ಪ್ರತಿನಿಧಿ ವರದಿ ತಿ.ನರಸೀಪುರ
ರೈತರ ಪಂಪ್ ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ಸರಬರಾಜು ಮಾಡದ ಸರ್ಕಾರ ಮತ್ತು ಅಧಿಕಾರಿಗಳ ಕ್ರಮವನ್ನು ಖಂಡಿಸಿ ಚೌಹಳ್ಳಿ, ನಿಲಸೋಗೆ ಮತ್ತು ಇನ್ನಿತರ ಗ್ರಾಮದ ರೈತರು ಸೆಸ್ಕ್ ಕಚೇರಿಗೆ ಬೀಗ ಜಡಿದು ಎರಡು ಗಂಟೆಗಳಿಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು.
ಪಟ್ಟಣದ ಸೆಸ್ಕ್ ಕಚೇರಿಯ ಮುಂದೆ ಜಮಾವಣೆಗೊಂಡ ರೈತರು ಬೆಳೆಗಳಿಗೆ ಸರ್ಕಾರ ನಾಲಾಗಳ ಮುಖೇನ ನೀರು ಬಿಟ್ಟಿಲ್ಲ, ಬೆಳೆಗಳಿಗೆ ಪಂಪ್ ಸೆಟ್ ಮೂಲಕ ನೀರುಣಿಸಲು ಸೆಸ್ಕ್ ಕೂಡ ಸಮರ್ಪಕ ವಿದ್ಯುತ್ ಸರಬರಾಜು ಮಾಡುತ್ತಿಲ್ಲ ಎಂದು ಆಕ್ರೋಶ ಭರಿತ ರೈತರು ಪ್ರತಿಭಟಿಸಿದರು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ರೈತ ಮುಖಂಡ ನಂಜುಂಡಸ್ವಾಮಿ, ಸರ್ಕಾರ ರೈತರ ಪಂಪ್ ಸೆಟ್ ಗಳಿಗೆ ಸತತ 7 ಗಂಟೆಗಳ ಕಾಲ ನಿರಂತರ ವಿದ್ಯುತ್ ಪೂರೈಕೆ ಮಾಡುವುದಾಗಿ ಹೇಳಿತ್ತು. ಆದರೆ 7 ಗಂಟೆಯಲ್ಲ, ಕೇವಲ 3 ಗಂಟೆಗಳ ಕಾಲವೂ ರೈತರ ಪಂಪ್ ಸೆಟ್ ಗಳಿಗೆ ವಿದ್ಯುತ್ ಸರಬರಾಜು ಆಗುತ್ತಿಲ್ಲ. ತಾಲೂಕಿನಾದ್ಯಂತ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಆದ ಪರಿಣಾಮ ಬೆಳೆದ ಬೆಳೆಗಳು ಒಣಗುತ್ತಿವೆ. ಹಾಗಾಗಿ ಸರ್ಕಾರ ನಿಗದಿ ಮಾಡಿರುವಂತೆ ರೈತರ ಪಂಪ್ ಸೆಟ್ ಗಳಿಗೆ ನಿರಂತರ ವಿದ್ಯುತ್ ಸರಬರಾಜು ಮಾಡುವಂತೆ ಅಗ್ರಹಿಸಿದರು.
ನಿಗದಿತ 7 ಗಂಟೆಗಳ ವಿದ್ಯುತ್ ಸರಬರಾಜಿನಲ್ಲಿ ಬೆಳಗ್ಗೆ ಮತ್ತು ರಾತ್ರಿ ಎರಡು ಅವಧಿಯಲ್ಲಿ ನಿರಂತರ ವಿದ್ಯುತ್ ಸರಬರಾಜು ಮಾಡುವಂತೆ ಅಧಿಕಾರಿಗಳಿಗೆ ಮನವಿ ಮಾಡಿದರು. ಸ್ಥಳಕ್ಕೆ ಆಗಮಿಸಿದ ಸೆಸ್ಕ್ ನ ಎಇಇ ರೈತರ ಮನವಿಯನ್ನು ಸ್ವೀಕರಿಸಿ ವಿದ್ಯುತ್ ಸರಬರಾಜು ಮಾಡುವ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ರಾಚಪ್ಪ ಚೌಹಳ್ಳಿ, ನಿಲಸೋಗೆ ಪ್ರಸಾದ್, ಮಹಾದೇವ ಪ್ರಸಾದ್ , ಪ್ರದೀಪ್, ಸುಬ್ರಹ್ಮಣ್ಯ, ಮಹಾದೇವಸ್ವಾಮಿ, ಪ್ರಭು, ರಾಜು, ರವಿ, ಮನು, ಮಂಜು, ಧನಂಜಯ, ನಾಗಣ್ಣ, ಬಸವರಾಜು, ಗಿರೀಶ್, ಸುರೇಶ್ ಇತರರು.
ಬೇಸಿಗೆಯಲ್ಲಿ ಬಿಸಿಲಿನ ತಾಪ ಹೆಚ್ಚಾದ ಹಿನ್ನೆಲೆಯಲ್ಲಿ ಲೋಡ್ ಶೆಡ್ಡಿಂಗ್ ಮಾಡಲಾಗುತ್ತಿದ್ದು, ಇದರಿಂದ ಪಂಪ್ ಸೆಟ್ ಗಳಿಗೆ ವಿದ್ಯುತ್ ಸರಬರಾಜು ಮಾಡುವಲ್ಲಿ ತೊಂದರೆಯಾಗಿದೆ. ಮುಂದಿನ ದಿನಗಳಲ್ಲಿ ಪಂಪ್ ಸೆಟ್ ಗಳಿಗೆ ನಿರಂತರ ವಿದ್ಯುತ್ ಸರಬರಾಜು ಮಾಡಲು ಹೆಚ್ಚು ಗಮನಹರಿಸಲಾಗುವುದು.
ಧನಂಜಯ, ಎಇಇ, ಸೆಸ್ಕ್, ತಿ.ನರಸೀಪುರ