ಪ್ರತಿನಿಧಿ ವರದಿ ಕೊಳ್ಳೇಗಾಲ
ತಾಲೂಕಿನ ದೊಡ್ಡಿಂದುವಾಡಿ ಗ್ರಾಮದ ಹೊರ ವಲಯದ ಜಮೀನಿನಲ್ಲಿ ಶುಕ್ರವಾರ ಮೇವು ಮೇಯುತ್ತಿದ್ದ ಕುರಿ ಮೇಲೆರಗಿದ ಚಿರತೆ ರಕ್ತ ಹೀರಿ ಪರಾರಿಯಾಗಿದೆ.
ದೊಡ್ಡಿಂದುವಾಡಿ ಗ್ರಾಮದ ನಿವಾಸಿ ಮಾದೇಶ ಎಂಬುವರಿಗೆ ಮೃತ ಕುರಿ ಸೇರಿದ್ದು, ಸೂಕ್ತ ಪರಿಹಾರ ನೀಡುವಂತೆ ಮಾದೇಶ ಅರಣ್ಯ ಇಲಾಖೆಯನ್ನು ಒತ್ತಾಯಿಸಿದ್ದಾರೆ.
ತಾಲೂಕಿನ ವಿವಿದ ಗ್ರಾಮಗಳಲ್ಲಿ ದಿನ ಕಳೆದಂತೆ ಚಿರತೆ ಹಾವಳಿ ಹೆಚ್ಚಾಗಿದ್ದು, ರೈತರು ಹಾಗೂ ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಹಲವು ದಿನಗಳಿಂದಲೂ ದೊಡ್ಡಿಂದುವಾಡಿ, ಚಿಕ್ಕಿಂದುವಾಡಿ, ಇಕ್ಕಡಹಳ್ಳಿ ಗ್ರಾಮಕ್ಕೆ ತೆರಳುವ ರಸ್ತೆಯಲ್ಲಿರುವ ಜಮೀನುಗಳಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿದೆ. ಅಲ್ಲದೇ, ಅಲ್ಲಲ್ಲಿ ಚಿರತೆ ಮೇಕೆಗಳ ಮೇಲೆ ದಾಳಿ ನಡೆಸುತ್ತಿರುವುದರಿಂದ ಶೀಘ್ರವೇ ಚಿರತೆ ಸೆರೆಗೆ ರೈತರು ಒತ್ತಾಯಿಸಿದ್ದಾರೆ. ಇತ್ತ ಹನೂರು ಬಪರ್ ವಲಯದ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿ ಈಗಾಗಲೇ ಒಂದು ಕಡೆ ಚಿರತೆ ಸೆರೆಗೆ ಬೋನ್ ಇಟ್ಟಿದ್ದರೂ ಚಾಲಾಕಿ ಚಿರತೆ ಬೋನಿಗೆ ಬೀಳದೆೆ ಹೊರಗಡೆ ಓಡಾಡುತ್ತಿದೆ. ಇದಕ್ಕೆ ಪ್ರಮುಖ ಕಾರಣವೊಂದು ತಿಳಿದು ಬಂದಿದ್ದು, ಚಿರತೆ ಸೆರೆಗೆ ಅಧಿಕಾರಿಗಳು ಬೋನಿನೊಳಗೆ ಜೀವಂತ ಪ್ರಾಣಿಯನ್ನು ಇರಿಸದ ಹಿನ್ನೆಲೆ ಚಿರತೆ ಬೋನಿನೊಳಕ್ಕೆ ಬರಲು ಹಿಂದೆಟು ಹಾಕುತ್ತಿದೆ ಎನ್ನಲಾಗಿದೆ.