ಮೈಸೂರು: ಇಂದು ಮೈಸೂರು ಜಿಲ್ಲಾ ಪಂಚಾಯತಿಯ ಸಭಾಂಗಣದಲ್ಲಿ ಜಿಲ್ಲಾ ಮಟ್ಟದ ಜನಸ್ಪಂದನ ಕಾರ್ಯಕ್ರಮವನ್ನು ಆಯೋಜಿಲಾಗಿತ್ತು. ಜಿಲ್ಲಾ ಉಸ್ತುವಾರಿ ಸಚಿವ ಡಾ ಹೆಚ್ ಸಿ ಮಹದೇವಪ್ಪ ನೇತೃತ್ವದಲ್ಲಿ ಇಂದಿನ ಜನಸ್ಪಂದನ ಸಭೆ ನಡೆದಿದ್ದು, ಸಭೆಯಲ್ಲಿ ಅಹವಾಲು ನೀಡಲು ದೂರದ ಊರುಗಳಿಂದ ಆಗಮಿಸಿದ್ದ ನೂರಾರು ಸಾರ್ವಜನಿಕರ ಕುಂದುಕೊರತೆಯನ್ನು ಸಚಿವ ಹೆಚ್ ಸಿ ಮಹದೇವಪ್ಪ ಆಲಿಸಿದ್ದಾರೆ. ಇದೇ ವೇಳೆ ರೈತ ದಸರಾ ಮತ್ತು ದಸರಾ ಚಲನ ಚಿತ್ರೋತ್ಸವದ ಪೋಸ್ಟರ್ ನ್ನು ಸಚಿವರು ಬಿಡುಗಡೆ ಮಾಡಿದರು.
ಜಿಲ್ಲಾ ಉಸ್ರುವಾರಿ ಸಚಿವರಿಗಾಗಿ ಕಾಯ್ದು ಸುಸ್ತಾದ ಜನರು.
ಜನಸ್ಪಂದನ ಕಾರ್ಯಕ್ರಮಕ್ಕೆ ಆಗಮಿಸ ಬೇಕಾಗಿದ್ದ ಸಚಿವರಿಗೆ ಕಾದು ಕಾದು ಸಾರ್ವಜನಿಕರು ಹೈರಾಣಾಗಿರುವ ಘಟನೆ ಇಂದು ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದಿದೆ. ಮೈಸೂರು ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಆಯೋಜಿಸಿದ್ದ ಜನಸ್ಪಂದನ ಕಾರ್ಯಕ್ರಮ ಬೆಳಿಗ್ಗೆ 11 ಗಂಟೆಗೆ ಆರಂಭವಾಗಬೇಕಿತ್ತು. ಆದರೆ ಸಚಿವರು ಮಾತ್ರ ಸರಿಯಾದ ಸಮಯಕ್ಕೆ ಆಗಮಿಸದ್ದಕ್ಕೆ ಕಾದು ಕಾದು ಸುಸ್ತಾಗಿದ್ದಾರೆ. ಯಾವುದೇ ಕಾರ್ಯಕ್ರಮಕ್ಕೂ ತುಂಬಾ ತಡವಾಗಿ ಆಗಮಿಸುವ ಸಚಿವ ಮಹದೇವಪ್ಪ ಇಂದೂ ಕೂಡ ಜನಸ್ಪಂದನ ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ್ದಾರೆ. 12:30ಕ್ಕೆ ಸಚಿವರು ಆಗಮಿಸಿದ ನಂತರ ಸಭೆ ಪ್ರಾರಂಭವಾಗಿದೆ.
ಸಭೆಯಲ್ಲಿ ಎಂಎಲ್ ಸಿ ಮಂಜೇಗೌಡ, ಮುಡಾ ಅಧ್ಯಕ್ಷ ಮರೀಗೌಡ, ಜಿಲ್ಲಾಧಿಕಾರಿ ಲಕ್ಷ್ಮಿಕಾಂತರೆಡ್ಡಿ, ಜಿಲ್ಲಾ ಪಂಚಾಯತಿ ಸಿಇಒ ಗಾಯತ್ರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಸೇರಿದಂತೆ ಜಿಲ್ಲಾ ಮಟ್ಟದ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದರು.