ಡಿವೈಎಸ್ಪಿ ವಿರುದ್ಧ ಆಕ್ರೋಶ
ಪ್ರತಿನಿಧಿ ವರದಿ ಮಳವಳ್ಳಿ
ಪಟ್ಟಣದ ಪೊಲೀಸ್ ಠಾಣೆಯಲ್ಲಿ ಡಿವೈಎಸ್ಪಿ ನೇತೃತ್ವದಲ್ಲಿ ಗುರುವಾರ ಕರೆಯಲಾಗಿದ್ದ ಎಸ್ಸಿ, ಎಸ್ಟಿ ಸಮುದಾಯದ ಕುಂದು ಕೊರತೆ ಸಭೆಗೆ ಡಿವೈಎಸ್ಪಿ ವಿಳಂಬ ಮಾಡಿದ ಹಿನ್ನೆಲೆಯಲ್ಲಿ ಮುಖಂಡರು ಸಭೆಯನ್ನು ಬಹಿಷ್ಕರಿಸಿ ಆಕ್ರೋಶ ವ್ಯಕ್ತಪಡಿಸಿದರು.
ಠಾಣೆಯ ಸಂದರ್ಶಕರ ಸಭಾಂಗಣದಲ್ಲಿ ಬೆಳಗ್ಗೆ 10.30ಕ್ಕೆ ಸಭೆ ಆಯೋಜಿಸಲಾಗಿತ್ತು. ನಿಗದಿತ ಸಮಯಕ್ಕೆ ತಮ್ಮ ಅಹವಾಲುಗಳ ಬಗ್ಗೆ ಚರ್ಚಿಸಲು 50ಕ್ಕೂ ಹೆಚ್ಚು ನಾಗರಿಕರು ಹಾಜರಾಗಿದ್ದರು. ಮಧ್ಯಾಹ್ನ 12 ಗಂಟೆಯಾದರೂ ಸಭೆ ಪ್ರಾರಂಭಿಸದ್ದರಿಂದ ಬೇಸತ್ತು ಸಭೆ ಬಹಿಷ್ಕರಿಸಿ ಹೊರನಡೆದರು.
ಮುಖಂಡ ಮಹದೇವು ಮಾತನಾಡಿ, ಹಿಂದುಳಿದ ವರ್ಗದವರ ಕುಂದುಕೊರತೆಗಳನ್ನು ಆಲಿಸಿ ಚರ್ಚಿಸಲು ಸಭೆ ಕರೆದು, ನಿಗದಿತ ಸಮಯಕ್ಕಿಂತ 2 ಗಂಟೆ ಕಳೆದರು ಯಾರೊಬ್ಬರೂ ಆಗಮಿಸಲಿಲ್ಲ. ಆಗೊಮ್ಮೆ, ಹೀಗೊಮ್ಮೆ ಪೇದೆಗಳು ಬಂದು ಸ್ವಲ್ಪ ಸಮಯ ಕಾಯುವಂತೆ ಹೇಳಿ ಹೋಗುತ್ತಿದ್ದರು. ಡಿವೈಎಸ್ಪಿ ಕೃಷ್ಣಪ್ಪ ಠಾಣೆಯಲ್ಲಿದ್ದುಕೊಂಡೆ ಸಭೆಗೆ ಬರಲಿಲ್ಲ. ಸೌಜನ್ಯಕ್ಕಾದರೂ ವಿಳಂಬಕ್ಕೆ ಕಾರಣವೇನೆಂದು ಕರೆದು ಮಾಹಿತಿ ನೀಡಲಿಲ್ಲ. ಪೊಲೀಸರ ಈ ನಡೆ ಹಿಂದುಳಿದ ವರ್ಗಗಳ ಸಮುದಾಯಕ್ಕೆ ಮಾಡಿದ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖಂಡರಾದ ದುಗ್ಗನಹಳ್ಳಿ ನಾಗರಾಜು, ಹಾಡ್ಲಿ ಸುರೇಶ, ಕಿರಣ್ ಶಂಕರ್, ಕಲ್ಕುಣಿ ನಂಜುಂಡಸ್ವಾಮಿ, ಬಿಎಸ್ಪಿ ನಂಜುಂಡಸ್ವಾಮಿ, ಸಿದ್ದರಾಮು , ಕೃಷ್ಣಮೂರ್ತಿ, ರಮೇಶ್ ಸೇರಿದಂತೆ ಇತರರಿದ್ದರು.