ಪ್ರೊ.ಸಿ.ನಾಗಣ್ಣ ಅಭಿಪ್ರಾಯ । ಅರಸು ಅವರ ಹೆಸರು ಶಾಶ್ವತ । 109ನೇ ಜನ್ಮದಿನಾಚರಣೆ ಕಾರ್ಯಕ್ರಮ
ಸೋಲಿಲ್ಲದ ಸರದಾರ ಅರಸು
ಪ್ರತಿನಿಧಿ ವರದಿ ಚಾಮರಾಜನಗರ
ಮಾಜಿ ಮುಖ್ಯಮಂತ್ರಿ ದಿ.ಡಿ.ದೇವರಾಜ ಅರಸು ಅವರು ಸಮಾಜದಲ್ಲಿ ಬೇರೂರಿದ್ದ ಮಲ ಹೊರುವ ಅನಿಷ್ಟ ಪದ್ದತಿ ಹಾಗೂ ಜೀತ ಪದ್ದತಿಯನ್ನು ನಿರ್ಮೂಲನೆ ಮಾಡಿದ ಸಾಮಾಜಿಕ ಪರಿವರ್ತನೆಯ ಹರಿಕಾರ ಎಂದು ಮೈಸೂರು ವಿಶ್ವ ವಿದ್ಯಾನಿಲಯ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಸಿ.ನಾಗಣ್ಣ ಹೇಳಿದರು.
ನಗರದ ವರನಟ ಡಾ.ರಾಜಕುಮಾರ್ ಜಿಲ್ಲಾ ರಂಗ ಮಂದಿರದಲ್ಲಿ ಜಿಲ್ಲಾಡಳಿತ, ಜಿಪಂ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಡಿ.ದೇವರಾಜ ಅರಸು ಅವರ 109ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಆಧುನಿಕ ಭಾರತದ ಚರಿತ್ರೆಯಲ್ಲಿ ದೇವರಾಜ ಅರಸು ಅವರ ಹೆಸರು ಶಾಶ್ವತ. ಅವರು ಯಾರ ಸಹಾಯವಿಲ್ಲದೆ ಸ್ವಂತ ಪರಿಶ್ರಮದಿಂದ ಹಂತ ಹಂತವಾಗಿ ಮೇಲೆ ಬಂದವರು. ಬದುಕಿನ ಉದ್ದಕ್ಕೂ ಅವರು ಹುಲಿ, ಸಿಂಹದಂತೆ ಬದುಕಿದವರು ಎಂದರು.
ಕೇವಲ 31ನೇ ವಯಸ್ಸಿನಲ್ಲಿ ಪ್ರಜಾಪ್ರತಿನಿಧಿ ಸದಸ್ಯರಾಗಿ ಆಯ್ಕೆಯಾದ ಅರಸು ಅವರು ಕೂನೆಯ ವೆರೆಗೂ ಸೋಲಿಲ್ಲದ ಸರದಾರರಾಗಿ ಆಯ್ಕೆಯಾಗಿದ್ದರು. ಪ್ರಬಲ ಜಾತಿಗಳ ಪೈಪೋಟಿ ಇದ್ದರೂ ಸಹ ಸ್ವಂತ ಶಕ್ತಿಯಿಂದ ಬೆಳೆದು 1971-72ನೇ ಸಾಲಿನಲ್ಲಿ ರಾಜ್ಯದ 8ನೇ ಮುಖ್ಯಮಂತ್ರಿಯಾದರು. ಇವರು ಎರಡು ಬಾರಿ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು. ಇವರನ್ನು ಪರಿಶಿಷ್ಟ ಜಾತಿ ಮತ್ತು ಹಿಂದುಳಿದ ವರ್ಗಗಳ ಹರಿಕಾರ ಎಂದು ಕರೆಯಲಾಗುತ್ತಿತ್ತು. ಮೈಸೂರು ರಾಜ್ಯವನ್ನು 1973ರಲ್ಲಿ ಕರ್ನಾಟಕ ಎಂದು ಮರುನಾಮಕರಣ ಮಾಡಿದರು ಎಂದರು.
ಅಧಿಕ ಅವಧಿ ಮುಖ್ಯಮಂತ್ರಿಯಾಗಿದ್ದ ಇವರು ಅಧಿಕಾರಾವಧಿಯಲ್ಲಿ ಹಿಂದುಳಿದ ವರ್ಗದ ಆಯೋಗವನ್ನು ಎಲ್ಜಿ ಹಾವನೂರು ಅವರ ನೇತೃತ್ವದಲ್ಲಿ ಸ್ಥಾಪಿಸಿದರು. 1975ರಲ್ಲಿ ಋಣ ಮುಕ್ತ ಪರಿಹಾರ ಕಾಯ್ದೆ, 1976ರಲ್ಲಿ ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೆ ತಂದು ಉಳುವವನೇ ಭೂಮಿಯ ಒಡೆಯ ಕಾನೂನುಗಳನ್ನು ಜಾರಿಗೆ ತಂದರು. 1977ರಲ್ಲಿ ಮಲ ಹೊರುವ ಅನಿಷ್ಟ ಪದ್ದತಿಯನ್ನು ಹೋಲಾಡಿಸುವ ಜತೆಗೆ ಜೀತಪದ್ದತಿ ನಿರ್ಮೂಲನೆ ಮಾಡಿದರು ಎಂದು ತಿಳಿಸಿದರು.
ದಿ.ಡಿ.ದೇವರಾಜು ಅರಸು ಅವರ ದೂರ ದೃಷ್ಟಿಯ ಆಡಳಿತದ ನಿರ್ಧಾರಗಳು ಕ್ರಾಂತಿಕಾರಿ ಬದಲಾವಣೆಗೆ ನಾಂದಿಯಾದವು. ಗೇಣಿ ಶಾಸನ, ಹಾವನೂರು ಆಯೋಗದಂತಹ ಪ್ರಮುಖ ನಿರ್ಧಾರಗಳನ್ನು ಡಿ.ದೇವರಾಜ ಅರಸು ಅವರು ತೆಗೆದುಕೊಂಡ ಹಿನ್ನೆಲೆಯಲ್ಲಿ ಅದರ ಪ್ರತಿಫಲ ಇಂದಿನ ಪೀಳಿಗೆಗೆ ಆಗುತ್ತಿದೆ. ಗೇಣಿ ಹೋರಾಟದ ಅನುಷ್ಠಾನ ಆಗದಿದ್ದರೆ, ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಹಾವನೂರು ಆಯೋಗ ರಚಿಸದಿದ್ದರೆ. ಈವರೆವಿಗೂ ಹಿಂದುಳಿದವರಿಗೆ ನ್ಯಾಯ ಸಿಗುತ್ತಿರಲಿಲ್ಲ. ಆದರೆ ದೇವರಾಜ ಅರಸು ಅವರು ತಮ್ಮ ಕಟು ನಿರ್ಧಾರದಿಂದ ಮುಂದಿನ ಪೀಳಿಗೆಯ ಬದುಕಿನ ದೂರದೃಷ್ಠಿಯಿಂದ ಕ್ರಾಂತಿಕಾರಿ ಹೆಜ್ಜೆಗಳನ್ನು ಇಟ್ಟಿದ್ದರು ಎಂದು ಹೇಳಿದರು.
ಶಾಸಕ ಸಿ.ಪುಟರಂಗಶೆಟ್ಟಿ ಡಿ.ದೇವರಾಜು ಅರಸು ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿ, ಡಿ.ದೇವರಾಜ ಅರಸು ಸಾಮಾಜಿಕ ಪರಿವರ್ತನೆಯ ಹರಿಕಾರ. ಮಾಜಿ ಪ್ರಧಾನಿ ದಿ.ಇಂದಿರಾಗಾಂಧಿ ಅವರು 20ಅಂಶಗಳ ಕಾರ್ಯಕ್ರಮಗಳನ್ನು ಜಾರಿಗೊಳಿಸಿದರು. ಆ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಯಶಸ್ವಿಯಾಗಿ ಅನುಷ್ಠಾನಗೊಳಿಸಿದ ಕೀರ್ತಿ ದೇವರಾಜ ಅರಸು ಅವರಿಗೆ ಸಲ್ಲುತ್ತದೆ. ಭೂ ಸುಧಾರಣೆ ಕಾಯ್ದೆಯಿಂದ ಹಲವರಿಗೆ ಭೂಮಿ ಸಿಕ್ಕಂತಾಗಿದೆ. ಬಡವರಿಗಾಗಿ ಆಶ್ರಯ ಯೋಜನೆ ಹಾಗೂ ಕೂಪನ್ ಕಾರ್ಡ್ ವಿತರಣೆ ಯೋಜನೆಯನ್ನು ಜಾರಿಗೆ ತಂದರು ಎಂದು ಸ್ಮರಿಸಿದರು.
ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಮಾತನಾಡಿ, ದಿ.ಡಿ.ದೇವರಾಜ ಅರಸು ಅವರು ಸತತ 28 ವರ್ಷಗಳ ಕಾಲ ಸೋಲಿಲ್ಲದೆ ಶಾಸಕರಾಗಿ ಆಯ್ಕೆಯಾದವರು. ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಶಿಕ್ಷಣಕ್ಕೆ ಹೆಚ್ಚು ಆದ್ಯತೆ ನೀಡಿ, ಬಡವರು ಹಾಗೂ ಹಿಂದುಳಿದ ವರ್ಗಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಆಶಯಹೊಂದಿ ವಸತಿ ನಿಲಯವನ್ನು ಪ್ರಾರಂಭಿಸಿದರು. ಸಮಾಜಕ್ಕೆ ಅಂಟಿದ್ದ ಮಲ ಹೊರುವ ಅನಿಷ್ಟ ಪದ್ಧತಿಯನ್ನು ತೊಡೆದು ಹಾಕಿದರು. ಮೈಸೂರು ರಾಜ್ಯ ಎನ್ನುವುದನ್ನು ಕರ್ನಾಟಕ ರಾಜ್ಯ ಎಂದು ಮರು ನಾಮಕರಣ ಮಾಡಿದರು. ತಮ್ಮ ಅವಧಿಯಲ್ಲಿ ಭೂ ಸುಧಾರಣೆ ಕಾಯ್ದೆ ಜಾರಿಗೊಳಿಸಿದರು. ಜತೆಗೆ ಜೀತ ಮುಕ್ತ ಜೀತ ಪದ್ಧತಿ ನಿರ್ಮೂಲನೆ ನಾಂದಿ ಹಾಡಿದರು ಎಂದರು.
ಇದಕ್ಕೂ ಮೊದಲು ನಗರದ ಶ್ರೀ ಚಾಮರಾಜೇಶ್ವರ ಸ್ವಾಮಿ ದೇವಸ್ಥಾನದ ಎದುರು ಡಿ.ದೇವರಾಜ ಅರಸು ಅವರ ಭಾವಚಿತ್ರ ಮೆರವಣಿಗೆಗೆ ಶಾಸಕ ಸಿ.ಪುಟರಂಗಶೆಟ್ಟಿ ಚಾಲನೆ ನೀಡಿದರು. ಮೆರವಣಿಗೆ ದೇವಸ್ಥಾನದಿಂದ ಆರಂಭಗೊಂಡು ಶ್ರೀ ಭುವನೇಶ್ವರಿ ವೃತ್ತ, ಬಿ.ರಾಜಯ್ಯ ಜೋಡಿ ರಸ್ತೆ ಮೂಲಕ ಸಾಗಿ ವೇದಿಕೆ ಕಾರ್ಯಕ್ರಮ ಆಯೋಜನೆಗೊಂಡಿದ್ದ ಡಾ.ರಾಜಕುಮಾರ್ ರಂಗಮಂದಿರದಲ್ಲಿ ಅಂತ್ಯಗೊಂಡಿತು. ಮೆರವಣಿಗೆಯಲ್ಲಿ ವಿವಿಧ ಕಲಾತಂಡಗಳು ಪಾಲ್ಗೊಂಡು ಮೆರವಣಿಗೆಗೆ ಮೆರಗು ನೀಡಿದವು.
ಕಾರ್ಯಕ್ರಮದಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಕಾಡ ಅಧ್ಯಕ್ಷ ಪಿ.ಮರಿಸ್ವಾಮಿ, ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್, ಜಿಲ್ಲಾ ಗ್ಯಾರಂಟಿ ಅನುಸ್ಥಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು, ಜಿಪಂ ಸಿಇಒ ಮೋನಾ ರೋತ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಂ.ಕುಮಾರ್ ಸೇರಿದಂತೆ ಇತರರು ಇದ್ದರು.
20ಸಿಎಚ್ಎನ್.1:ಚಾಮರಾಜನಗರದ ವರನಟ ಡಾ.ರಾಜಕುಮಾರ್ ಜಿಲ್ಲಾ ರಂಗ ಮಂದಿರದಲ್ಲಿ ನಡೆದ ಡಿ.ದೇವರಾಜ ಅರಸು ಅವರ 109ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಕಾಡಾ ಅಧ್ಯಕ್ಷ ಪಿ.ಮರೀಸ್ವಾಮಿ ಉದ್ಘಾಟಿಸಿದರು.
————
ಡಿ.ದೇವರಾಜ ಅರಸು ಅವರು ಸಾಮಾಜಿಕ ಸಮಾನತೆಯ ಹರಿಕಾರ. ಪ್ರತಿರೋಧಗಳ ನಡುವೆಯೂ ಭೂ ಸುಧಾರಣೆ ಕಾಯ್ದೆಯನ್ನು ಜಾರಿಗೆ ತಂದು ಉಳುವವನೇ ಭೂಮಿಯ ಒಡೆಯ ಎಂದು ಭೂಮಿ ಇಲ್ಲದವರಿಗೆ ಭೂಮಿ ನೀಡಿದ ಮಹಾ ವ್ಯಕ್ತಿಯಾಗಿದ್ದಾರೆ.
– ಬಿ.ಟಿ.ಕವಿತಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚಾ.ನಗರ