ಪ್ರತಿನಿಧಿ ವರದಿ ಹನೂರು
ತಾಲೂಕು ವ್ಯಾಪ್ತಿಯಲ್ಲಿ ನಶಿಸಿ ಹೋಗುತ್ತಿರುವ ದೇಸಿ ಗೋ ತಳಿಗಳನ್ನು ಸಂರಕ್ಷಣೆ ಮಾಡಲು ಸರ್ಕಾರಕ್ಕೆ ಮನವರಿಕೆ ಮಾಡಬೇಕೆಂದು ಶ್ರೀರಾಮಚಂದ್ರಪುರ ಮಠದ ಶ್ರೀ ರಾಘವೇಂದ್ರ ಭಾರತಿ ಮಹಾಸ್ವಾಮಿಗೆ ಕಿಸಾನ್ ಸಂಘದ ರೈತ ಮುಖಂಡರು ಮನವಿ ಮಾಡಿದರು.
ಭಾರತೀಯ ಕಿಸಾನ್ ಸಂಘದ ಬೋಸ್ಕೋ ಮಾತನಾಡಿ, ಹನೂರು ತಾಲೂಕು ವ್ಯಾಪ್ತಿಯಲ್ಲಿ 2018ರ ಸಾಲಿನಲ್ಲಿ ಸರ್ವೇ ಮಾಡಿದಾಗ ಒಂದು ಲಕ್ಷದ ಇಪ್ಪತ್ತು ಸಾವಿರ ದೇಸಿ ಗೋ ತಳಿಗಳಿದ್ದವು. ಆದರೆ ಈಗಿನ ಸರ್ಕಾರದ ಸರ್ವೇ ಪ್ರಕಾರ ಕೇವಲ 60 ಸಾವಿರಕ್ಕೆ ಇಳಿಕೆಯಾಗಿದ್ದು, ಮುಂದಿನ ದಿನಗಳಲ್ಲಿ ದೇಶಿ ತಳಿಗಳು ನಶಿಸುವುದರಲ್ಲಿ ಯಾವುದೇ ಅನುಮಾನವಿಲ್ಲ. ಇಲ್ಲಿನ ಗ್ರಾಮಗಳು ಕಾಡಂಚಿನ ಗ್ರಾಮಗಳಾಗಿದ್ದು, ಗೋವುಗಳು ತಲೆ ತಲಾಂತರದಿಂದ ಮೇವು ಮೇಯಲು ಅರಣ್ಯವನ್ನು ಅವಲಂಬಿಸಿದೆ ಎಂದರು.
ಈ ಹಿಂದೆ ಅರಣ್ಯದ ಮಧ್ಯಭಾಗದಲ್ಲಿ ಗೋವುಗಳ ದೊಡ್ಡಿಗಳನ್ನು ಹಾಕಿ ಮೇಯಿಸಲಾಗುತ್ತಿತ್ತು. ಈಗಿನ ಸರ್ಕಾರಗಳು ಮಲೆ ಮಹದೇಶ್ವರ ವನ್ಯಜೀವಿಧಾಮ ಕಾವೇರಿ ವನ್ಯಜೀವಿಧಾಮ ಎರಡು ಅರಣ್ಯ ಪ್ರದೇಶಗಳು ಸುಮಾರು 2 ಸಾವಿರ ಚದರ ಕಿಲೋಮೀಟರ್ ಇದ್ದು, ಕೇವಲ ನಾಲ್ಕು ಹುಲಿಗಳಿಗೆ ಸೀಮಿತಪಡಿಸಿ ದೇಸಿ ಗೋತಳಿಗಳಿಗೆ ನಿರ್ಬಂಧ ಹೇರಿದ್ದಾರೆ. ಇದರಿಂದ ರೈತರಿಗೆ ತೊಂದರೆಯಾಗುತ್ತಿದೆ ಈ ನಿಟ್ಟಿನಲ್ಲಿ ತಾವುಗಳು ಸರ್ಕಾರಕ್ಕೆ ಗಮನ ಸೆಳೆದು ಹುಲಿ ಸಂರಕ್ಷಿತ ಅರಣ್ಯವನ್ನು ಕೈಬಿಡಿಸಿ ದೇಶೀಯ ಗೋ ಸಂರಕ್ಷಿತ ಅರಣ್ಯ ಪ್ರದೇಶ ಎಂದು ಘೋಷಿಸಲು ತಾವು ಮನವರಿಕೆ ಮಾಡಿಕೊಡಬೇಕೆಂದು ಮನವಿ ಮಾಡಿದರು.
ಕಿಸಾನ್ ಸಂಘದ ತಾಲೂಕು ಅಧ್ಯಕ್ಷ ಹರೀಶ್ ಮಾತನಾಡಿ, ಹನೂರು ತಾಲೂಕು ಮಳೆಯಶ್ರಿತ ಪ್ರದೇಶವಾಗಿದ್ದು, ಹವಾಮಾನ ವೈಪರೀತ್ಯದಿಂದ ಕಾಲ-ಕಾಲಕ್ಕೆ ಮಳೆಯಾಗದೆ, ಇಲ್ಲಿನ ರೈತಾಪಿ ವರ್ಗ ಕೃಷಿಯಲ್ಲಿ ನಷ್ಟ ಅನುಭವಿಸುತ್ತಿದ್ದಾರೆ. ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲು ಸರ್ಕಾರಕ್ಕೆ ಅನೇಕ ಬಾರಿ ಮನವಿ ಸಲ್ಲಿಸಿದರೂ. ಸರ್ಕಾರ ಒಂದು ಜಲಾಶಯಕ್ಕೆ ಪೈಪ್ ಲೈನ್ ಮಾಡಿದ್ದು ಇದುವರೆಗೂ ನೀರು ಹರಿಸಿಲ್ಲ, ಇನ್ನುಳಿದ ರಾಮನಗುಡ್ಡ ಹುಬ್ಬೆಹುಣಸೆ, ಮಣಗಳ್ಳಿಕೆರೆ, ಅಲಗಾಪುರ ಕೆರೆ ಉಡುತೊರೆ ಹಳ್ಳ ಜಲಾಶಯ, ಕೀರೆ ಪಾತಿ ಕೆರೆ, ಹೂಗ್ಯಂ ಜಲಾಶಯ ಸೇರಿದಂತೆ ಮುಂತಾದ ಕೆರೆಗಳಿಗೆ ಸರ್ಕಾರ ಇದುವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದರು. ತಾವು ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿ ಸರ್ಕಾರದ ಗಮನಕ್ಕೆ ತಂದು ಇಲ್ಲಿನ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದರು. ಕಿಸಾನ್ ಸಂಘದ ಹಲವು ರೈತ ಮುಖಂಡರುಗಳು ಹಾಜರಿದ್ದರು.