– ಬಿಜೆಪಿ ವಿರುದ್ಧ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಕಿಡಿ
– ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಸಿಂಹ
ಪ್ರತಿನಿಧಿ ವರದಿ ಮೈಸೂರು
ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ರಾಜಕೀಯ ಗುದ್ದಾಟಕ್ಕೆ ಕಾರಣವಾಗಿರುವ ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಎರಡು ಪಕ್ಷಗಳ ನಾಯಕರ ಜಟಾಪಟಿ ಮುಂದುವರಿದಿದೆ. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ತಪ್ಪಿತಸ್ಥರು ಎಂದು ಬಿಂಬಿಸುವ ಪ್ರಯತ್ನ ನಡೆದಿದೆ ಎಂದು
ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಆರೋಪಿಸಿದ್ದರೆ. ಬಹುಕೋಟಿ ಹಗರಣದ ಕುರಿತು ಮೊದಲ ಬಾರಿಗೆ ಪ್ರತಿಕ್ರಿಯಿಸಿರುವ ಮಾಜಿ ಸಂಸದ ಪ್ರತಾಪ್, ಹಗರಣದ ತನಿಖೆ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.
ತಪ್ಪಿತಸ್ಥರೆಂದು ಬಿಂಬಿಸುವ ಯತ್ನ:
ನಗರ ಕಾಂಗ್ರೆಸ್ ಕಚೇರಿಯಲ್ಲಿ ಸೋಮವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್, ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರನ್ನು ತಪ್ಪಿತಸ್ಥರು ಎಂದು ಬಿಂಬಿಸುವ ಪ್ರಯತ್ನ ಆಗುತ್ತಿದೆ. ಬಿಜೆಪಿ ನಾಯಕರು ಮಲ್ಲಿಕಾರ್ಜುನಸ್ವಾಮಿ ಮೂಲಕ ಜಿಲ್ಲಾಧಿಕಾರಿ ಅವರಿಗೆ ದೂರು ಕೊಡಿಸಿದ್ದಾರೆ. ಆದರೆ ಮುಡಾ ಹಗರಣದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ನಾಯಕರ ಪಾತ್ರವೇ ಹೆಚ್ಚಿದ್ದು, ಎಚ್.ಡಿ.ಕುಮಾರಸ್ವಾಮಿ ಕೂಡ ಮುಡಾದಲ್ಲಿ ಬದಲಿ ನಿವೇಶನ ಪಡೆದಿದ್ದಾರೆ. ಅವರು ಯಾವ ರೀತಿ ಪಡೆದಿದ್ದಾರೆ ಎಂಬುದನ್ನು ದಾಖಲೆ ಸಮೇತ ಸಾಬೀತುಪಡಿಸುತ್ತೇನೆ. ಅಲ್ಲದೇ ಮುಡಾ ಹಗರಣದಲ್ಲಿ ಬಿ.ವೈ. ವಿಜಯೇಂದ್ರ ಪಾಲು ಕೂಡ ಇದೆ. ಯಡಿಯೂರಪ್ಪನವರ ಅಕ್ಕನ ಮಗನ ಮುಖಾಂತರ ವಿಜಯೇಂದ್ರ ಅಕ್ರಮ ಎಸಗಿದ್ದಾರೆ. ಆದರೆ ಇದೀಗ ಸಿದ್ದರಾಮಯ್ಯ ವಿರುದ್ಧ ವಿನಾಕಾರಣ ಆರೋಪ ಮಾಡುತ್ತಿದ್ದು, ತಮ್ಮ ತಪ್ಪನ್ನು ಮುಚ್ಚಿಕೊಳ್ಳಲು ಸಿದ್ದರಾಮಯ್ಯ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಯದುವೀರ್ ವಿರುದ್ಧ ವಾಗ್ದಾಳಿ:
ಸಂಸದ ಯದುವೀರ್ ಒಡೆಯರ್ ಅವರ ವಿರುದ್ಧ ಕಿಡಿಕಾರಿದ ಅವರು, ಮೈಸೂರು-ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ. ಕೊಡಗು ಸೇರಿದಂತೆ ಅನೇಕ ಕಡೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಮಡಿಕೇರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುಡ್ಡ ಕುಸಿದಿದೆ. ನಾನು ಸೋತಿದ್ದರೂ ಕೂಡ 40ಕ್ಕೂ ಹೆಚ್ಚು ಸ್ಥಳಗಳಿಗೆ ಭೇಟಿ ಕೊಟ್ಟಿದ್ದೇನೆ. ಸಂಸದರು ಯಾಕೆ ಹಾನಿಯಾದ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಪ್ರಶ್ನಿಸಿದರು. ದಿಶಾ ಸಭೆ ನಡೆಸಿ ಸನ್ಮಾನ ಸ್ವೀಕರಿಸಿ ಬಂದಿದ್ದು ಆಯ್ತು. ರೈಲ್ವೆ ನಿಲ್ದಾಣಕ್ಕೆ ಭೇಟಿ ನೀಡಿ ಫೋಟೋ ಸೆಷನ್ ಮಾಡಿಸಿದರು. ಬಿಜೆಪಿ ನಾಯಕರ ಜೊತೆ ಸೇರಿಕೊಂಡು ಕಸ ಆಯ್ದು ಫೋಟೋಗೆ ಪೋಸ್ ಕೊಟ್ಟಾಯ್ತು ಎಂದು ಟೀಕಿಸಿದ ಅವರು, ಎನ್.ಆರ್.ಕ್ಷೇತ್ರದಲ್ಲೂ ನಿಮಗೆ 65 ಸಾವಿರ ಮತ ನೀಡಿದ್ದು, ಇತ್ತ ಕಡೆಗೂ ಗಮನಹರಿಸಿ. ಜೊತೆಗೆ ಅಭಿವೃದ್ಧಿ ಕಡೆಗೂ ಗಮನ ಕೊಡಿ ಎಂದು ಹೇಳಿದರು.
======================
ಬಾಕ್ಸ್
ತನಿಖೆಯಿಂದ ಏನೂ ಆಗಲ್ಲ: ಪ್ರತಾಪ್ ಸಿಂಹ
ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯಿಂದ ಯಾರಿಗೂ ಏನು ಆಗಲ್ಲ, ಎಲ್ಲರೂ ಸೇಫ್ ಆಗುತ್ತಾರೆ ಎಂದು ಮಾಜಿ ಸಂಸದ ಪ್ರತಾಪ್ ಸಿಂಹ ದೂರಿದರು. ಮುಡಾ ಹಗರಣದ ಕುರಿತಾಗಿ ಇದೇ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮುಡಾ ವಿಚಾರದ ಕುರಿತು ಈಗ ನಡೆಯುತ್ತಿರುವ ತನಿಖೆಯಿಂದ ಯಾವ ಪ್ರಯೋಜನವೂ ಇಲ್ಲ, ಸೈಟ್ ಪಡೆದವರು, ಮಾರಿದವರು ಎಲ್ಲರೂ ಸೇಫ್. ಯಾರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ. 2019ರಲ್ಲಿ ಸೋಮಣ್ಣ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾಗ ಮುಡಾದ 7600 ಖಾಲಿ ನಿವೇಶನಗಳ ಹಾರಾಜಿಗೆ ಮುಂದಾಗಿದ್ದ ವೇಳೆ ಅವರಿಗೆ ಗೇಟ್ ಪಾಸ್ ಸಿಕ್ಕಿತು. ಮುಡಾ ಆಯುಕ್ತ ಕಾಂತರಾಜು ಅವರಿಗೂ ಗೇಟ್ ಪಾಸ್ ಲಭಿಸಿತು. ಇದು ಮುಡಾದ ವ್ಯವಸ್ಥೆಯಾಗಿದೆ. ಹೀಗಾಗಿ ಸಿದ್ದರಾಮಯ್ಯ ಅವರ ಕಾಲದಲ್ಲಾದರೂ ಇದು ಕ್ಲೀನ್ ಆಗುತ್ತೆ ಅಂದುಕೊಂಡೆ. ಆದರೆ, ಕಳೆದ ನಾಲ್ಕು ವರ್ಷಗಳಿಂದ ಈ ಹಗರಣ ನಡೆದೇ ಇದೆ ಎಂದು ಬೇಸರ ವ್ಯಕ್ತಪಡಿಸಿದರು.
ಅಭಿಮಾನ, ನಂಬಿಕೆ ಹೋಗಿದೆ:
ಸಿಎಂ ಸಿದ್ದರಾಮಯ್ಯ ಸಾಹೇಬರ ಬಗ್ಗೆ ನನಗೆ ಸೈದ್ದಾಂತಿಕವಾಗಿ ವಿರೋಧವಿದೆ ಅಷ್ಟೇ. ಅಭಿವೃದ್ಧಿ ವಿಚಾರದ ಬಗ್ಗೆ ನಾನು ಮಾತನಾಡುವುದಿಲ್ಲ. ಅವರು ತಮಗೆ ಬಂದ ಸೈಟ್ಗಳನ್ನು ವಾಪಸ್ ಕೊಟ್ಟು ತನಿಖೆ ಮಾಡಿಸುತ್ತಾರೆಂದು ನಂಬಿದ್ದೆ. ಆದರೆ ಆ ರೀತಿ ಮಾಡದೇ 62 ಕೋಟಿ ಪರಿಹಾರ ಕೇಳಿದ್ದಾರೆ. ಇದರಿಂದ ನನಗೆ ಸಿದ್ದರಾಮಯ್ಯ ಮೇಲಿದ್ದ ನಂಬಿಕೆಯನ್ನು ಹುಸಿಗೊಳಿಸಿ, ನಿರಾಸೆ ಮೂಡಿಸಿದೆ. ಜೊತೆಗೆ ಸಿಎಂ ಮೇಲೆ ಇದ್ದ ಅಭಿಮಾನವೂ ಕೂಡ ಈ ಪ್ರಕರಣದಿಂದ ಕಡಿಮೆಯಾಗಿದೆ ಎಂದರು.
4 ಸಾವಿರ ಕೋಟಿಯ ಹಗರಣ:
ಇದು ಬರೀ 400, 500 ಕೋಟಿ ಹಗರಣ ಅಲ್ಲ. 3 ರಿಂದ 4 ಸಾವಿರ ಕೋಟಿಯ ಹಗರಣ. ಇದನ್ನು ತನಿಖೆ ಮಾಡಿಸಿ ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯುವ ಮನಸ್ಥಿತಿ ಸಿದ್ದರಾಮಯ್ಯ ಅವರಿಗೆ ಇಲ್ಲ. ನಾಲ್ಕು ದಿನ ಮಾಧ್ಯಮದಲ್ಲಿ ಬಂದಿದ್ದು ಅಷ್ಟೇ ಸರಿ. ಇದರಲ್ಲಿರುವ ದೊಡ್ಡ ಭ್ರಷ್ಟಚಾರಿಗಳು, ಸೈಟನ್ನು ಮಾರಾಟ ಮಾಡಿದವರು ಯಾರೂ ಸಿಕ್ಕಿ ಬೀಳವುದಿಲ್ಲ, ಎಲ್ಲರೂ ಆರಾಮವಾಗಿಯೇ ಇರಿ ಎಂದು ಸೂಚ್ಯವಾಗಿ ಹೇಳಿದರು.
==================
ಕೋಟ್
ಸಿದ್ದರಾಮಯ್ಯ ಅವರನ್ನು ಭ್ರಷ್ಟಾಚಾರಿ ಎಂದು ಹೇಳಲ್ಲ. ಆದರೆ 14 ಸೈಟ್ ವಿಚಾರದಲ್ಲಿ ಅವರು ನಡೆದುಕೊಂಡ ರೀತಿ ಬೇಸರ ತರಿಸಿದೆ. ಸಿದ್ದರಾಮಯ್ಯ ಅವರು ಸೈಟ್ಗಳನ್ನು ವಾಪಸ್ ಕೊಟ್ಟು ತನಿಖೆ ಮಾಡಿಸಬೇಕಿತ್ತು. ಬಿಜೆಪಿ ಆಡಳಿತದಲ್ಲೂ ಮಣ್ಣು ತಿನ್ನುವ ಕೆಲಸವಾಗಿದ್ದು, ಎಲ್ಲವನ್ನೂ ಸೇರಿಸಿ ತನಿಖೆ ಮಾಡಿಸಬೇಕಿತ್ತು.
ಪ್ರತಾಪ್ ಸಿಂಹ, ಮಾಜಿ ಸಂಸದ
===================
ಪ್ರತಾಪ್ ಸಿಂಹ ಮಗ್ಶಾಟ್ ಫೋಟೋ ಬಳಸಿ(ಮತ್ತೊಂದು ಸುದ್ದಿಗೆ)