ಕವಿತಾ, ಬಸ್ತೀಪುರ ಶಾಂತರಾಜು, ರಾಮಕೃಷ್ಣ, ಜಿ.ಎಂ.ಸುರೇಶ್, ಶಂಕರ್ ನಾರಾಯಣಗುಪ್ತ, ಮನೋಹರ್, ರಾಘವೇಂದ್ರ, ಜಿ.ಪಿ.ಶಿವಕುಮಾರ್, ಎಸ್.ಮಂಜುನಾಥ್, ವಿ.ಧರಣೇಶ್, ನಾಗೇಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ತೋಟೇಶ್, ಪೌರಾಯುಕ್ತ ಎ.ರಮೇಶ್, ಸಮುದಾಯ ಸಂಘಟನಾಧಿಕಾರಿ ಪರಶಿವ, ಹೆಲ್ತ್ ಇನ್ಸ್ಪೆಕ್ಟರ್ ಚೇತನ್, ಭೂಮಿಕಾ ಸೇರಿ ಇತರರು ಇದ್ದರು.
8ಕೆಜಿಎಲ್-1 ಫೋಟೋ ಶೀರ್ಷಿಕೆ: ಕೊಳ್ಳೇಗಾಲ ಪಟ್ಟಣದ ಶ್ರೀ ವೆಂಕಟೇಶ್ವರ ಮಹಲ್ ಕಲ್ಯಾಣ ಮಂಟದಲ್ಲಿ ನಗರಸಭಾ ಆಡಳಿತದಿಂದ ಮಂಗಳವಾರ ಆಯೋಜಿಸಿದ್ದ ಪೌರಕಾರ್ಮಿಕರ ದಿನಾಚರಣೆ ಸಮಾರಂಭವನ್ನು ಶಾಸಕ ಎ.ಆರ್.ಕೃಷ್ಣಮೂರ್ತಿ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು.