ಮಂಡ್ಯ : ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಹೆಚ್ಚುವರಿ ಬಡ್ಡಿ, ಒಂದೇ ಕಂತು ಸ್ಕೀಂ, ನಿಮ್ಮ ಆಯ್ಕೆ ಸ್ಕೀಂನಡಿ ಹಂಚಿಕೆ ಮಾಡಿದ್ದ ನಿವೇಶನಗಳ ಕುರಿತಂತೆ ಸಿಬಿಐ ಅಧಿಕಾರಿಗಳು ಮತ್ತೆ ತನಿಖೆಯನ್ನು ಚುರುಕುಗೊಳಿಸಿದ್ದಾರೆ. ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲು ಆರಂಭಿಸಿದ್ದು, ಪ್ರಭಾವಿಗಳಿಗೆ ಶಾಕ್ ನೀಡಿದೆ.
ಒಂದೇ ಕಂತು ಸ್ಕಿಂ ನಡಿ 426, ನಿಮ್ಮ ಆಯ್ಕೆ ಸ್ಕಿಂ ನಡಿ 344 ಹಾಗೂ ಅವಧಿ ವಿಸ್ತರಿಸಿ ಹೆಚ್ಚುವರಿ ಬಡ್ಡಿ ಪಾವತಿಸಿಕೊಂಡಿರುವ ಸುಮಾರು 944 ನಿವೇಶನ ಪ್ರಕರಣ ಸೇರಿದಂತೆ ೧೮೨೧ ನಿವೇಶನಗಳ ಅಕ್ರಮ ಮಾರಾಟ ಪ್ರಕರಣ ಸಂಬಂಧ ಸಿಬಿಐ ಸಲ್ಲಿಸಿದ್ದ ಬಿ- ರಿಪೋರ್ಟ್ನ್ನು ಸಿಬಿಐ ವಿಶೇಷ ನ್ಯಾಯಾಲಯ ವಜಾಗೊಳಿಸಿದ್ದರಿಂದ ಶುಕ್ರವಾರದಿಂದ ಸಿಬಿಐ ಅಧಿಕಾರಿಗಳು ಮತ್ತೆ ತನಿಖೆ ಕೈಗೊಂಡಿದ್ದಾರೆ.
ಶುಕ್ರವಾರ ಮತ್ತು ಶನಿವಾರ ನಿವೇಶನ ಪಡೆದಿರುವ 18 ಜನರಿಗೆ ನೋಟಿಸ್ ಜಾರಿ ಮಾಡಿ ಸ್ಥಳಕ್ಕೆ ಕರೆಸಿಕೊಂಡು ವಿಚಾರಣೆ ಮಾಡಿದ್ದಾರೆ. ಸೋಮವಾರ ಮತ್ತು ಮಂಗಳವಾರವೂ ನಗರದಲ್ಲೇ ಠಿಕಾಣಿ ಹೂಡಿ ಮತ್ತಷ್ಟು ಜನರನ್ನು ವಿಚಾರಣೆಗೊಳಪಡಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಒಂದೇ ಕುಟುಂಬದ ಸದಸ್ಯರಿಗೆ ಎರಡು ನಿವೇಶನಗಳ ಹಂಚಿಕೆ, ಪ್ರಭಾವಿಗಳಿಗೆ ಒಂದೇ ಸ್ಥಳದಲ್ಲಿ ಕ್ರಮವಾಗಿ ನಿವೇಶನ ಹಂಚಿಕೆ ಮಾಡಿರುವುದು, ಸ್ಥಳೀಯರಲ್ಲದವರಿಗೆ ನಿವೇಶನ ಹಂಚಿರುವುದು, ಬೆಂಗಳೂರು, ಮೈಸೂರು ಸೇರಿದಂತೆ ಇತೆರೆಡೆ ನಿವೇಶನ ಹೊಂದಿರುವವರಿಗೂ ಕಾನೂನು ಬಾಹಿರವಾಗಿ ನಿವೇಶನ ಹಂಚಿಕೆ ಮಾಡಿರುವುದು, ನಿಗದಿತ ಅವಧಿಗೆ ಮುನ್ನ ಹಾಗೂ ನಿಗದಿ ಪಡಿಸಿದಷ್ಟು ಬಡ್ಡಿಯನ್ನೂ ಕಟ್ಟಿಸಿಕೊಳ್ಳದೆ ಅಕ್ರಮವಾಗಿ ನಿವೇಶನಗಳ ಕ್ರಯ ಪತ್ರಗಳನ್ನು ಮಾಡಿರುವುದು ಸೇರಿದಂತೆ ವಿವಿಧ ಆಯಾಮಗಳಲ್ಲಿ ಸಿಬಿಐ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.