ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರದ ಮಾಡೇಶ್ವರ ಗ್ರಾಮಸ್ಥರ ನಿದ್ದೆಗೆಡಿಸಿದ್ದ ಚಿರತೆ ಅರಣ್ಯ ಇಲಾಖೆಯ ಬೋನಿಗೆ ಬಿದ್ದಿದ್ದು, ಜನರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಕಳೆದ ಕೆಲ ದಿನಗಳಿಂದ ದೊಡ್ಡಬಳ್ಳಾಪುರದ ಮಾಡೇಶ್ವರ ಗ್ರಾಮದಲ್ಲಿ ಚಿರತೆ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿ ಮಾಡಿತ್ತು.
ಮೇಕೆ ಕುರಿಗಳನ್ನು ತಿಂದು ಹಾಕಿದ್ದ ಚಿರತೆ, ಕೆಲ ಗ್ರಾಮಸ್ಥರ ಮೇಲೂ ದಾಳಿಗೆ ಮುಂದಾಗಿತ್ತು. ಹುಲುಕಡಿ ಬೆಟ್ಟದಲ್ಲಿ ಮೇಯಲು ಹೋದ ಪ್ರಾಣಿಗಳನ್ನು ತಿಂದು ಅಟ್ಟಹಾಸ ಮೆರೆದಿತ್ತು. ಇದ್ರಿಂದ ಬೇಸತ್ತಿದ್ದ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಚಿರತೆ ಸೆರೆ ಹಿಡಿಯುವಂತೆ ಮನವಿ ಮಾಡಿದ್ದರು. ಚಿರತೆ ಸೆರೆಗೆ ಊರ ಹೊರವಲಯದಲ್ಲಿ ಬೋನ್ ಅಳವಡಿಸಲಾಗಿತ್ತು. ಇದೀಗ ಚಿರತೆ ಬೋನಿಗೆ ಬಿದ್ದಿದ್ದು , ಗ್ರಾಮಸ್ಥರ ಆತಂಕ ದೂರವಾಗಿದೆ.